ನಿರಾಶ್ರಿತರಿಗೆ ಅಗತ್ಯ ಆಶ್ರಯ ಕೇಂದ್ರ ನಿರ್ಮಿಸಲು ಎಎಪಿ ಆಗ್ರಹ
ಬೆಂಗಳೂರು, ಡಿಸೆಂಬರ್ 18: ಬೆಂಗಳೂರಿನಲ್ಲಿ ಬಿಬಿಎಂಪಿಯ ಗಣತಿ ಪ್ರಕಾರ ಸುಮಾರು 5,000 ನಿರಾಶ್ರಿತರಿದ್ದಾರೆ. ಇವರೆಲ್ಲವೂ ರಸ್ತೆ ಬದಿಗಳಲ್ಲಿ, ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್, ಮಾರುಕಟ್ಟೆಗಳಲ್ಲಿ ಮಲಗಿ ಬದುಕು ಸಾಗಿಸುತ್ತಿದ್ದಾರೆ. ನಗರದಲ್ಲಿರುವ ನಿರಾಶ್ರಿತರಿಗೆ ಒದಗಿಸಲಾಗಿರುವ ಒಂದು ಕೇಂದ್ರಗಳಲ್ಲಿ 40-50 ಜನರು ಮಾತ್ರ ಉಳಿಯಬಹುದಾದ 08 ಪುನರ್ ವಸತಿ ಕೇಂದ್ರಗಳಲ್ಲಿ ಸುಮಾರು 400 ಜನರು ಮಾತ್ರ ಆಶ್ರಯ ಪಡೆಯಬುದು. ಹಾಗಾಗಿ ಪುಟ್ಟ ಮಕ್ಕಳಿಂದ ವಯಸ್ಸಾದ ವೃದ್ಧರವರೆಗೂ ಬೀದಿ ಬದಿಯಲಿ ಮಲಗುವಂತಹ ಸ್ಥಿತಿಯನ್ನು ನಗರದಲ್ಲಿ ಸರ್ಕಾರ ಸೃಷ್ಟಿಸಿರುವುದು ಅಮಾನವೀಯ ಆಡಳಿತದ ಪ್ರತಿಬಿಂಬವಾಗಿದೆ.
ದೇಶದಲ್ಲಿ ನಿರಾಶ್ರಿತರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವ ಉದ್ದೇಶದಿಂದ ಜವಾಹರಲಾಲ್ ನೆಹರು ವಸತಿ ಯೋಜನೆ, ರಾಜೀವ್ ಗಾಂಧಿ ಅವಾಸ್ ಯೋಜನೆ, ಪ್ರಧಾನಮಂತ್ರಿ ಅವಾಸ್ ಯೋಜನೆಗಳಂತಹ ಹಲವು ಸ್ಕೀಮ್ಗಳಿದ್ದು, ಪುರುಷರಿಗೆ, ಮಹಿಳೆಯರಿಗೆ, ಕುಟುಂಬ ಹೊಂದಿರುವವರಿಗೆ ಹಾಗೂ ರೋಗಿಗಳು, ವೃದ್ಧರು, ಬುದ್ಧಿಮಾಂಧ್ಯರಿಗಾಗಿ ಪ್ರತ್ಯೇಕ ವಸತಿ ಕೇಂದ್ರಗಳನ್ನು ಕಟ್ಟಿಕೊಡಬೇಕೆಂದು ಯೋಜನೆಗಳು ಹೇಳುತ್ತವೆ.
ಆದರೆ ಅವೆಲ್ಲವೂ ಯೋಜನೆಗಳ ಪಟ್ಟಿಯಲ್ಲಿ ಬರೆದಿಡಲು ಮಾತ್ರ ಸೀಮಿತವಾದಂತಾಗಿವೆ. ಅಲ್ಲದೆ ಇರುವ ವಸತಿ ಕೇಂದ್ರಗಳೂ ಸ್ವಚ್ಛವೂ, ಗುಣಮಟ್ಟವೂ ಇಲ್ಲದೆ ಅಸುರಕ್ಷಿತವಾಗಿವೆ. ಹಾಗಾಗಿಯೇ ಇಂದಿಗೂ ನಿರಾಶ್ರಿತರು ಚಳಿ,ಮಳೆ ಎನ್ನದೆ ಬೀದಿ ಬದಿಯಲ್ಲಿ ಮಲಗುವಂತಹ ಸ್ಥಿತಿ ಜೀವಂತವಾಗಿದ್ದು, ಯಾವ ಸರ್ಕಾರವೂ ನಿರಾಶ್ರಿತರಿಗೆ ಆಶ್ರಯ ನೀಡಲು ಮುಂದಾಗಿಲ್ಲ.
ದೆಹಲಿಯಲ್ಲಿ ಎಎಪಿ ಸರ್ಕಾರವು ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿ(DUSIB) ಅಡಿಯಲ್ಲಿ ಪುರಷರು, ಮಹಿಳೆಯರು ಹಾಗೂ ಕುಟುಂಬವನ್ನು ಹೊಂದಿರುವವರಿಗಾಗಿ 215 ವಸತಿ ಕೇಂದ್ರಗಳನ್ನು ಸ್ಥಾಪಿಸಿದೆ. ಇವುಗಳಲ್ಲಿ ಪ್ರಸ್ತುತ 8,754 ನಿರಾಶ್ರಿತ ಜನರು ಬದುಕು ಸಾಗಿಸುತ್ತಿದ್ದಾರೆ. ಅಲ್ಲದೆ ನಿರಾಶ್ರಿತರು ದೂರು ನೀಡಲು 'Rain Basera' ಆ್ಯಪ್ ತೆರೆದಿದೆ. ಆಶ್ರಯಕ್ಕಾಗಿ ಆ್ಯಪ್ ಮೂಲಕ ದೂರು ಮತ್ತು ಅರ್ಜಿಯನ್ನು ಸಲ್ಲಿಸಬಹುದು.
ಆದರೆ, ಕರ್ನಾಟಕದಲ್ಲಿ ಎಲ್ಲಾ ಸ್ಕೀಮ್ ಗಳು ಯೋಜನಾ ಪುಟಗಳಲ್ಲೇ ಉಳಿದುಹೋಗಿದ್ದು, ಬೆಂಗಳೂರಿನಲ್ಲಿರುವ 5,000 ನಿರಾಶ್ರಿತರಿಗೆ 8 ಕೇಂದ್ರಗಳನ್ನಷ್ಟೇ ತೆರೆದಿಯಲಾಗಿದೆ. ಇಂತಹ ಜನಪರ ಕಾಳಜಿಯಿಲ್ಲದ, ಬೇಜವಾಬ್ದಾರಿ ಆಡಳಿತದಿಂದಾಗಿ ಜನರು ಬದುಕುವುದಕ್ಕೂ ಗಾಳಿ, ಮಳೆ, ಚಳಿಯೊಂದಿಗೆ ಸೆಣಸಾಡುವಂತಾಗಿದೆ. ಹಾಗಾಗಿ ಸರ್ಕಾರ ಮತ್ತು ಬಿಬಿಎಂಪಿ ಕೂಡಲೇ ಎಚ್ಚೆತ್ತುಕೊಂಡು ಉತ್ತಮ ಸೌಲಭ್ಯವುಳ್ಳ ಅಗತ್ಯವಿರುವಷ್ಟು ವಸತಿ ಕೇಂದ್ರಗಳನ್ನು ತೆರೆದು ನಿರಾಶ್ರಿತರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ.