ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ದುಡ್ಡು ಕೊಟ್ಟು ಊರಿಗೆ ಹೋಗು ಅಂದಿದ್ದೆ ಎಂದ ದರ್ಶನ್
ಬೆಂಗಳೂರು, ಜೂನ್ 14: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-೧ ಆರೋಪಿ ಪವಿತ್ರಾ ಗೌಡ, ನಟ ದರ್ಶನ್ ಸೇರಿದಂತೆ ಈಗಾಗಲೇ ಹದಿನೈದು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಸ್ಥಳ ಮಹಜರು ಸೇರಿದಂತೆ ಇತರೆ ವಿಚಾರಣೆಗಳು ಪೂರ್ಣಗೊಂಡಿದ್ದು, ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳನ್ನು ಆರು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು ನಟ ದರ್ಶನನ್ನು ಕೂಡ ತೀವ್ರ ವಿಚಾರಣೆ ನಡೆಸುತ್ತಿದ್ದು, ಹೇಳಿಕೆ ದಾಖಲಿಸಿಕೊಂಡಿದ್ದಾರೆ.' ಪವನ್ ಎನ್ನುವವನಿಂದ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿರೋದು ಗೊತ್ತಾಯ್ತು. ಅದಕ್ಕೆ ರೇಣುಕಾಸ್ವಾಮಿಯನ್ನು ಕರೆತರುವಂತೆ ರಾಘವೇಂದ್ರನಿಗೆ ಸೂಚಿಸಿದೆ. ಶನಿವಾರ ಸಂಜೆ ರೇಣುಕಾಸ್ವಾಮಿಯನ್ನು ಶೆಡ್ನಲ್ಲಿ ಭೇಟಿಯಾದೆ. ಇನ್ನೊಂದು ಸಲ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿದರೆ ಸರಿ ಇರಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದೇನೆ. ಬಳಿಕ ದುಡ್ಡು ಕೊಟ್ಟು ಊಟ ಮಾಡಿಕೊಂಡು ಊರು ಸೇರುವಂತೆ ಹೇಳಿ ಹೊರಟು ಹೋದೆ. ನಾನು ಈ ಕೊಲೆಯನ್ನು ಮಾಡಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಪ್ರಕರಣದ ಎರಡನೇ ಆರೋಪಿ ದರ್ಶನ್ ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗಿದೆ.

ಪೊಲೀಸರ ಮುಂದೆ ಆರೋಪಿ ಪವಿತ್ರ ಗೌಡ ಹೇಳಿಕೆ ಏನು..?
ಪ್ರಕರಣದ ಎ-೧ ಆರೋಪಿಯಾಗಿರುವ ಪವಿತ್ರ ಗೌಡ ಪೊಲೀಸರ ವಿಚಾರಣೆ ವೇಳೆ ಸಿಕ್ಕಾಪಟ್ಟೆ ಕಣ್ಣೀರಿಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿ ಕೊಲೆ ನಡೆದಿದೆ ಎನ್ನುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಹೀಗಾಗಿ ಪವಿತ್ರಾ ಗೌಡರನ್ನ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಮೂಲಗಳ ಮಾಹಿತಿ ಪ್ರಕಾರ, ಪ್ರಕರಣದ ಮೊದಲ ಆರೋಪಿ ಪವಿತ್ರ ಗೌಡ ಪೊಲೀಸರ ವಿಚಾರಣೆ ವೇಳೆ ಕೆಲವು ಮಹತ್ವದ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ. 'ನನಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ಗಳನ್ನು ಮಾಡುತ್ತಿದ್ದ. ಇದನ್ನು ನಾನು ಮನೆ ಕೆಲಸದವ ಪವನ್ಗೆ ಕಳುಹಿಸಿದ್ದೆ. ಅವನಿಗೆ ಕಳುಹಿಸುವ ಮೊದಲು ಈ ವಿಚಾರ ದರ್ಶನ್ಗೆ ಗೊತ್ತಾಗಬಾರದು ಎಂದು ಹೇಳಿದ್ದೆ. ದರ್ಶನ್ಗೆ ಗೊತ್ತಾದರೆ ಏನಾದರೂ ಅನಾಹುತ ಆಗಬಹುದು ಅಂತಲೂ ಹೇಳಿದ್ದೆ. ನನಗೆ ಕೊಲೆ ಮಾಡುತ್ತಾರೆ ಎನ್ನುವ ಕಲ್ಪನೆಯೂ ಇರಲಿಲ್ಲ. ಕೆಟ್ಟದಾಗಿ ಮೆಸೇಜ್ ಮಾಡಿದ ಎಂದು ಚಪ್ಪಲಿಯಲ್ಲಿ ಹೊಡೆದು ವಾಪಸ್ ಬಂದೆ' ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications