ಕಂಟೇನ್ಮೆಂಟ್ ಝೋನ್ ಗಳಲ್ಲೇ ಬಂಧಿಯಾಗುತ್ತಿದೆಯಾ ಬೆಂಗಳೂರು?
ಬೆಂಗಳೂರು, ಆಗಸ್ಟ್.10: ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯ ಜೊತೆಗೆ ಕಂಟೇನ್ಮೆಂಟ್ ಝೋನ್ ಗಳ ಸಂಖ್ಯೆಯಲ್ಲೂ ಭಾರಿ ಏರಿಕೆ ಕಂಡು ಬರುತ್ತಿದೆ. ವಾರದ ಆರಂಭದಲ್ಲಿ ಕಂಟೇನ್ಮೆಂಟ್ ಝೋನ್ ಸಂಖ್ಯೆ ಕೊಂಚ ಇಳಿಮುಖವಾಗಿತ್ತು.
Recommended Video
ಕಳೆದ ಶುಕ್ರವಾರ ಬೆಂಗಳೂರಿನಲ್ಲಿ 13386 ಕಂಟೇನ್ಮೆಂಟ್ ಝೋನ್ ಗಳಿದ್ದವು. ಅದಾಗಿ ಎರಡೇ ದಿನದಲ್ಲಿ ಅಂದರೆ ಭಾನುವಾರದ ವೇಳೆಗೆ ಕಂಟೇನ್ಮೆಂಟ್ ಝೋನ್ ಗಳ ಸಂಖ್ಯೆಯು 14010ಕ್ಕೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾದ 152 ದಿನಗಳಲ್ಲಿ ಸಿಲಿಕಾನ್ ಸಿಟಿಯೊಂದರಲ್ಲೇ ಒಟ್ಟು 28716 ಕಂಟೇನ್ಮೆಂಟ್ ಝೋನ್ ಗಳು ಪತ್ತೆಯಾಗಿದ್ದವು. ಈ ಪೈಕಿ 14706 ಕಂಟೇನ್ಮೆಂಟ್ ಝೋನ್ ಗಳ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳಿವೆ ಎಂದು ವರದಿಯಾಗಿದೆ.

ಪೂರ್ವ ವಿಭಾಗದ ಜನರ ದಿಕ್ಕು ತಪ್ಪಿಸಿದ ಕೊವಿಡ್-19
ಬೆಂಗಳೂರಿನ ಪೂರ್ವ ವಿಭಾಗದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಬೆಂಗಳೂರು ಪೂರ್ವ ವಿಭಾಗದಲ್ಲೇ 2802 ಸಕ್ರಿಯ ಕಂಟೇನ್ಮೆಂಟ್ ಝೋನ್ ಗಳು ಪತ್ತೆಯಾಗಿದ್ದು, ಬೆಂಗಳೂರು ದಕ್ಷಿಣ ವಿಭಾಗದಲ್ಲಿ 2726, ಪಶ್ಚಿಮ ವಿಭಾಗದಲ್ಲಿ 2349, ಬೊಮ್ಮನಹಳ್ಳಿ 2226, ಮಹಾದೇವಪುರ 1297, ಆರ್ ಆರ್ ನಗರ 1205, ಯಲಹಂಕ 762, ದಾಸರಹಳ್ಳಿ 643 ಕಂಟೇನ್ಮೆಂಟ್ ಝೋನ್ ಗಳು ಪತ್ತೆಯಾಗಿವೆ.

ಸಿಲಿಕಾನ್ ಸಿಟಿಯಲ್ಲಿ ಕಂಟೇನ್ಮೆಂಟ್ ಝೋನ್ ಗಳು
ಬೆಂಗಳೂರಿನಲ್ಲಿ ಬಹುತೇಕ ಕಂಟೇನ್ಮೆಂಟ್ ಝೋನ್ ಗಳನ್ನು ಎ ವಿಭಾಗವಾಗಿ ವರ್ಗೀಕರಿಸಲಾಗಿದೆ. ಎ ವಿಭಾಗ ಎಂದರೆ ಈ ಕಂಟೇನ್ಮೆಂಟ್ ಝೋನ್ ಬೀದಿಯಲ್ಲಿರುವ ಮನೆಯಲ್ಲಿ ಒಬ್ಬರು ಕೊರೊನಾವೈರಸ್ ಸೋಂಕಿತರು ಇರುತ್ತಾರೆ. ಇದರ ಜೊತೆಗೆ 'ಎಪಿ' ವಿಭಾಗ ಅಂದರೆ ಅಪಾರ್ಟ್ ಮೆಂಟ್ ಕಾಂಪ್ಲೆಂಕ್ಸ್ ವಿಭಾಗವಾಗಿ ವಿಂಗಡಿಸಲಾಗಿದೆ. ಹಾಗೆಂದರೆ ಕೊರೊನಾವೈರಸ್ ಸೋಂಕಿತ ವ್ಯಕ್ತಿಯುವ ವಾಸವಿರುವ ಮನೆಯ ಮೇಲಿನ ಮಹಡಿ ಮತ್ತು ಕೆಳಗಿನ ಮಹಡಿಯನ್ನು ಅಧಿಕಾರಿಗಳು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಿ ಮೊಹರು ಮಾಡಿರುತ್ತಾರೆ.

ರಾಜ್ಯದಲ್ಲಿ ಒಂದೇ ದಿನ 5985 ಜನರಿಗೆ ಕೊರೊನಾವೈರಸ್
ರಾಜ್ಯದಲ್ಲಿ ಒಂದೇ ದಿನ 5985 ಮಂದಿಗೆ ಕೊವಿಡ್-19 ಸೋಂಕು ಪತ್ತೆಯಾಗಿದೆ. ಬೆಂಗಳೂರಿನಲ್ಲೇ 1948 ಮಂದಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಕರ್ನಾಟಕದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 178087ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 4670 ಕೊರೊನಾವೈರಸ್ ಸೋಂಕಿತರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ ರಾಜ್ಯದಲ್ಲಿ 93908 ಮಂದಿ ಗುಣಮುಖರಾಗಿದ್ದಾರೆ. ಮಹಾಮಾರಿಗೆ ರಾಜ್ಯದಲ್ಲಿ ಒಂದೇ ದಿನ 107 ಮಂದಿ ಸಾವನ್ನಪ್ಪಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 3198ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಒಟ್ಟು 80973 ಸಕ್ರಿಯ ಪ್ರಕರಣಗಳಿರುವುದು ವರದಿಯಾಗಿದೆ.

ರಾಜ್ಯದ 30 ಜಿಲ್ಲೆಗಳಲ್ಲಿನ ಸೋಂಕಿತರ ಅಂಕಿ-ಸಂಖ್ಯೆ
ಬೆಂಗಳೂರಿನಲ್ಲಿ ಒಂದೇ ದಿನ 1948 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆಯು 74185ಕ್ಕೆ ಏರಿಕೆಯಾಗಿದೆ. ಒಂದೇ ದಿನ 22 ಜನರು ಕೊವಿಡ್-19ಗೆ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1240ಕ್ಕೆ ಏರಿಕೆಯಾಗಿದೆ. ಮೈಸೂರು 455, ಬಳ್ಳಾರಿ 380, ಉಡುಪಿ 282, ಬೆಳಗಾವಿ 235, ರಾಯಚೂರು 202, ಧಾರವಾಡ 196, ಕಲಬುರಗಿ 194, ಹಾಸನ 168, ದಾವಣಗೆರೆ 158, ಬಾಗಲಕೋಟೆ 149, ಶಿವಮೊಗ್ಗ 149, ದಕ್ಷಿಣ ಕನ್ನಡ 132, ವಿಜಯಪುರ 129, ಗದಗ 114, ಚಿಕ್ಕಮಗಳೂರು - 113, ಕೊಪ್ಪಳ 106, ಚಿತ್ರದುರ್ಗ 98, ಬೆಂಗಳೂರು ಗ್ರಾಮಾಂತರ 95, ಯಾದಗಿರಿ 91, ಕೋಲಾರ 87, ಹಾವೇರಿ 80, ತುಮಕೂರು 78, ಬೀದರ್ 70, ಮಂಡ್ಯ 63, ಉತ್ತರ ಕನ್ನಡ 59, ಚಿಕ್ಕಬಳ್ಳಾಪುರ 47, ಚಾಮರಾಜನಗರ 47, ರಾಮನಗರ 38, ಕೊಡಗು 22 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.












Click it and Unblock the Notifications