ಬೆಂಗಳೂರು ಎಲಿವೇಟೆಡ್ ಕಾರಿಡಾರ್ಗೆ ಎಎಪಿ ವಿರೋಧ
ಬೆಂಗಳೂರು, ಜುಲೈ 30: ಸರ್ಕಾರ ನಿರ್ಮಿಸಲು ಇಚ್ಛಿಸಿರುವ 'ಬೆಂಗಳೂರು ಎಲಿವೇಟೆಡ್ ಕಾರಿಡಾರ್' ಯೋಜನೆಗೆ ರಾಜ್ಯ ಎಎಪಿ ವಿರೋಧ ವ್ಯಕ್ತಪಡಿಸಿದ್ದು, ಇದೊಂದು ವಿವೇಚನಾ ರಹಿತ ಯೋಜನೆ ಎಂದು ಟೀಕಿಸಿದೆ.
ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಮೆಟ್ರೋಪಾಲಿಟಿನ್ ಪ್ಲಾನಿಂಗ್ ಕಮಿಟಿ (ನಗರ ಯೋಜನಾ ಸಮಿತಿ)ಯ ಶಿಫಾರಸ್ಸುಗಳನ್ನು ಉಲ್ಲಂಘಿಸಿ ತಯಾರಿಸಲಾಗಿದೆ ಎಂದು ಎಎಪಿಯು ಆಕ್ಷೇಪ ಎತ್ತಿದೆ.
ಎಲಿವೇಟೆಡ್ ಕಾರಿಡಾರ್ನಿಂದ ಪರಿಸರದ ಮೇಲಿನ ಪರಿಣಾಮ: ವರದಿ ಶೀಘ್
15,825 ಕೋಟಿ ವೆಚ್ಚದಲ್ಲಿ ಸರ್ಕಾರವು ಬೆಂಗಳೂರಿನಲ್ಲಿ ಎಲಿವೇಟೆಡ್ ಕಾರಿಡಾರ್ (ಎತ್ತರಿಸಿದ ರಸ್ತೆ) ನಿರ್ಮಾಣ ಮಾಡಲು ಇಚ್ಛಿಸಿದ್ದು. ಹೆಬ್ಬಾಳ, ಸಿಲ್ಕ್ಬೋರ್ಡ್, ಕೆ.ಆರ್.ಪುರ, ಗೊರಗುಂಟೆಪಾಳ್ಯ, ವರ್ತೂರು ಕೋಡಿ, ಜ್ಞಾನ ಭಾರತಿ ನಡುವೆ ಈ ರಸ್ತೆ ನಿರ್ಮಾಣವಾಗಲಿದೆ.
ರಸ್ತೆ ನಿರ್ಮಾಣಕ್ಕೆಂದೇ ಮೀಸಲಾಗಿರುವ ಅನುದಾನವನ್ನು ಖರ್ಚು ಮಾಡುವ ಉದ್ದೇಶದಿಂದಷ್ಟೆ ಈ ಕಾರಿಡಾರ್ ಅನ್ನು ನಿರ್ಮಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಾರಿಡಾರ್ ನಿರ್ಮಾಣದ ಬದಲಿಗೆ ಉಪನಗರ ರೈಲು ವ್ಯವಸ್ಥೆ, ಬಸ್ ವ್ಯವಸ್ಥೆ ಬಗ್ಗೆ ಸರ್ಕಾರ ಗಮನ ನೀಡಲಿ ಎಂದು ಎಎಪಿ ಕರ್ನಾಟಕ ಸಲಹೆ ನೀಡಿದೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷಗಳ ಸರ್ಕಾರಗಳಾಗಲಿ ಭ್ರಷ್ಟಾಚಾರಕ್ಕೆ ಅನುಕೂಲ ಮಾಡಿಕೊಡುವಂತಹಾ ಯೋಜನೆಗಳಿಗೆ ಒತ್ತು ನೀಡುತ್ತವೆಯಷ್ಟೆ ಅದರ ಬದಲಿಗೆ ಜನರ ಒಳಿತಿಗೆ ಯಾವುದು ಅವಶ್ಯಕತೆ ಇದೆಯೋ ಆ ರೀತಿಯ ಯೋಜನೆಗಳನ್ನು ನೀಡುತ್ತಿಲ್ಲ ಎಂದು ಅವರು ಹೇಳಿದರು.
ನಗರದ ಯೋಜನೆಯನ್ನು ನಗರ ಯೋಜನಾ ಸಮಿತಿಯೇ ಮಾಡಬೇಕು ಎಂಬ ನಿಯಮವಿದ್ದರೂ ಸಹ ಈ ಸರ್ಕಾರ, ಇದರ ಹಿಂದಿನ ಸರ್ಕಾರಗಳು ಈ ನಿಯಮವನ್ನು ಗಾಳಿಗೆ ತೂರುತ್ತಾ ಬಂದಿವೆ. ಹೈಕೋರ್ಟ್ ಸಹ ಈ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಆದರೂ ಸಹ ಸರ್ಕಾರಗಳು ಯೋಜನಾ ಸಮಿತಿಯ ರಚನೆಯನ್ನೇ ಮಾಡಿಲ್ಲ ಎಂದು ಎಎಪಿ ಕರ್ನಾಟಕದ ರಾಜ್ಯ ಸಂಚಾಲಕ ರವಿಕುಮಾರ್ ರೆಡ್ಡಿ ಹೇಳಿದ್ದಾರೆ.
ಎಲಿವೇಟೆಡ್ ಕಾರಿಡಾರ್ಗಾಗಿ ಸರ್ಕಾರ 15000 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲು ತಯಾರಾಗಿದೆ. ಆದರೆ ಇದೇ ಮೊತ್ತವನ್ನು ಅದು, ಉಪನಗರ ರೈಲು, ಬಸ್ ವ್ಯವಸ್ಥೆ, ಫುಟ್ಪಾತ್ ನಿರ್ಮಾಣಕ್ಕೆ ಬಳಸಿದಲ್ಲಿ ಟ್ರಾಫಿಕ್ ತಪ್ಪಿಸುವ ಅದರ ಉದ್ದೇಶ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದ್ದಾರೆ.