ಬಿಬಿಎಂಪಿ ಸದಸ್ಯತ್ವ ಅಭಿಯಾನ, 50 ದಿನಗಳಲ್ಲಿ 10 ಲಕ್ಷ ನೋಂದಣಿ
ಬೆಂಗಳೂರು, ಮಾರ್ಚ್ 13: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೂರನೇ ಬಾರಿಗೆ ಜನ ಮನ್ನಣೆ ಪಡೆದು ಸರ್ಕಾರ ರಚಿಸಿದ ಆಮ್ ಆದ್ಮಿ ಪಕ್ಷದ ಬಗ್ಗೆ ಜನರಲ್ಲಿ ಸಾಕಷ್ಟು ಭರವಸೆ ಮೂಡಿದೆ. ಈ ನಿಟ್ಟಿನಲ್ಲಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ದೆಹಲಿ ಅಭಿವೃದ್ಧಿ ಮಾದರಿಯನ್ನು ಬೆಂಗಳೂರಿನಲ್ಲಿಯೂ ಜಾರಿಗೊಳಿಸಿ ''ಹೊಸ ಬೆಂಗಳೂರಿಗೆ'' ಮುನ್ನುಡಿ ಬರೆಯುವುದು ನಮ್ಮ ಉದ್ದೇಶ. ಆದ ಕಾರಣ 50 ದಿನಗಳಲ್ಲಿ ಸುಮಾರು 10 ಲಕ್ಷ ಸದಸ್ಯರನ್ನು ಪಕ್ಷದತ್ತ ಸೆಳೆಯುವ ಉದ್ದೇಶ ಇದಾಗಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಮಾಹಿತಿ ನೀಡಿದರು.
ಶುಕ್ರವಾರದಂದು ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ನಗರದ ಎಲ್ಲಾ ವಾರ್ಡ್ಗಳಲ್ಲಿಯೂ ಈಗಾಗಲೇ ''ಬೃಹತ್ ಸದಸ್ಯತ್ವ ಅಭಿಯಾನ'' ಪ್ರಾರಂಭಿಸಲಾಗಿದ್ದು ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ಗಳಲ್ಲೂ ನಡೆಯಲಿದೆ. ವಾರ್ಡ್ ಹಾಗೂ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರ ನೇತೃತ್ವದಲ್ಲಿ ಈ ಅಭಿಯಾನ ನಡೆಯಲಿದ್ದು ಪ್ರತಿ ವಾರ್ಡಿನಲ್ಲಿ ಸುಮಾರು 5 ಸಾವಿರ ಮಂದಿಯನ್ನು ಸದಸ್ಯತ್ವ ಮಾಡಿಸಿಕೊಳ್ಳುವ ಗುರಿ ಇದೆ ಎಂದು ಹೇಳಿದರು.
ದೆಹಲಿ ಚುನಾವಣೆಯ ಫಲಿತಾಂಶದ ನಂತರದ 24 ಗಂಟೆಯಲ್ಲಿ ಸುಮಾರು 11 ಲಕ್ಷ ಜನರು 7412-042-042 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಎಎಪಿಯನ್ನು ಬೆಂಬಲಿಸಿದ್ದಾರೆ. ಇದರಲ್ಲಿ ಸುಮಾರು 35 ಸಾವಿರದಷ್ಟು ಜನ ಬೆಂಗಳೂರಿಗರು ಎನ್ನುವುದು ಸಂತಸದ ಸಂಗತಿ ಎಂದರು.
ಎಎಪಿ ಫಲಶ್ರುತಿ: ಬಿಎಂಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿ ಶಾಂತಲಾ ದಾಮ್ಲೆ ಮಾತನಾಡಿ, ಹಲವಾರು ವರ್ಷಗಳಿಂದ ಅಧಿಕಾರಕ್ಕೆ ಬರುತ್ತಿರುವ ಶಾಸಕರು, ಕಾರ್ಪೋರೇಟರ್ಗಳು ತಮಗೆ ಇಷ್ಟ ಬಂದ ಹಾಗೆ ಕೆಲಸ ಮಾಡುತ್ತಿರುವ ಕಾರಣ ''ಬೆಂಗಳೂರು ಕುಸಿಯುತ್ತಿದೆ''. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ದುರಾಡಳಿತ, ಕಸದ ಸಮಸ್ಯೆ, ಕಲುಷಿತ ನೀರು, ಹದಗೆಟ್ಟ ರಸ್ತೆಗಳಿಂದಾಗಿ ಬೇಸತ್ತ ಜನರು ಪರ್ಯಾಯ ರಾಜಕಾರಣವನ್ನು ಬಯಸುತ್ತಿದ್ದಾರೆ. ಆದ ಕಾರಣ ಮುಂಬರುವ ಬಿಬಿಎಂಪಿ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಪಕ್ಷವು ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದೆ ಎಂದು ಹೇಳಿದರು.
ಜನ ಸಾಮಾನ್ಯ ಈಗಲೂ ಸಹ ಮೂಲ ಸೌಕರ್ಯಗಳು ಇಲ್ಲದೆ ಕಷ್ಟ ಪಡಬೇಕಾದ ಪರಿಸ್ಥಿತಿಯಲ್ಲೇ ಬದುಕುತ್ತಿದ್ದಾನೆ. ಇದಕ್ಕೆಲ್ಲ ಪರಿಹಾರ ಆಮ್ ಆದ್ಮಿ ಪಕ್ಷದ ಬಳಿ ಇದೆ. ಆದ್ದರಿಂದಲೇ ದೆಹಲಿ ಜನ ನಮ್ಮ ಪಕ್ಷದ ಕಾಯಕದ ರಾಜಕೀಯಕ್ಕೆ ಬೆಲೆಕೊಟ್ಟು ಮೂರನೇ ಬಾರಿಗೆ ಅಧಿಕಾರಕ್ಕೆ ತಂದಿದ್ದಾರೆ. ಬಿಬಿಎಂಪಿಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ''ಹೊಸ ಬೆಂಗಳೂರಿಗೆ'' ಮುನ್ನುಡಿ ಬರೆಯಲಾಗುವುದು ಎಂದು ತಿಳಿಸಿದರು.ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಭಾಗವಹಿಸಿದ್ದರು.