ದುನಿಯಾ ವಿಜಯ್ ವಿರುದ್ಧ ಹೇಳಿಕೆ ನೀಡಿದ ಹಲ್ಲೆಗೊಳಗಾದ ಮಾರುತಿ
ಬೆಂಗಳೂರು, ಸೆಪ್ಟೆಂಬರ್ 23: ನಟ ದುನಿಯಾ ವಿಜಯ್ ಅವರು ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದ್ದಾರೆ. ಕಿಡ್ನಾಪ್ ಹಾಗೂ ಹಲ್ಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಒದೆ ತಿಂದ ಸಂತ್ರಸ್ತ ಮಾರುತಿ ಎಂಬುವರು ವಿಜಯ್ ವಿರುದ್ಧ ಹೇಳಿಕೆ ನೀಡಿದ್ದಾರೆ.
ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿದ್ದ ಮಾರುತಿ ಗೌಡ ಎಂಬುವರ ಮೇಲೆ ಹಲ್ಲೆ ನಡೆಸಿ, ಕಿಡ್ನಾಪ್ ಮಾಡಿದ್ದಾರೆ.
ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿ ಎಂಬುವರ ಮೇಲೆ ಹಲ್ಲೆ ನಡೆದಿದ್ದರ ಬಗ್ಗೆ ಮಾರುತಿ ಅವರ ಸ್ನೇಹಿತ ಶಿರೀಷ್ ಎಂಬುವರು ಸಂಬಂಧಿಕರಿಗೆ ತಿಳಿಸಿದ್ದಾರೆ. ನಂತರ ಪಾನಿಪೂರಿ ಕಿಟ್ಟಿ ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಗೂಂಡಗಿರಿ ಪ್ರಕರಣ: ದುನಿಯಾ ವಿಜಯ್ ಬಂಧನ, ಬೇಲ್ ಮೇಲೆ ರಿಲೀಸ್
ಪಾನಿಪೂರಿ ಕಿಟ್ಟಿ ಹಾಗೂ ದುನಿಯಾ ವಿಜಯ್ ಸಹಚರ ಪ್ರಸಾದ್ ಎಂಬುವರ ಮನಸ್ತಾಪವೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಸದ್ಯ ಗಾಯಗೊಂಡಿರುವ ಮಾರುತಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಹೇಳಿಕೆ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಲಿದೆ. ಮಾರುತಿ ನೀಡಿರುವ ಹೇಳಿಕೆ ಏನು? ದುನಿಯಾ ವಿಜಯ್ ಪ್ರತಿಕ್ರಿಯೆ ಹೇಗಿದೆ? ಇದಕ್ಕೆಲ್ಲ ಏನು ಕಾರಣ? ಮುಂದೆ ಓದಿ...
ವಿಜಯ್ ಆರೋಪಿ ನಂಬರ್ 02
ಹೈಗ್ರೌಂಡ್ ಪೊಲೀಸರು, ಐಪಿಸಿ ಸೆಕ್ಷನ್ 323, 342, 325 ಹಾಗೂ 506 ಸೇರಿದಂತೆ ಅನೇಕ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಪ್ರಸಾದ್ ಎಂಬುವರು ಆರೋಪಿ ನಂ 1 ಆಗಿದ್ದು, ದುನಿಯಾ ವಿಜಯ ನಂ 2, ಮಣಿ ಆರೋಪಿ ನಂ 3, ವಿಜಿ ಅವರ ಕಾರು ಚಾಲಕ ಪ್ರಸಾದ್ ಆರೋಪಿ ನಂ 4 ಆಗಿದ್ದಾರೆ. ಎಫ್ಐಆರ್ ಹಾಕಲಾಗಿದ್ದು, ಇಂದು ಕೋರ್ಟ್ ರಜೆ ಇರುವುದರಿಂದ, ಜಡ್ಜ್ ಅವರ ಮನೆಗೆ ತೆರಳಿ, ಅವರ ಮುಂದೆ ಆರೋಪಿಗಳನ್ನು ಹಾಜರು ಪಡಿಸುವ ಸಾಧ್ಯತೆಯಿದೆ.
ಹಲ್ಲೆಗೊಳಗಾದ ಮಾರುತಿ ಅವರ ಹೇಳಿಕೆ
ಈ ಪ್ರಕರಣದಲ್ಲಿ ದುನಿಯಾ ವಿಜಯ್ ಅವರು ನೇರವಾಗಿ ಭಾಗಿಯಾಗಿಲ್ಲ. ಅವರ ಹುಡುಗರು ಹಳೆ ದ್ವೇಷ ತೀರಿಸಿಕೊಳ್ಳಲು ಪಾನಿಪೂರಿ ಕಿಟ್ಟಿ ಅವರ ಸಂಬಂಧಿಕ ಮಾರುತಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂತ್ರಸ್ತ ಮಾರುತಿ,
'ದುನಿಯಾ ವಿಜಿ ಅವರು ಬಾಡಿ ಬಿಲ್ಡರ್ ಪ್ರಸಾದ್, ಮಣಿ ಹಾಗೂ ಡ್ರೈವರ್ ಪ್ರಸಾದ್ ಅವರು ನನ್ನ ಮೇಲೆ ಒಂದೂವರೆ ಗಂಟೆ ಹಲ್ಲೆ ಮಾಡಿದ್ದಾರೆ. ನನಗೆ ಮಾತನಾಡೋಕೆ ಆಗುತ್ತಿಲ್ಲ' ಎಂದು ಆಸ್ಪತ್ರೆಯಲ್ಲಿ ಬೆಡ್ ಮೇಲೆ ಮಲಗಿಕೊಂಡು ಹೇಳಿದ್ದಾರೆ.
ನಾನೇನು ತಪ್ಪು ಮಾಡಿಲ್ಲ ಎಂದ ದುನಿಯಾ ವಿಜಯ್
ನಾನೇನು ತಪ್ಪು ಮಾಡಿಲ್ಲ: ಆದರೆ, ಈ ಬಗ್ಗೆ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ನಟ ವಿಜಯ್, ನಾನೇನು ತಪ್ಪು ಮಾಡಿಲ್ಲ, ಪದೇ ಪದೇ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಗಲಾಟೆ ನಡೆದಾಗ ಅಲ್ಲಿ ಇದ್ದಿದ್ದು ನಿಜ, ನಾನು ಹಲ್ಲೆ ತಪ್ಪಿಸಲು ಯತ್ನಿಸಿದೆ. ಸುಳ್ಳು ಸಾಕ್ಷಿಗಳನ್ನು ದೊಡ್ಡದು ಮಾಡಲಾಗುತ್ತಿದೆ. ತಪ್ಪು ಮಾಡದೆ ಮ್ಯಾಜಿಸ್ಟ್ರೇಟ್ ಅವರ ಮುಂದೆ ನಿಲ್ಲಲು ನಾಚಿಕೆಯಾಗುತ್ತದೆ.
ಪಾನಿಪೂರಿ ಕಿಟ್ಟಿ ಹೇಳಿಕೆ
ಪಾನಿಪೂರಿ ಕಿಟ್ಟಿ ಹಾಗೂ ದುನಿಯಾ ವಿಜಯ್ ಸಹಚರ ಪ್ರಸಾದ್ ಎಂಬುವರ ಮನಸ್ತಾಪವೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ನನಗೂ ದುನಿಯಾ ವಿಜಯ್ ಗೂ ಯಾವುದೇ ಮನಸ್ತಾಪವಿಲ್ಲ. ನಾನು ವಿಜಿ ಇಬ್ಬರೂ ಒಟ್ಟಿಗೆ ಬಾಡಿ ಬಿಲ್ಡಿಂಗ್ ಮಾಡುತ್ತಿದ್ದೆವು. ಆದರೆ, ವಿಜಯ್ ಜತೆಗಿರುವ ಪ್ರಸಾದ್ ನನ್ನ ವಿರುದ್ಧ ಹೇಳಿಕೊಟ್ಟಿದ್ದಾನೆ. ನಾವು ಜಗಳವಾಡಿಲ್ಲ ಎಂದು ಪಾನಿಪೂರಿ ಕಿಟ್ಟಿ ಹೇಳಿದ್ದಾರೆ.
ಮತ್ತೊಂದು ಪ್ರಕರಣಕ್ಕೆ ಬಯಲಿಗೆ
ನಿವೃತ್ತ ಯೋಧ ವೆಂಕಟೇಶ್ ಅವರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ದುನಿಯಾ ವಿಜಯ್ ಅವರ ಭಾವನ ಕಡೆಯವರಿಂದ ಹಣಕಾಸು ವ್ಯವಹಾರ ನಡೆಸಿದ್ದರು. ಹಣ ಕೇಳಲು ವೆಂಕಟೇಶ್ ಮನೆಗೆ ಹೋಗಿದ್ದ ವಿಜಯ್ ಅವರು ಅವರನ್ನು ನಿಂದಿಸಿ, ಬೂಟು ಕಾಲಿನಿಂದ ಒದ್ದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.