ಮತ್ತೆ ಬಿಡಿಎ ಉಪ ಕಚೇರಿಗಳಿಗೆ ಬಿಸಿ ಮುಟ್ಟಿಸಿದ ಎಸಿಬಿ: ಐದು ಕಡೆ ದಾಳಿ
ಬೆಂಗಳೂರು ನವೆಂಬರ್ 23: ಐದು ಬಿಡಿಎ ಉಪ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇಂದು ಮತ್ತೆ ದಾಳಿ ಮಾಡಿದೆ. ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಎಚ್ ಎಸ್ ಆರ್ ಲೇಔಟ್,ವಿಜಯನಗರ, ಆರ್ ಟಿ ನಗರ ,ಬನಶಂಕರಿ ಬಿಡಿಎ ಕಚೇರಿಗಳಿಗೆ ಇಂದು ಮತ್ತೆ ಎಸಿಬಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಕೇಂದ್ರ ಕಚೇರಿ ಮೇಲೆ ದಾಳಿ ವೇಳೆ ಉಪ ಕಚೇರಿಗಳಿಗೆ ಸಂಬಂಧಿಸಿದ ಅಕ್ರಮ ಕೆಲ ದಾಖಲೆಗಳು ಪತ್ತೆಯಾಗಿದೆ. ಈ ದಾಖಲೆಗಳನ್ನ ಪರಿಶೀಲಿಸಿದ್ದು ಕೆಲ ಮಹತ್ವದ ದಾಖಲೆಗಳಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಕಚೇರಿ ಗೇಟ್ ಗಳನ್ನ ಬೀಗ ಹಾಕಿ ಯಾರನ್ನೂ ಹೊರ ಬಿಡದೆ ಒಳಗೆ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ಇನ್ಸ್ಪೆಕ್ಟರ್ ವಿಜಯ್ ಹಡಗಲಿ ನೇತೃತ್ವದಲ್ಲಿ ಆರ್ ಟಿ ನಗರ ಬಿಡಿಎ ಕಚೇರಿಯಲ್ಲಿ ದಾಳಿ ಮಾಡಲಾಗಿದ್ದು ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ. ಎಸಿಬಿ ಡಿವೈಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ಪರಿಶೀಲನೆ ಮುಂದುವರೆದಿದೆ. ಬೆಳಿಗ್ಗಿನಿಂದ ಡಿವೈಎಸ್ಪಿ ತಮ್ಮಯ್ಯ ಹಾಗೂ ಸುಮಾರು ಎಂಟಕ್ಕೂ ಹೆಚ್ಚು ಎಸಿಬಿ ಸಿಬ್ಬಂದಿ ತಂಡ ಬಿಡಿಎದಲ್ಲೇ ಮೊಕ್ಕಾಂ ಹೂಡಿದ್ದಾರೆ. ಲ್ಯಾಂಡ್ ಅಕ್ವಸಿಷನ್ ಆಫೀಸರ್ ಸೌಜನ್ಯ ಕಚೇರಿಯಲ್ಲಿ ಕಡತಗಳ ಹುಡುಕಾಟ ನಡೆಸ್ತಿರೋ ಅಧಿಕಾರಿಗಳು ಇಡಿಪಿ ಸೆಲ್ ನಲ್ಲೂ ಕೆಲ ಕಡತಗಳ ಸಾಫ್ಟ್ ಕಾಪಿ ಪಡೆಯುತ್ತಿದ್ದಾರೆ.
HSR ಲೇ ಔಟ್, ವಿಜಯನಗರ, ಆರ್ ಟಿ ನಗರ, ಬನಶಂಕರಿ ಬಿಡಿಎ ಕಚೇರಿ ಮೇಲೆ ಎಸಿಬಿ ದಾಳಿ ಮಾಡಿದೆ. ಬಿಡಿಎ ಕಚೇರಿ ಮೇಲೆ ದಾಳಿ ಆದ ಬಳಿಕ ಐದು ವಲಯವಾರು ಕಚೇರಿಗಳ ವಿರುದ್ದ ಎಸಿಬಿ ಗೆ 30ಕ್ಕೂ ಹೆಚ್ಚು ದೂರು ಬಂದ ಬೆನ್ನಲ್ಲೇ ಈ ದಾಳಿ ಮಾಡಲಾಗಿದೆ. ಎಸಿಬಿಗೆ ಬಂದ ದೂರುಗಳಲ್ಲಿ ಸುಮಾರು 20 ದೂರುಗಳು ಈ ಐದು ವಲಯವಾರು ಬಿಡಿಎ ಕಚೇರಿಗಳಿಗೆ ಸಂಬಂಧಿಸಿದ್ದಾಗಿತ್ತು. ದೂರಿದಾರರ ಬಳಿಯೇ ಮಾಹಿತಿ ಹಾಗೂ ದಾಖಲೆಗಳನ್ನು ಕಲೆಹಾಕಿದ್ದ ಎಸಿಬಿ, ದಾಖಲೆಗಳ ಪರಿಶೀಲನೆ ಬಳಿಕ ಇಂದು ಮುಂಜಾನೆ ಮೀಟಿಂಗ್ ಮಾಡಿದ್ದರು. ಮೀಟಿಂಗ್ ಬಳಿಕ ಸರ್ಚ್ ವಾರೆಂಟ್ ಪಡೆದು ದಾಳಿ ಮಾಡಿದ್ದಾರೆ. ನಾಲ್ಕು ವಿಶೇಷ ತಂಡಗಳೊಂದಿಗೆ ನಾಲ್ಕು ಕಚೇರಿ ಮೇಲೆಯೂ ದಾಳಿ ಮಾಡಲಾಗಿದೆ. ಸದ್ಯ ಕಚೇರಿಯಲ್ಲಿ ಕೆಲಸ ಮಾಡ್ತಿರೋ ಅಧಿಕಾರಿಗಳ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಮೊಬೈಲ್ ವಶಕ್ಕೆ ಪಡೆದು ದಾಖಲೆಗಳ ಪರಶೀಲನೆ ಮಾಡಲಾಗುತ್ತಿದೆ.
ಎಸಿಬಿ ದಾಳಿ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, "ನಮ್ಮ ಸರ್ಕಾರ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ಎ.ಸಿ. ಬಿ ವರದಿ ಸಲ್ಲಿಸಿದ ನಂತರ ಶಿಫಾರಸ್ಸುಗಳನ್ನು ಚಾಚೂತಪ್ಪದೆ ಪಾಲಿಸಲಾಗುವುದು. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ," ಎಂದು ಸ್ಪಷ್ಟಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
"ಬಿಡಿಎ ಅಕ್ರಮಗಳ ಕುರಿತು ಸಾರ್ವಜನಿಕರಿಂದಲೂ ನಮಗೆ ದೂರುಗಳು ಬಂದಿದ್ದವು. ಎಸ್. ಆರ್. ವಿಶ್ವನಾಥ ಅವರೂ ಸಹ ಈ ಬಗ್ಗೆ ನನ್ನ ಗಮನ ಸೆಳೆದಿದ್ದರು. ಸಂಬಂಧಪಟ್ಟ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ತನಿಖೆ ಕೈಗೊಳ್ಳಲು ಸೂಚಿಸಲಾಗಿತ್ತು. ತಪ್ಪಿತಸ್ಥರು ಯಾರೇ ಆಗಿರಲಿ, ಎಷ್ಟೇ ಪ್ರಭಾವಿಗಳಿರಲಿ, ಅಧಿಕಾರಿಗಳಿರಲಿ, ಅವರ ವಿರುದ್ಧ ನಾವು ಕ್ರಮ ಜರುಗಿಸುತ್ತೇವೆ," ಎಂದು ಭರವಸೆ ನೀಡಿದರು.
"ಬಿಡಿಎ ಸ್ವಚ್ಛಗೊಳಿಸಬೇಕು. ಸಾಮಾನ್ಯ ಜನರಿಗೆ ಅಗತ್ಯವಿರುವ ಸೇವೆಗಳನ್ನು ದೊರಕಿಸುವ ದೃಷ್ಟಿಯಿಂದ ಬಿಡಿಎ ಸ್ವಚ್ಛಗೊಳಿಸಬೇಕಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ನಾವು ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಲಾರೆವು," ಎಂದು ತಿಳಿಸಿದರು.
Recommended Video
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ತಂಡ ಬೆಂಗಳೂರಿನ ಬಿಡಿಎ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿದೆ. ಸುಮಾರು 60 ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸಿದೆ. ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ 3 ಎಸ್ಪಿ, 5 ಡಿವೈಎಸ್ಪಿ, 12 ಇನ್ಸ್ಪೆಕ್ಟರ್ಗಳನ್ನು ಒಳಗೊಂಡ 60ಕ್ಕೂ ಹೆಚ್ಚು ಅಧಿಕಾರಿಗಳು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿದೆ. ಹಲವಾರು ಗಂಟೆಗಳ ಕಾಲ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿತ್ತು.