ರಸ್ತೆ ಗುಂಡಿಗಳ ಹಬ್ಬ, ಗುಂಡಿಗಳಿಗೆ ಪೂಜೆ, ಸರಣಿ ಪ್ರತಿಭಟನೆ
ಬೆಂಗಳೂರು, ಅಕ್ಟೋಬರ್ 19: ನಗರದೆಲ್ಲೆಡೆ ರಸ್ತೆ ಗುಂಡಿಗಳು ವಿಪರೀತ ಹೆಚ್ಚಾಗಿ, ಜೀವ ತೆಗೆಯುವಷ್ಟು ಅಪಾಯಕಾರಿ ಮಟ್ಟ ತಲುಪಿರುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿಯು ಬುಧವಾರ(ಅ.20) ದಂದು ರಸ್ತೆ ಗುಂಡಿಗಳ ಹಬ್ಬ ಹಮ್ಮಿಕೊಂಡಿದೆ.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಹಾಗೂ ಬೆಂಗಳೂರು ನಗರದ ಎಎಪಿ ಅಧ್ಯಕ್ಷರಾದ ಮೋಹನ್ ದಾಸರಿ ನೇತೃತ್ವದಲ್ಲಿ ಈ ಅಭಿಯಾನ ನಡೆಯಲಿದೆ. ಅಕ್ಟೋಬರ್ 20ರ ಬುಧವಾರದಂದು ಬೆಳಗ್ಗೆ 10 ಗಂಟೆಯಿಂದ ಸಂಜೆಯವರೆಗೆ ಬೆಂಗಳೂರಿನ ಎಲ್ಲಾ ಹಳೆಯ 198 ವಾರ್ಡ್ಗಳಲ್ಲಿ ನಡೆಯುವ ಅಭಿಯಾನದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಅಪಾಯಕಾರಿ ಗುಂಡಿಗಳನ್ನು ಗುರುತಿಸಿ, ಅದರ ಸುತ್ತ ರಂಗೋಲಿ ಹಾಕಿ, ದೀಪ ಹಚ್ಚುವ ಮೂಲಕ ರಸ್ತೆಗುಂಡಿಗಳ ಹಬ್ಬ ನೆರವೇರಲಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರವು 20,000 ಕೋಟಿ ರೂಪಾಯಿಯನ್ನು ಖರ್ಚು ಮಾಡಿದ್ದರೂ ರಾಜಧಾನಿಯ ರಸ್ತೆಗಳು ದುಸ್ಥಿತಿಯಲ್ಲಿ ಇರುವುದರ ಕುರಿತು ಜಾಗೃತಿ ಮೂಡಿಸಲು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಜನಪ್ರತಿನಿಧಿಗಳು ತಮ್ಮ ಜೇಬು ತುಂಬಿಸಿಕೊಳ್ಳಲು ಕಳಪೆ ಕಾಮಗಾರಿ ಮಾಡಿರುವುದನ್ನು ಆಮ್ ಆದ್ಮಿ ಪಾರ್ಟಿಯು ಜನರ ಮುಂದೆ ಬಯಲು ಮಾಡಲಿದೆ.

ಬಿಬಿಎಂಪಿ ಲೆಕ್ಕದಲ್ಲಿ 198 ರಸ್ತೆಗುಂಡಿ ಮಾತ್ರ!
ಸೆಪ್ಟಂಬರ್ 20 ರವೆರೆಗೆ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿಗೆ ಸರ್ಕಾರ ಗಡುವು ನೀಡಿತ್ತು. ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ 1,344 ಕಿಮೀ ವ್ಯಾಪ್ತಿಯಲ್ಲಿ ಟೆಂಡರ್ ಶ್ಯೂರ್ ಮತ್ತು ವೈಟ್ ಟಾಪಿಂಗ್ ಕೆಲಸಗಳು ನಡೆಯುತ್ತಿವೆ. ಜಯಮಹಲ್, ಮರಿಗೌಡ, ರಿಚ್ಮಂಡ್, ಗೊರಗುಂಟೆಪಾಳ್ಯ, ರಾಜಕುಮಾರ ಸಮಾಧಿ ಎದುರಿನ ರಸ್ತೆ ಮತ್ತು ಯಶವಂತಪುರದಿಂದ ಗೊರಗುಂಟೆಪಾಳ್ಯದವರೆಗೆ ರಸ್ತೆಗಳು ಹಾಳಾಗಿವೆ ಎಂದು ಬಿಬಿಎಂಪಿ ಆಯುಕ್ತರು ಒಪ್ಪಿಕೊಂಡಿದ್ದಾರೆ, ಈ ರಸ್ತೆಗಳಲ್ಲಿ ಸದ್ಯ ಡಾಂಬರೀಕರಣ ನಡೆಯುತ್ತಿದೆ ಎಂದು ಹೇಳಿದ್ದಾರೆ. ಆದರೆ ಇದುವರೆಗೂ ಎಷ್ಟು ರಸ್ತೆಗುಂಡಿಗಳನ್ನು ಮುಚ್ಚಿದ್ದಾರೆ ಎಂಬ ಬಗ್ಗೆ ಆಯುಕ್ತರು ಮತ್ತು ಬಿಬಿಎಂಪಿ ಎಂಜಿನಿಯರ್ಗಳು ಮಾಹಿತಿ ನೀಡಲಿಲ್ಲ, ಕೇವಲ ಇನ್ನೂ 198 ರಸ್ತೆಗುಂಡಿ ಮಾತ್ರ ಮುಚ್ಚಬೇಕು ಎಂದು ಹೇಳಿದ್ದಾರೆ
ಈ ನಡುವೆ ಇತ್ತೀಚೆಗೆ ರಸ್ತೆಗುಂಡಿಯಿಂದ ಅಪಘಾತವಾಗಿ ಸಾವು ಸಂಭವಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ''ರಸ್ತೆ ಗುಂಡಿ ಮುಚ್ಚುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ರಸ್ತೆ ಗುಂಡಿ ಮುಚ್ಚವಂತೆಯೂ ಸೂಚನೆ ನೀಡಲಾಗಿದೆ. ಮಳೆ ನಿಂತ ತಕ್ಷಣ ಯುದ್ಧೋಪಾದಿಯಲ್ಲಿ ಕೆಲಸ ಆರಂಭವಾಗುತ್ತೆ. ಗುಂಡಿ ಮುಚ್ಚುವ ಕೆಲಸ ಮಾಡಲಾಗುವುದು, ಎಂದಿದ್ದರು.

ಅ.30 ಡೆಡ್ ಲೈನ್
ಬಿ ಕ್ಲಿಪ್ ಅಲುಮ್ನಿ ಅಸೋಸಿಯೇಷನ್, ಕರ್ನಾಟಕ ರಾಜ್ಯ ಮೋಟಾರು ವಾಹನ ಸವಾರರ ಸಂಘದ ಕಾರ್ಯಕರ್ತರು ರಸ್ತೆ ಗುಂಡಿ ಪೂಜೆ ನೆರವೇರಿಸಿ ಪ್ರತಿಭಟನೆ ಮಾಡಿದ್ದಾರೆ. ಅಕ್ಟೋಬರ್ 30ರೊಳಗೆ ರಸ್ತೆ ಗುಂಡಿ ಮುಚ್ಚುವಂತೆ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದಾರೆ.
ಒಂದು ವೇಳೆ ಸರ್ಕಾರದಿಂದ ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗದಿದ್ದಲ್ಲಿ, ಪ್ರತಿ ವಾರ್ಡುಗಳಲ್ಲಿ ರಸ್ತೆಗುಂಡಿ ಪೂಜೆ ನಡೆಯಲಿದೆ. ಇದರಿಂದಲಾದರೂ ಆಡಳಿತದಲ್ಲಿರುವವರು ಮೌನಕ್ಕೆ ಅಂಜಿ, ತಮ್ಮ ಕರ್ತವ್ಯ ನಿರ್ವಹಿಸುತ್ತಾರೋ ನೋಡಬೇಕಿದೆ ಎಂದು ಬಿ ಕ್ಲಿಪ್ ಅಲುಮ್ನಿ ಅಸೋಸಿಯೇಷನ್ ಉಪಾಧ್ಯಕ್ಷೆ ಕವಿತಾ ರೆಡ್ಡಿ ಹೇಳಿದ್ದಾರೆ.
ಇತ್ತೀಚೆಗೆ ಚಾಲುಕ್ಯ ವೃತ್ತದ ಬಳಿ ರಸ್ತೆಗುಂಡಿಗೆ ಅರಿಶಿನ, ಕುಂಕುಮ ಹಾಕಿ ಆರತಿ ಬೆಳಗಿ ಪೂಜೆ ನೆರವೇರಿಸಿ, ಯಾರಿಗೂ ತೊಂದರೆ ಮಾಡಬೇಡ ಎಂದು ಬೇಡಿಕೊಂಡು, ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದರು.
''ನ್ಯಾಯಾಲಯಕ್ಕೂ ಸರ್ಕಾರ ತಪ್ಪು ಲೆಕ್ಕ ನೀಡುತ್ತಿದೆ. 246 ಕಿ. ಮೀ ಮಾತ್ರ ರಸ್ತೆಗುಂಡಿ ಸಮಸ್ಯೆ ಎದುರಿಸುತ್ತಿದೆ ಎಂದು ಹೈಕೋರ್ಟ್ ಮುಂದೆ ಸರ್ಕಾರ ಹೇಳಿಕೊಂಡಿದೆ. ಆದರೆ, ಬಿಬಿಎಂಪಿಯ 13, 847 ಕಿ.ಮೀ ವ್ಯಾಪ್ತಿಯಲ್ಲಿ ಎಷ್ಟು ರಸ್ತೆಗುಂಡಿಗಳಿವೆ ಎಂಬ ಸರ್ವೆ ಯಾರು ಮಾಡಿಲ್ಲ,'' ಎಂದು ಕರ್ನಾಟಕ ರಾಜ್ಯ ವಾಹನ ಸವಾರರ ಸಂಘದ ಅಧ್ಯಕ್ಷ ರಾಘವೇಂದ್ರ ಹೇಳಿದರು.












Click it and Unblock the Notifications