ಕೆಜೆ ಜಾರ್ಜ್ ರಾಜೀನಾಮೆ ನೀಡದಿದ್ದರೆ ಜೈಲಿಗೆ: ಆಪ್ ಎಚ್ಚರಿಕೆ
ಬೆಂಗಳೂರು, ಜನವರಿ 23: ಬೆಳ್ಳಂದೂರು ಕೆರೆಗೆ ಪದೇ ಪದೇ ಬೆಂಕಿ ಬೀಳುತ್ತಿರುವುದು ಸೇರಿದಂತೆ ಬೆಂಗಳೂರು ನಗರದ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ವಿಫಲರಾಗಿರುವ ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರಾಜಿನಾಮೆ ನೀಡದಿದ್ದರೆ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಆಮ್ ಆದ್ಮಿ ಪಕ್ಷ ಎಚ್ಚರಿಕೆ ನೀಡಿದೆ.
ಸಚಿವ ಕೆ ಜೆ ಜಾರ್ಜ್ ಐದು ವರ್ಷಗಳಲ್ಲಿ ಬೆಂಗಳೂರನ್ನು ಹಾಳುಗೆಡವಿದ್ದಕ್ಕೆ ಕ್ಷಮೆಯಾಚಿಸಬೇಕು ಮಾತ್ರವಲ್ಲ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಬೇಕು, ಇಲ್ಲವಾದಲ್ಲಿ ಜಾರ್ಜ್ರನ್ನು ಮೊದಲು ಮನೆಗೆ ಕಳುಹಿಸಿ, ನಂತರ ಜೈಲಿಗೆ ಕಳುಹಿಸುವ ಕೆಲಸವನ್ನು ಆಮ್ ಆದ್ಮಿ ಪಕ್ಷ ಮಾಡಲಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕ ಶಿವಕುಮಾರ್ ಚೆಂಗಲರಾಯ ಆಗ್ರಹಿಸಿದ್ದಾರೆ.
ಬೆಳ್ಳಂದೂರು ಕೆರೆಯ ಬೆಂಕಿ ಒಂದೇ ಸಮಸ್ಯೆ ಅಲ್ಲ ಇದು ಕೇವಲ ಕಣ್ಣಿಗೆ ತೋರುವ ಸಮಸ್ಯೆ. ನಿಜವಾದ ಸಮಸ್ಯೆಗಳೆಂದರೆ ಕೆರೆ ಒತ್ತುವರಿ, ಅವೈಜ್ಞಾನಿಕ ಕೆರೆ ನಿರ್ವಹಣೆ, ಭೂ ಮಾಫಿಯಾ, ಮತ್ತು ಸರ್ಕಾರಗಳ ಹೇಡಿತನ ಹಾಗೂ ಜಾರ್ಜ್ರಂತಹ ವ್ಯಕ್ತಿಗಳಿಗೆ ನಗರದ ಜವಾಬ್ದಾರಿ ಕೊಟ್ಟಿರುವುದು. ಇಂದು ನಾವು ಕುಡಿಯುತ್ತಿರುವ ನೀರಿಗೆ ವಿಷ ಸೇರಿಕೊಂಡಿದೆ. ಬೆಳ್ಳಂದೂರು ಕೆರೆಯ ಕಳಪೆ ನಿರ್ವಹಣೆಯಿಂದಾಗಿ ಸುತ್ತಮುತ್ತಲ ಪ್ರದೇಶಗಳ ಅಂತರ್ಜಲಕ್ಕೆ ಹಾನಿಕಾರಕ, ವಿಷಕಾರಿ ರಾಸಾಯನಿಕಗಳು ಸೇರಿಕೊಂಡಿವೆ.

ಎಲ್ಲಾ ಕೆರೆಗಳನ್ನು ಮರುಪೂರಣಗೊಳಿಸಿ, ಕೆರೆಗಳ ಸುತ್ತಲೂ ರಿಂಗ್ ಸೀವೇಜ್ ನಿರ್ಮಿಸಬೇಕು, ಬೆಂಗಳೂರಿನಲ್ಲಿ ಬಿದ್ದ ಮಳೆಯ ನೀರೆಲ್ಲಾ ರಿಂಗ್ ಸೀವೇಜ್ ಮೂಲಕ ಕೆರೆಗಳನ್ನು ತಲುಪುವಂತೆ ಮಾಡಿದರೆ, ಬೆಂಗಳೂರಿನ ನೀರಿನ ಬವಣೆ ನೀಗಲಿದೆ ಎಂದರು.
ಸರ್ಕಾರ ಈ ಕೂಡಲೆ ಬೆಂಗಳೂರಿನ ಮೂರು ಜನ ಸಂಸದರು, 28 ಶಾಸಕರು ಹಾಗೂ 198 ಬಿಬಿಎಂಪಿ ಸದಸ್ಯರ ಉಪಸ್ಥಿತಿಯಲ್ಲಿ ನಾಗರಿಕರೊಂದಿಗೆ ಮಾಸ್ಟರ್ ಪ್ಲಾನ್ ಕುರಿತಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಆತುರಾತುರವಾಗಿ ಈ ಜನವಿರೋಧಿ ಕರಡನ್ನು ಕಾನೂನಾಗಿ ತರುವ ಆತುರಾತುರದ ಸರ್ಕಾರದ ಈ ನಿರ್ಧಾರ ಬೆಂಗಳೂರಿನ ಜನತೆಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಹೇಳಿದರು.












Click it and Unblock the Notifications