'ಕೋಳಿವಾಡ ಸಮಿತಿ ಅಂದ್ರೆ ಟುಸ್ ಪಟಾಕಿ'
ಬೆಂಗಳೂರು, ಮೇ 12 : ಬೆಂಗಳೂರು ನಗರದಲ್ಲಿ ಮೆರೆಯುತ್ತಿದ್ದ ರಿಯಲ್ ಎಸ್ಟೇಟ್ ಮಾಫಿಯಾಗೆ ಹಸಿರು ನ್ಯಾಯಮಂಡಳಿ ಆದೇಶ ಶವಪೆಟ್ಟಿಗೆಯಾಗಿ ಪರಿಣಮಿಸಲಿದೆ. ಆಮ್ ಆದ್ಮಿ ಪಕ್ಷ ಬೆಂಗಳೂರು ನಗರದಲ್ಲಿ ನಡೆಯುತ್ತಿದ್ದ ಭೂಗಳ್ಳತನವನ್ನು ಸತತವಾಗಿ ವಿರೋಧ ಮಾಡುತ್ತಾ ಇದರ ವಿರುದ್ಧ ಹೋರಾಡುತ್ತಾ ಬಂದಿತ್ತು, ಹಸಿರು ನ್ಯಾಯಮಂಡಳಿ ತೀರ್ಪಿನಿಂದ ನಗರದ ಕೆರೆಗಳಿಗೆ ಮರುಜೀವ ಸಿಕ್ಕಂತಾಗಿದೆ.
ರಾಜ್ಯ ಸರ್ಕಾರ ಬೆಂಗಳೂರು ನಗರದಲ್ಲಿ ಆಗಿರುವ ಕೆರೆ ಹಾಗೂ ರಾಜಕಾಲುವೆ ಒತ್ತುವರಿಗಳ ಕುರಿತು ವರದಿ ಸಲ್ಲಿಸುವಂತೆ ಶಾಸಕರಾದ ಕೆ.ಬಿ ಕೋಳಿವಾಡ ನೇತೃತ್ವದ ಸಮಿತಿಯನ್ನು ರಚಿಸಿತ್ತು. 2016ರ ಜನವರಿಯಲ್ಲಿ ಸ್ವತಃ ಕೋಳಿವಾಡ ಸಮಿತಿ ಪತ್ರಿಕಾಗೋಷ್ಠಿ ನಡೆಸಿ ದೊಡ್ಡ ದೊಡ್ಡ ಕುಳಗಳು ನಗರದ ಜಮೀನು ಒತ್ತುವರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿತು.[ಬೆಂಗಳೂರಿನ ಕೆರೆಗಳು ನಕ್ಷೆಯಲ್ಲಿ ಮಾತ್ರ ಇವೆ]

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ನ ಪ್ರಭಾವಿ ರಾಜಕೀಯ ನಾಯಕರು ಇದರಲ್ಲಿ ಭಾಗಿಯಾಗಿದ್ದಾರೆ. ಅತ್ಯಂತ ದೊಡ್ಡ ಮಟ್ಟದಲ್ಲಿ ಬೋಗಸ್ ದಾಖಲೆಗಳನ್ನು ಸೃಷ್ಟಿಮಾಡಿ ಭಾರೀ ಪ್ರಮಾಣದಲ್ಲಿ ಕೆರೆದಂಡೆ ಹಾಗೂ ರಾಜಕಾಲುವೆ ಒತ್ತುವರಿ ಮಾಡಲಾಗಿದೆ ಎಲ್ಲಾ ಒತ್ತುವರಿದಾರರ ಜಾತಕ ಬಯಲು ಮಾಡುವುದಾಗಿ ಹೇಳಿಕೆ ನೀಡಿದ್ದರು. [ಕೆರೆ ಒತ್ತುವರಿ : ಸದನ ಸಮಿತಿಗೆ ಅಚ್ಚರಿ!]
ಆದರೆ, ಮಾಧ್ಯಮದ ಮುಂದೆ ಬೊಗಳೆ ಬಿಟ್ಟಿದ್ದು ಬಿಟ್ಟರೆ, ರಾಜ್ಯ ಸರ್ಕಾರದ ಮುಂದೆ ಕೋಳಿವಾಡ ಸಮಿತಿ ಯಾವುದೇ ವರದಿಯನ್ನು ಸಲ್ಲಿಸಿಲ್ಲ. ಇದೆಲ್ಲವನ್ನೂ ನೋಡಿದರೆ, ಕೋಳಿವಾಡ ಸಮಿತಿ ಭೂಮಾಫಿಯಾಗೆ ಮಣಿದಿದೆಯೇ? ಅಥವಾ ಭೂ ಒತ್ತುವರಿದಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಯೇ? ಎಂಬ ಅನುಮಾನ ಮೂಡಿಸುವಂತಿದೆ ಆಮ್ ಆದ್ಮಿ ಪಕ್ಷ ಹೇಳಿದೆ. [ಬೆಂಗಳೂರು ಕೆರೆಗಳ ಸ್ಥಿತಿ ನೋಡಿ]
ಮಾನ್ಯ ಮುಖ್ಯಮಂತ್ರಿಗಳೇ ಸ್ವತಃ ನೇಮಿಸಿರುವ ಬೆಂಗಳೂರು ಅಭಿವೃದ್ಧಿ ಮಂತ್ರಿಗಳೂ ಸೇರಿದಂತೆ ಸಂಪುಟದ ಅನೇಕ ಸಚಿವರು ಕೂಡ ಈ ಒತ್ತುವರಿಯಲ್ಲಿ ಭಾಗಿಯಾಗಿದ್ದಾರೆಯೇ? ಎಂಬ ಶಂಕೆ ಮೂಡುತ್ತಿದೆ. ರಾಜಕಾಲುವೆ ಒತ್ತುವರಿಯಿಂದ ನಗರದಲ್ಲಿ ಒಂದು ಸಣ್ಣ ಮಳೆಯಾದರೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತದೆ ಇದನ್ನು ಈ ಕೂಡಲೇ ಸರಿಪಡಿಸುವ ಅಗತ್ಯವಿದೆ ಎಂದು ಪಕ್ಷ ಹೇಳಿದೆ.
ಸರ್ಕಾರ ಲೋಕಾಯುಕ್ತ ಅಥವ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಒಂದು ಸ್ವತಂತ್ರ ಸಮಿತಿ ರಚಿಸಿ ನಗರದ ಭೂ ಒತ್ತುವರಿ ಕುರಿತು ತನಿಖೆ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ. ಒತ್ತುವರಿದಾರರ ಹೆಸರು ಬಹಿರಂಗ ಮಾಡುವುದು ಬಿಟ್ಟು, ತಪ್ಪಿತಸ್ಥರ ವಿರುದ್ಧ ತತಕ್ಷಣವಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಕ್ಷ ಒತ್ತಾಯಿಸಿದೆ.












Click it and Unblock the Notifications