ಮನೆ ಕಟ್ಟಲು ಎರಡು ಲಕ್ಷ ರೂ. ಲಂಚ ಪಡೆದು ಜೈಲಿಗೆ ಹೋದ ಬಿಡಿಎ ಇಂಜಿನಿಯರ್!
ಬೆಂಗಳೂರು, ಅ. 26: ಹಳೇ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲು ಸರ್ವೆಯರ್ ಮೂಲಕ ಎರಡು ಲಕ್ಷ ರೂ. ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದ ಬಿಡಿಎ ಇಂಜಿನಿಯರ್ ಹಾಗೂ ಸರ್ವೆಯರ್ ನನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಿಡಿಎ ಸಹಾಯಕ ಇಂಜಿನಿಯರ್ ಮಂಜುನಾಥ್ ಅವರ ನಾಗರಬಾವಿ ನಿವಾಸದ ಮೇಲೆ ದಾಳಿ ನಡೆಸಿದ ಎಸಿಬಿ ಪೊಲೀಸರು ಮೂರು ಲಕ್ಷ ರೂ. ನಗದು ಎರಡು ಆಸ್ತಿಗೆ ಸಂಬಂಧಿಸಿದ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಡಿಎ ಇಂಜಿನಿಯರ್ ಮಂಜುನಾಥ್ ಎರಡು ಲಕ್ಷ ರೂ. ಲಂಚ ಸ್ವೀಕರಿಸಿದ ಹಿನ್ನೆಲೆಯಲ್ಲಿ ಎಸಿಬಿ ಮೇಲಾಧಿಕಾರಿಗಳು ನೀಡಿದ ಸೂಚನೆ ಮೇರೆಗೆ ಎಸಿಬಿ ಅಧಿಕಾರಿಗಳು ನಾಗರಬಾವಿ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಈ ವೇಳೆ ಮೂರು ಲಕ್ಷ ರೂ. ನಗದು ಹಣ ಪತ್ತೆಯಾಗಿದೆ. ಮಾತ್ರವಲ್ಲ ಆಸ್ತಿಗಳಿಗೆ ಸಂಬಂಧಿಸಿದಂತೆ ಎರಡು ದಾಖಲೆ ಪ್ರಮಾಣ ಪತ್ರಗಳು ಸಿಕ್ಕಿದ್ದು, ಆರೋಪಿತ ಅಧಿಕಾರಿಯ ಬ್ಯಾಂಕ್ ವಿವರಗಳನ್ನು ಪಡೆದು ತನಿಖೆ ನಡೆಸಲಾಗುತ್ತಿದೆ. ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಸಾಬೀತಾದರೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಅಕ್ರಮ ಆಸ್ತಿ ಗಳಿಕೆ ಸಂಬಂಧ ಕೇಸು ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಎಸಿಬಿ ಟ್ರ್ಯಾಪ್: ಆರ್.ಟಿ.ನಗರದಲ್ಲಿ ವ್ಯಕ್ತಿಯೊಬ್ಬರು ಹಳೇ ಮನೆ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಕಟ್ಟಡದ ಜಾಗಕ್ಕೆ ಹೋಗಿದ್ದ ಬಿಡಿಎ ಇಂಜಿನಿಯರ್ ಮಂಜುನಾಥ್, ಕಟ್ಟಡವನ್ನು ನಿರ್ಮಾಣ ಮಾಡದಂತೆ ತಾಕೀತು ಮಾಡಿ ಕಾಮಗಾರಿ ಸ್ಥಗಿತಗೊಳಿಸಿದ್ದರು. ಆ ಬಳಿಕ ಸರ್ವೆಯರ್ ಜಯರಾಂ ಅವರನ್ನು ಕಾಣುವಂತೆ ಸೂಚಿಸಿದ್ದರು. ಕಟ್ಟಡ ಮಾಲೀಕರು ಸರ್ವೆಯರ್ ಜಯರಾಮ್ ಅವರನ್ನು ಭೇಟಿ ಮಾಡಿದಾಗ, ಐದು ಲಕ್ಷ ರೂ. ಲಂಚ ನೀಡಿದರೆ ಕಟ್ಟಡ ಕಾಮಗಾರಿಗೆ ಅವಕಾಶ ನೀಡುವುದಾಗಿ ಸೂಚಿಸಿದ್ದರು. ಈ ಕುರಿತು ಕಟ್ಟಡ ಮಾಲೀಕರು ಎಸಿಬಿ ಬೆಂಗಳೂರು ಘಟಕಕ್ಕೆ ದೂರು ನೀಡಿದ್ದರು.

ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು, ಬಿಡಿಎ ಇಂಜಿನಿಯರ್ ಮಂಜುನಾಥ್ ಸೂಚನೆ ಮೇರೆಗೆ ಎರಡು ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಸರ್ವೆಯರ್ ಜಯರಾಂ ನನ್ನು ಬಂಧಿಸಿದ್ದಾರೆ. ಬಳಿಕ ಬಿಡಿಎ ಇಂಜಿನಿಯರ್ ಮಂಜುನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಮಂಜುನಾಥ್ ಕಾರ್ಯ ನಿರ್ವಹಿಸುವ ಕಚೇರಿಯಲ್ಲಿ ಶೋಧ ನಡೆಸಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಲಂಚ ಸ್ವೀಕಾರ ಪ್ರಕರಣದಲ್ಲಿ ಜಯರಾಂ ಮತ್ತು ಇಂಜಿನಿಯರ್ ಮಂಜುನಾಥ್ ಅವರನ್ನು ಸೋಮವಾರ ರಾತ್ರಿಯೇ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾಲಿಡಿದು ಗೋಳಾಟ: ಲಂಚ ಪ್ರಕರಣದಲ್ಲಿ ಸರ್ವೆಯರ್ ಜಯರಾಂ ಬಂಧನಕ್ಕೆ ಒಳಗಾಗುತ್ತಿದ್ದಂತೆ ಎಸಿಬಿ ಅಧಿಕಾರಿಗಳ ಕಾಲಿಗೆ ಬಿದ್ದು ಬಿಟ್ಟು ಬಿಡುವಂತೆ ಅಂಗಲಾಚಿದ್ದಾರೆ. ಇನ್ನು ಲಂಚ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಸುದ್ದಿ ತಿಳಿದ ಕೂಡಲೇ ಇಂಜಿನಿಯರ್ ಮಂಜುನಾಥ್ ಗೂಡ ಗಾಬರಿಯಾಗಿದ್ದಾರೆ. ಎರಡು ಲಕ್ಷ ರೂ. ಲಂಚ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮಂಜುನಾಥ್ ಮನೆ ಶೋಧ ನಡೆದಿದ್ದು, ಲೆಕ್ಕಕ್ಕೆ ಸಿಗದ 2.75 ಲಕ್ಷ ರೂ. ಹಣ ಸಿಕ್ಕಿದ್ದು, ಎರಡು ಆಸ್ತಿಯ ಪತ್ರಗಳು ಸಿಕ್ಕಿವೆ. ಇದು ಮಂಜುನಾಥ್ ಪಾಲಿಗೆ ಮತ್ತಷ್ಟು ಉರುಳಾಗಲಿದೆ.

ಸಣ್ಣ ಕಾರಣಕ್ಕೂ ಲಂಚ : ಬೆಂಗಳೂರಿನಲ್ಲಿ ಮನೆ ಕಟ್ಟುವುದೇ ದುಬಾರಿ. ಅನಿವಾರ್ಯ ಕಾರಣದಿಂದ ಸಣ್ಣ ನಿಯಮ ಉಲ್ಲಂಘನೆ ಮಾಡಿದರೂ ಒಂದೆಡೆ ಬೆಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ವಸೂಲಿ ಮಾಡುತ್ತಾರೆ. ಅದರ ಜತೆಗೆ ಬಿಡಿಎ ಇಂಜಿನಿಯರ್ ಗಳು ಕಣಕ್ಕೆ ಇಳಿಯುತ್ತಾರೆ. ನಿಯಮ ಉಲ್ಲಂಘನೆ ಮಾಡಿರುವ ಕಟ್ಟಡ ಮಾಲೀಕರಲ್ಲಿ ಬಹುತೇಕರು ಲಂಚ ಕೊಟ್ಟೇ ಸುಮ್ಮನಾಗುತ್ತಾರೆ. ದೂರು ಕೊಡುವುದು ಅಪರೂಪ. ಕಟ್ಟಡ ಕಾಮಗಾರಿ ಅರ್ಧದಲ್ಲಿ ನಿಂತರೆ ಎಂಬ ಭಯದಿಂದ ಅನೇಕರು ದೂರು ದಾಖಲಿಸುವುದಿಲ್ಲ.
ಎಸಿಬಿಗೆ ದೂರು: ಯಾವುದೇ ಸರ್ಕಾರಿ ಕೆಲಸ ಮಾಡಿಕೊಡಲು ಲಂಚ ಕೇಳಿದರೆ ಜನ ಸಾಮಾನ್ಯರು ಎಸಿಬಿಗೆ ದೂರು ನೀಡಲು ಮುಂದಾಗಬೇಕು. ಲಂಚ ಕೊಡುವುದು ಅಪರಾಧ. ಮತ್ತು ಲಂಚ ಪಡೆದುಕೊಳ್ಳುವುದು ಅಪರಾಧ. ಲಂಚ ಕೊಟ್ಟು ಮುಚ್ಚಿಟ್ಟರೆ, ಅಂತವರ ವಿರುದ್ಧ ಸಹ ಭ್ರಷ್ಟಾಚಾರ ನಿಯಂತ್ರಣ ಆಯ್ದೆ ಅಡಿ ಕೇಸು ದಾಖಲಿಸಲು ಅವಕಾಶ ಸಲ್ಲಿಸಾಗಿದೆ. ಈ ಸಂಬಂಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.











Click it and Unblock the Notifications