ACB Raid: 9 ಬಿಡಿಎ ಮಧ್ಯವರ್ತಿಗಳ ಮನೆ ಮೇಲೆ ಎಸಿಬಿ ದಾಳಿ
ಬೆಂಗಳೂರು, ಮಾರ್ಚ್ 22: ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಭ್ರಷ್ಟ ಅಧಿಕಾರಿಗಳ ಮೇಲೆ ಸಮರ ಸಾರಿರುವ ಎಸಿಬಿ, ಇಂದು (ಮಂಗಳವಾರ) ಬೆಳ್ಳಂಬೆಳಗ್ಗೆ ಭ್ರಷ್ಟರ ಬೇಟೆಯಾಡಿದೆ.

Recommended Video

ಬೆಂಗಳೂರು ನಗರದ 9 ಭ್ರಷ್ಟ ಬಿಡಿಎ ಮಧ್ಯವರ್ತಿಗಳ ಕಚೇರಿ, ನಿವಾಸಗಳ ಮೇಲೆ ಎಸಿಬಿ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಇನ್ನೂ ಮಹತ್ವದ ದಾಖಲೆ ಹುಡುಕಾಟದಲ್ಲಿ ತೊಡಗಿದ್ದಾರೆ.
ಎಸಿಬಿ ಅಧಿಕಾರಿಗಳು ಬೆಂಗಳೂರು ನಗರದ ವಿವಿಧ ಸ್ಥಳಗಳಲ್ಲಿ 9 ಮಧ್ಯವರ್ತಿಗಳು/ಏಜೆಂಟರು/ ಭ್ರಷ್ಟ/ಅಕ್ರಮ ವಿಧಾನಗಳಿಂದ ಸಾರ್ವಜನಿಕ ಸೇವಕರ ಮೇಲೆ ಪ್ರಭಾವ ಬೀರುವ/ತಮ್ಮ ವೈಯಕ್ತಿಕ ಪ್ರಭಾವದ ಮೂಲಕ ಬೆಂಗಳೂರಿನ ಚಟುವಟಿಕೆಗಳಲ್ಲಿ ಅವ್ಯವಹಾರಗಳು ಮತ್ತು ಇತರ ಅಕ್ರಮಗಳಲ್ಲಿ ತೊಡಗಿರುವ ಶಂಕಿತರಿಗೆ ಸಂಬಂಧಿಸಿದಂತೆ 9 ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿದೆ.

ಎಸ್ಪಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ಸುಮಾರು 100 ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ, ಮಹತ್ವದ ದಾಖಲೆಗಳ ಪರಿಶೋಧನೆಯಲ್ಲಿ ತೊಡಗಿದ್ದಾರೆ.
ಯಾವ ಯಾವ ಭ್ರಷ್ಟ ಮಧ್ಯವರ್ತಿಗಳ ಮನೆ ಮೇಲೆ ದಾಳಿ ನಡೆದಿದೆ
1. ರಘು ಬಿ.ಎನ್, ಚಾಮರಾಜಪೇಟೆ
2. ಮೋಹನ್, ನೋರಾಯನಪಾಳ್ಯ. ಆರ್.ಟಿ. ನಗರ
3. ಮನೋಜ್, ದೊಮ್ಮಲೂರು
4. ಮುನಿರತ್ನ ಅಲಿಯಾಸ್ ರತ್ನವೇಲು, ಕೆನಗುಂಟೆ, ಮಲ್ಲತ್ತಹಳ್ಳಿ.

5. ತೇಜು ಅಲಿಯಾಸ್, ರಾಜರಾಜೇಶ್ವರಿನಗರ
6.ಅಶ್ವತ್#ಮುದ್ದಿನಪಾಳ್ಯ ಅಶ್ವತ್, ಕೆಜಿ ಸರ್ಕಲ್, ಮುದ್ದಿನಪಾಳ್ಯ
7. ರಾಮ, ಚಾಮುಂಡೇಶ್ವರಿನಗರ, ಬಿಡಿಎ ಬಡಾವಣೆ
8. ಲಕ್ಷ್ಮಣ, ಚಾಮುಂಡೇಶ್ವರಿ ನಗರ, ಬಿಡಿಎ ಲೇಔಟ್
9. ಚಿಕ್ಕಹನುಮ್ಮಯ್ಯ, ಮುದ್ದಿನಪಾಳ್ಯ, ಬೆಂಗಳೂರು

ಈ ಹಿಂದೆ ಸತತವಾಗಿ ಬಿಡಿಎ ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದ ಎಸಿಬಿ ಅಧಿಕಾರಿಗಳು, ಇದೀಗ ಮಧ್ಯವರ್ತಿಗಳ ಮೇಲೆ ದಾಳಿ ಮಾಡಿದೆ. ಅಧಿಕಾರಿಗಳ ಮನೆಯಲ್ಲಿ, ಕಚೇರಿಯಲ್ಲಿ ಸಿಕ್ಕ ದಾಖಲೆಗಳ ಆಧಾರದ ಮೇಲೆ ದಾಳಿ ಮಾಡಲಾಗಿದ್ದು, ದಾಳಿಗೆ ಮುಖ್ಯ ಕಾರಣ ಕೆಂಪೇಗೌಡ ಲೇಔಟ್ನಲ್ಲಿ ಬದಲಿ ನಿವೇಶನ ಹಂಚಿಕೆ ಎಂದು ತಿಳಿದುಬಂದಿದೆ.
ರೈತರ ಹೆಸರಿನಲ್ಲಿ ಅಧಿಕಾರಿಗಳ ಜೊತೆಗೂಡಿ ಬದಲಿ ನಿವೇಶನ ಪಡೆದಿರುವ ಆರೋಪ ಕೇಳಿಬಂದಿದೆ. ರೈತರಿಗೆ ಬದಲಿ ನಿವೇಶನ ನೀಡುವ ಹೆಸರಲ್ಲಿ ಮಧ್ಯವರ್ತಿಗಳಿಂದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಗೋಮಾಳ ಭೂಮಿಯನ್ನು ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಿ, ಗೋಮಾಳ ಜಾಗಕ್ಕೆ ಮಧ್ಯವರ್ತಿಗಳು ಪರಿಹಾರ ಪಡೆದಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಉಳ್ಳಾಲ ಆರ್ಟಿಒ ಕಚೇರಿ ಬಳಿಯಿರುವ ಬಿಡಿಎ ಮಧ್ಯವರ್ತಿ ಚಿಕ್ಕಹನುಮಯ್ಯನ ಎರಡು ಅಂತಸ್ತಿನ ಮನೆ ಮೇಲೆ ಮಂಗಳವಾರ ಬೆಳಗಿನ ಜಾವ 5 ಗಂಟೆಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಇಬ್ಬರು ಅಧಿಕಾರಿಗಳು ಸೇರಿ 7 ಸಿಬ್ಬಂದಿಯಿಂದ ಶೋಧಕಾರ್ಯ ನಡೆದಿದೆ.
ಅಧಿಕಾರಿಗಳಿಂದ ಮನೆ ಮುಂದೆ ನಿಲ್ಲಿಸಿರುವ ಕಾರುಗಳ ಪರಿಶೀಲನೆ ಮಾಡಲಾಗಿದೆ. ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ಪೆಟ್ರೋಲ್ ಬಂಕ್ ಕೂಡ ಹೊಂದಿರುವ ಚಿಕ್ಕಹನುಮಯ್ಯ, ಸಾಕಷ್ಟು ವರ್ಷಗಳಿಂದ ರಿಯಲ್ ಎಸ್ಟೇಟ್ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಇನ್ನು ಆರ್.ಟಿ. ನಗರದ ಸೆಕೆಂಡ್ ಬ್ಲಾಕ್ನಲ್ಲಿರುವ ಬಿಡಿಎ ಬ್ರೋಕರ್ ಮೋಹನ್ ಐಶಾರಾಮಿ ಮನೆ ಮೇಲೆ ಕೂಡ 9 ಜನ ಅಧಿಕಾರಗಳಿಂದ ದಾಳಿ ಮಾಡಲಾಗಿದೆ. ಡಿವೈಎಸ್ಪಿ ಪ್ರಕಾಶ್ ರೆಡ್ಡಿ, ಇನ್ಸ್ಪೆಕ್ಟರ್ ಮಂಜುನಾಥ್ ಸೇರಿ ಒಟ್ಟು 9 ಜನ ಅಧಿಕಾರಿಗಳ ತಂಡದಿಂದ ಪ್ರತಿ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಮಧ್ಯವರ್ತಿ ತೇಜು ಅಲಿಯಾಸ್ ತೇಜಸ್ವಿ ಮನೆ ಮೇಲೆ ದಾಳಿ ಮಾಡಲಾಗಿದ್ದು, ರಾಜರಾಜೇಶ್ವರಿನಗರದಲ್ಲಿ ತೇಜು ಭವ್ಯ ಬಂಗಲೆ ಹೊಂದಿದ್ದಾನೆ. ಮನೆಯೊಳಗೆ ಸ್ವಿಮ್ಮಿಂಗ್ ಫುಲ್ ಹೊಂದಿದ್ದಾರೆ. ನಟ ಗಣೇಶ್ ಮನೆ ಪಕ್ಕದಲ್ಲೇ ತೇಜು ಮನೆಯಿದೆ.

ಬೆಳ್ಳಂಬೆಳಗ್ಗೆ ಬ್ರೋಕರ್ ಮುನಿರತ್ನ ಅಲಿಯಾಸ್ ರತ್ನವೇಲುಗೆ ಎಸಿಬಿ ಅಧಿಕಾರಿಗಳು ಶಾಕ್ ನೀಡಿದ್ದು, ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಮುನಿರತ್ನ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.
ಮುನಿರತ್ನನ ಐಷಾರಾಮಿ ಮನೆ ಕಂಡು ಅಧಿಕಾರಿಗಳು ಶಾಕ್ ಆಗಿದ್ದು, ಮನೆಯಲ್ಲಿ ಈಜುಕೊಳ, ಜಿಮ್ ಕೂಡ ಇದೆ. ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ. ದೊಮ್ಮಲೂರಿನ ಬ್ರೋಕರ್ ಮನೋಜ್ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ. ದೇಶ ಹಾಗೂ ವಿದೇಶಗಳ ಪ್ರತಿಷ್ಠಿತ ಬ್ರಾಂಡ್ನ 19 ಸನ್ ಗ್ಲಾಸಸ್ ಹಾಗೂ 22 ಕೈ ಗಡಿಯಾರಗಳು ಪತ್ತೆಯಾಗಿವೆ.












Click it and Unblock the Notifications