ಬಾಲಬ್ರೂಯಿ ಅತಿಥಿ ಗೃಹ ಸಾಂವಿಧಾನಿಕ ಕ್ಲಬ್ ಆಗಿ ಪರಿವರ್ತನೆ ಬೇಡ- ಎಎಪಿ
ಬೆಂಗಳೂರು, ಸೆಪ್ಟಂಬರ್ 23: ಬೆಂಗಳೂರಿನ ಪಾರಂಪರಿಕ ಕಟ್ಟಡವಾದ ಬಾಲಬ್ರೂಯಿ ಅತಿಥಿ ಗೃಹವನ್ನು ಶಾಸಕರ ಮೋಜು-ಮಸ್ತಿಗಾಗಿ ದುರ್ಬಳಕೆ ಮಾಡುವ ನಿರ್ಧಾರದಿಂದ ರಾಜ್ಯ ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಆಮ್ ಆದ್ಮಿ ಪಾರ್ಟಿ ಮುಖಂಡರಾದ ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಬ್ರಿಜೇಶ್ ಕಾಳಪ್ಪ ಅವರು, ಬಾಲಬ್ರೂಯಿ ಅತಿಥಿ ಗೃಹವನ್ನು ಸಾಂವಿಧಾನಿಕ ಕ್ಲಬ್ ಆಗಿ ಮಾರ್ಪಾಡು ಮಾಡುವ ಪ್ರಸ್ತಾವನೆಗೆ ಸಿಎಂ ಬಸವರಾಜ ಬೊಮ್ಮಾಯಿಯವರು ಇತ್ತೀಚೆಗಷ್ಟೇ ಅನುಮೋದನೆ ನೀಡಿದ್ದಾರೆ. ಇದರಿಂದಾಗಿ ಬರೋಬ್ಬರಿ 172 ವರ್ಷಗಳ ಇತಿಹಾಸವಿರುವ ಕಟ್ಟಡದ ಸ್ಥಳದಲ್ಲಿ ಶಾಸಕರುಗಳಿಗೆ ಅಲ್ಲಿ ಮೋಜುಮಸ್ತಿ ಮಾಡಲು ಸಾಂವಿಧಾನಿಕ ಕ್ಲಬ್ ಆಗಿ ಪರಿವರ್ತಿಸುವುದರಿಂದ ಆ ಸ್ಥಳದ ಪಾವಿತ್ರ್ಯತೆಗೆ ಧಕ್ಕೆಯಾಗಲಿದೆ. ಅಲ್ಲಿರುವ ನೂರಾರು ವರ್ಷದ ಹಳೆಯದಾದ ಮರಗಳಿಗೂ ಕೊಡಲಿ ಏಟು ಬೀಳಲಿದೆ ಎಂದರು.
ಆಮ್ ಆದ್ಮಿ ಪಾರ್ಟಿಗೆ ಬ್ರಿಜೇಶ್ ಕಾಳಪ್ಪ ಸೇರ್ಪಡೆಯಾಗಿದ್ದು ಏಕೆ?
ಶಾಸಕರಿಗೆ ವೇತನ ಜತೆ ಐಶಾರಾಮಿ ವ್ಯವಸ್ಥೆಗೆ ನಿರ್ಧಾರ
ಶಾಸಕರುಗಳಿಗೆ ವೇತನದ ಜೊತೆಗೆ ತಿಂಗಳಿಗೆ 60,000 ರೂ. ಕ್ಷೇತ್ರ ಭತ್ಯೆ, 50,000 ರೂ.ಪ್ರಯಾಣ ಭತ್ಯೆ ಸಿಗುತ್ತಿದೆ. ಆಪ್ತ ಸಹಾಯಕನ ವೇತನಕ್ಕೆಂದು 20,000 ರೂ. ಸಹ ಸರ್ಕಾರ ಅವರಿಗೆ ನೀಡುತ್ತಿದೆ. ಅಂಚೆ ವೆಚ್ಚಕ್ಕೆಂದು 5,000 ರೂ.ಪ್ರತಿ ತಿಂಗಳು ಶಾಸಕರು ಪಡೆಯುತ್ತಿದ್ದಾರೆ. ತಿಂಗಳಿಗೆ ಕೇವಲ 500 ರೂ.ಗೆ ಅನ್ಲಿಮಿಟೆಡ್ ಕರೆ ಸೌಲಭ್ಯವನ್ನು ನೆಟ್ವರ್ಕ್ ಕಂಪನಿಗಳು ಒದಗಿಸುತ್ತಿದ್ದರೂ ಬರೋಬ್ಬರಿ 20,000 ರೂ. ದೂರವಾಣಿ ವೆಚ್ಚವೆಂದು ಶಾಸಕರಿಗೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಇಷ್ಟೇ ಅಲ್ಲದೇ ಶಾಸಕರ ಕುಟುಂಬಗಳಿಗೆ ವಿದ್ಯುತ್, ನೀರು, ವೈದ್ಯಕೀಯ ಮುಂತಾದ ಸೌಲಭ್ಯಗಳು ಕೂಡ ಸರ್ಕಾರದಿಂದ ಉಚಿತವಾಗಿ ಸಿಗುತ್ತಿವೆ. ಇಷ್ಟೊಂದು ಸೌಲಭ್ಯಗಳು ಲಭ್ಯವಿದ್ದರೂ ಸಾಂವಿಧಾನಿಕ ಕ್ಲಬ್ ಹೆಸರಿನಲ್ಲಿ ಇನ್ನಷ್ಟು ಐಶಾರಾಮಿ ಸೌಲಭ್ಯಗಳನ್ನು ಒದಗಿಸಲು ಮುಂದಾಗಿರುವ ಸರ್ಕಾರ ನಡೆ ಖಂಡನೀಯ ಎಂದರು.
ದೆಹಲಿ ಮಾದರಿಯಲ್ಲಿ ಜನರಿಗಾಗಿ ಹಣ ಬಳಸಿ
ನಾಡು ಅಭಿವೃದ್ಧಿ ಆಗಬೇಕಾದರೆ ನಾಡಿನ ಜನರಿಗೆ ಗುಣಮಟ್ಟದ ಸೌಲಭ್ಯಗಳು ಸಿಗಬೇಕು. ಶಾಸಕರುಗಳಿಗೆ ಇನ್ನಷ್ಟು ಸೌಲಭ್ಯ ನೀಡುವ ಬದಲು ಜನರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸರ್ಕಾರ ಯೋಚಿಸಲಿ. ದೆಹಲಿಯ ಆಮ್ ಆದ್ಮಿ ಪಾರ್ಟಿ ಸರ್ಕಾರವು ಸಾಮಾನ್ಯರಿಗೆ ತಿಂಗಳಿಗೆ 20,000 ಲೀಟರ್ ಕುಡಿಯುವ ನೀರು ಹಾಗೂ 200 ಯೂನಿಟ್ ತನಕ ವಿದ್ಯುತನ್ನು ಉಚಿತವಾಗಿ ನೀಡುತ್ತದೆ. ಮಹಿಳೆಯರಿಗೆ ಸಾರಿಗೆ ಸೇವೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೂಡ ಅಲ್ಲಿ ಉಚಿತವಾಗಿ ದೊರೆಯುತ್ತಿದೆ. ಕರ್ನಾಟದಲ್ಲೂ ಸಹ ಜನರ ತೆರಿಗೆ ಹಣವನ್ನು ಶಾಸಕರ ಮೋಜು ಮಸ್ತಿಗೆ ಬಳಸುವ ಬದಲು ದೆಹಲಿ ಮಾದರಿಯಲ್ಲಿ ಜನರಿಗಾಗಿ ಬಳಸಲು ಸರ್ಕಾರ ಮುಂದಾಗಬೇಕು ಎಂದು ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದರು.