ಸಾರಿಗೆ ನೌಕರರ ಆತ್ಮಹತ್ಯೆ: ನ್ಯಾಯಕ್ಕಾಗಿ ಎಎಪಿ ಪ್ರತಿಭಟನೆ
ಬೆಂಗಳೂರು ಆಗಸ್ಟ್ 30: ಅಧಿಕಾರಿಗಳ ಕಿರುಕುಳದಿಂದ ಮನನೊಂದು ಬಿಎಂಟಿಸಿ ನೌಕರ ಹೊಳೆಬಸಪ್ಪ ಆತ್ಮಹತ್ಯೆಯನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ನೂರಾರು ಜನ ಕಾರ್ಯಕರ್ತರು ರಾಜರಾಜೇಶ್ವರಿನಗರದ ಚನ್ನಸಂದ್ರ ಡಿಪೋ ಬಳಿ ಪ್ರತಿಭಟನೆ ನಡೆಸಿದರು.
ಆಮ್ ಆದ್ಮಿ ಪಕ್ಷ (ಎಎಪಿ)ದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸಾರಿಗೆ ಸಚಿವ ಶ್ರೀರಾಮುಲು ಸ್ಥಳಕ್ಕೆ ಆಗಮಿಸಬೇಕೆಂದು ಮೃತರ ಶವವನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ಕೇವಲ 24 ಗಂಟೆಗಳಲ್ಲಿ ಜಿಗಣಿ, ಬನಶಂಕರಿ ಹಾಗೂ ಚನ್ನಸಂದ್ರ ಡಿಪೋಗಳ ಮೂವರು ಸಾರಿಗೆ ನೌಕರರು ಆತ್ಮಹತ್ಯೆಗೆ ಶರಣಾಗಿರುವುದು ದುರ್ದೈವದ ಸಂಗತಿ.
ಕಿರುಕುಳ ಇನ್ನಿತರ ಕಾರಣಗಳಿಂದ ಆತ್ಮಹತ್ಯೆಯಂತ ಅನಾಹುತಗಳ ಆಗುತ್ತಿದ್ದರೂ ಸಹ ರಾಜ್ಯ ಸರ್ಕಾರ ಕಣ್ಣು ಕಾಣದಂತೆ, ಕಿವಿ ಕೇಳಿಸದಂತೆ ಮೂಕ ಪ್ರೇಕ್ಷಕನಾಗಿದೆ. ಇಂತಹ ಸರ್ಕಾರ ರಾಜ್ಯದಲ್ಲಿರುವುದು ದುರದೃಷ್ಟಕರ ಎಂದು ಮೋಹನ್ ದಾಸರಿ ಕಿಡಿ ಕಾರಿದರು.
ನೌಕರರ ಆತ್ಮಹತ್ಯೆಗೆ ಕಾರಣರಾದ ಡಿಪೋ ಮ್ಯಾನೇಜರ್ ಬಂಧಿಸಿ ಅಮಾನತುಗೊಳಿಸಬೇಕು. ಮೃತರಿಗೆ 50 ಲಕ್ಷ ರೂ. ಪರಿಹಾರವನ್ನು ಸ್ಥಳದಲ್ಲೇ ಘೋಷಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಾರಿಗೆ ಇಲಾಖೆ ನೌಕರರಿಗೆ ನಿರಂತರ ಕಿರುಕುಳ ಲಂಚಕೋರತನ ಇವುಗಳೆಲ್ಲವೂ ಶಾಶ್ವತವಾಗಿ ಪರಿಹಾರವಾಗಬೇಕು ಹಾಗೂ ಸಾರಿಗೆ ನೌಕರರ ವಿರುದ್ಧ ಸರ್ಕಾರದ ದ್ವೇಷ ನೀತಿ ಅನುಸರಿಸುತ್ತಿರುವು ಸರಿಯಲ್ಲ ಎಂದು ಎಎಪಿ ಮುಖಂಡರು, ಕಾರ್ಯಕರ್ತರು ಖಂಡಿಸಿದರು.
ಅಹೋರಾತ್ರಿ ಹೋರಾಟಕ್ಕೆ ನಿರ್ಧಾರ
ಸಾರಿಗೆ ಸಚಿವರಾ ಬಿ. ಶ್ರೀರಾಮುಲು ಹಾಗೂ ಬಿಎಂಟಿಸಿಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು. ಕಿರುಕುಳ, ಸಮಸ್ಯೆ ಕುರಿತ ಪರಿಹಾರ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಉತ್ತರಿಸಲು ಸ್ಥಳಕ್ಕೆ ಬರಬೇಕು. ಅಲ್ಲಿಯವರೆಗೆ ಕಾಯುತ್ತೇವೆ. ಇಂದು ಅಹೋರಾತ್ರಿ ಧರಣಿ ಮುಂದುವರೆಸುತ್ತೇವೆ ಎಂದು ಪ್ರತಿಭಟನಾ ನಿರತ ಎಎಪಿ ಕಾರ್ಯಕರ್ತರು ತಿಳಿಸಿದರು.
ಪ್ರತಿಭಟನೆಯಲ್ಲಿ ಎಎಪಿ ಮುಖಂಡರಾದ ಚನ್ನಪ್ಪಗೌಡ ನಲ್ಲೂರು, ಸುರೇಶ್ ರಾಥೋಡ್, ನಂಜಪ್ಪ ಕಾಳೇಗೌಡ, ಶ್ಯಾಮಸುಂದರ್ ಮನಂ ಶಶಿಧರ ಆರಾಧ್ಯ ಸೇರಿದಂತೆ ಹಲವಾರು ಜನ ಪಾಲ್ಗೊಂಡಿದ್ದರು.