Oppostition Meeting: ಐಎಎಸ್ ಅಧಿಕಾರಿಗಳು ಸ್ವರ್ಗದಿಂದ ಬಂದಿಲ್ಲ: ಬಿಜೆಪಿ-ಜೆಡಿಎಸ್ ಧರಣಿ ಖಂಡಿಸಿದ ಎಎಪಿ
ಬೆಂಗಳೂರು, ಜುಲೈ 20: ಬೆಂಗಳೂರು ನಗರದಲ್ಲಿ ಎರಡು ದಿವಸಗಳ ಹಿಂದೆ ನಡೆದ 'ಇಂಡಿಯಾ ವಿಪಕ್ಷಗಳ' ಸಭೆಯಲ್ಲಿ ಅನೇಕ ನಾಯಕರು ಪಾಲ್ಗೊಂಡಿದ್ದರು. ಈ ವೇಳೆ ಅವರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳನ್ನು ನೇಮಿಸಿದ್ದಾರೆ ಎಂಬ ಸಣ್ಣ ವಿಚಾರವನ್ನು ಬಿಜೆಪಿ ಹಾಗೂ ಜೆಡಿಎಸ್ ದೊಡ್ಡದನ್ನಾಗಿ ಮಾಡುತ್ತಿವೆ ಎಂದು ಬಿಜೆಪಿ ಧರಣಿಯನ್ನು ಎಂದು ಆಮ್ ಆದ್ಮಿ ಪಕ್ಷ ಟೀಕಿಸಿದೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ಬ್ರಿಜೇಶ್ ಕಾಳಪ್ಪ ಅವರು ಕೇಂದ್ರ ವಿರೋಧ ಪಕ್ಷಗಳ ಸಭೆಗೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಹಾಲಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳನ್ನು ಹಾಗೂ ಮಾಜಿ ಕೇಂದ್ರ ಸಚಿವರುಗಳನ್ನು ಐಎಎಸ್ ಅಧಿಕಾರಿಗಳು ಸ್ವಾಗತಿಸಿದ್ದರು.

ಈ ವಿಚಾರವನ್ನು ಮುಂದಿಟ್ಟುಕೊಂಡು ವಿಧಾನಸಭೆಯಲ್ಲಿ ನಡೆಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಉಪ ಸಭಾಪತಿಗಳ ವಿರುದ್ಧದ ಅನುಚಿತ ವರ್ತನೆಯು ಇವರುಗಳ ಹತಾಶ ಭಾವನೆಯನ್ನು ತೋರಿಸುತ್ತದೆ ಎಂದು ಅವರು ವಾಗ್ದಾಳಿ ಅವರು ನಡೆಸಿದರು.
ಕಲಾಪ ಹಾಳು ಮಾಡುವುದು ಸರಿಯಲ್ಲ: ಎಎಪಿ
ಸಭೆಯಲ್ಲಿ ಭಾಗವಹಿಸಿದ್ದವರ ಅದರಲ್ಲೂ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಬಂದಾಗ ಸ್ವಾಗತ ಕೋರುವುದು ದೇಶದ ಪರಿಪಾಠ ಹಾಗೂ ಸಂಪ್ರದಾಯ. ಇಂತಹ ಗಣ್ಯಾತಿ ಗಣ್ಯ ವ್ಯಕ್ತಿಗಳು ರಾಜ್ಯಕ್ಕೆ ಬಂದಾಗ ಹಿರಿಯ ಐಎಎಸ್ ಅಧಿಕಾರಿಗಳು ಸ್ವಾಗತ ಕೋರುವರಲ್ಲಿ ಯಾವುದೇ ತಪ್ಪಿಲ್ಲ. ಅಲ್ಲದೇ ಐಎಎಸ್ ಅಧಿಕಾರಿಗಳೇನು ಸ್ವರ್ಗದಿಂದ ಬಂದವರಲ್ಲ. ಹೀಗಿರುವಾಗ ಸುಖಾ ಸುಮ್ಮನೇ ರಾಜಕೀಯವನ್ನು ಬೆರೆಸಿ ವಿಧಾನಸಭೆಯ ಕಲಾಪಗಳನ್ನು ಹಾಳು ಮಾಡುವುದು ಸರಿಯಲ್ಲ ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದರು.
ಇಂಡಿಯಾ ವಿಪಕ್ಷಗಳ ಸಭೆ ನಡೆಯುವಾಗಲೇ ದೆಹಲಿಯಲ್ಲಿ ಎನ್ಡಿಎ ಮಿತ್ರ ಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ 38 ಪಕ್ಷಗಳಲ್ಲಿ 26 ಪಕ್ಷಗಳಲ್ಲಿ ಯಾರು ಸಹ ಲೋಕಸಭಾ ಸದಸ್ಯರು ಇಲ್ಲ. ಇವುಗಳಲ್ಲಿ 10 ಪಕ್ಷಗಳು 2019ರ ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸೇ ಇಲ್ಲ ಎಂದು ತಿಳಿಸಿದರು.

ಎನ್ಡಿಎ ಸಭೆ ಸೇರಿದ್ದ ಪಕ್ಷಗಳಲ್ಲಿ 8 ಪಕ್ಷಗಳಿಗೆ ಸೇರಿಸಿ ಕೇವಲ 9ಸಂಸದರು ಮಾತ್ರ ಇದ್ದರು. ಇವುಗಳಲ್ಲಿ 11 ಪಕ್ಷಗಳು ಮಾನ್ಯತೆಯನ್ನೇ ಪಡೆದಿಲ್ಲ. ಇಂತಹವರೊಂದಿಗೆ ಪ್ರಧಾನಮಂತ್ರಿಗಳು ಭಾಗವಹಿಸುವುದು ಅಗೌರವ ಎಂದು ಹೇಳಲು ಸಾಧ್ಯವೇ ಎಂದು ಎನ್ಡಿಎ ಸಭೆ ಬಗ್ಗೆ ಲೇವಡಿ ಮಾಡಿದರು.
ರಾಜ್ಯದಲ್ಲಿ ಬರಗಾಲದಂತಹ ತೀವ್ರ ಸಮಸ್ಯೆಗಳು, ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು, ಮಾವು ಬೆಳೆಗಾರರ ಸಂಕಷ್ಟ ಹಾಗೂ ಅನೇಕ ಸಮಸ್ಯೆಗಳು ಇದ್ದಾಗಲೂ ಇವುಗಳ ಬಗ್ಗೆ ಚರ್ಚೆಯೆ ಆಗುತ್ತಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಸದಸ್ಯರುಗಳು ಸದನವನ್ನು ಹಾಳುಗೆಡಗುತ್ತಿರುವುದು ಸಂವಿಧಾನ ವಿರೋಧಿ ಕೃತ್ಯ ಎಂದು ಅವರು ಖಂಡಿಸಿದರು.
ಕಲಾಪದಲ್ಲಿ ಬಿಜೆಪಿ ಪ್ರತಿಭಟನೆ
ಬೆಂಗಳೂರಿನಲ್ಲಿ ಕೇಂದ್ರ ವಿಪಕ್ಷಗಳ ಸಭೆಗೆ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿದ್ದನ್ನು ಬಿಜೆಪಿ ಸದನದಲ್ಲಿ ಪ್ರಸ್ತಾಪಿಸಿತು. ಈ ಕುರಿತು ಮಾತಿಗೆ ಮಾತು ಬೆಳೆದು ಪತ್ರಗಳನ್ನು ಸಭಾಧ್ಯಕ್ಷರ ಮೇಲೆ ಬಿಜೆಪಿ ನಾಯಕರು ತೂರಿದರು. ಸದನದ ಬಾವಿಗೆ ಇಳಿದು ಬಿಜೆಪಿ ನಾಯಕರು ಪ್ರತಿಭಟಿಸಿದರು.
ಕಲಾಪದಲ್ಲಿ ಗಲಾಟೆ ಹೆಚ್ಚಾಗುತ್ತಿದ್ದಂತೆ ಸ್ಪೀಕರ್ ಅವರು ಹಲವು ಬಿಜೆಪಿ ನಾಯಕರನ್ನು ಅಮಾನತು ಮಾಡಿದರು. ಇದೀಗ ಅದಕ್ಕೂ ಸಹ ಬಿಜೆಪಿ ನಾಯಕರು ವಿಧಾನಸೌಧ ಮುಂದೆ ಪ್ರತಿಭಟಿಸುತ್ತಿದ್ದಾರೆ. ಇದನ್ನು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಇತರ ನಾಯಕರು ಬೆಂಬಲಿಸಿದ್ದಾರೆ. ಇದೆಲ್ಲ ಬೆಳವಣಿಗೆಯನ್ನು ಆಮ್ ಆದ್ಮಿ ಪಕ್ಷ ಖಂಡಿಸಿದೆ.












Click it and Unblock the Notifications