ಬಿಬಿಎಂಪಿಯ ಆಸ್ತಿ ತೆರಿಗೆ ಹೆಚ್ಚಳ ಪ್ರಸ್ತಾಪಕ್ಕೆ ಎಎಪಿ ವಿರೋಧ
ಬೆಂಗಳೂರು, ನವೆಂಬರ್ 27 : ಬಿಬಿಎಂಪಿ 2019-20 ನೇ ಸಾಲಿನಿಂದ ಜಾರಿಗೆ ಬರುವಂತೆ ವಸತಿ ಸ್ವತ್ತುಗಳಿಗೆ ಶೇಕಡ 25 ರಷ್ಟು ಹಾಗೂ ವಸತಿಯೇತರ ಆಸ್ತಿಗಳಿಗೆ ಶೇ 30ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿದೆ. ಆಮ್ ಆದ್ಮಿ ಪಕ್ಷ ಬಿಬಿಎಂಪಿಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ.
ಆಸ್ತಿ ತೆರಿಗೆ ಹೆಚ್ಚಿಸುವ ಪರಿಷ್ಕರಣೆಯ ಪ್ರಸ್ತಾವವನ್ನು ಪಾಲಿಕೆ ಆಯುಕ್ತ ಎಂ.ಮಂಜುನಾಥ ಪ್ರಸಾದ್ ಸಿದ್ಧಪಡಿಸಿ ಈಗಾಗಲೇ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಬಿಬಿಎಂಪಿ ಕೌನ್ಸಿಲ್ ಸಭೆಯ ಮುಂದೆ ಮಂಡಿಸಿದ್ದಾರೆ. ಈ ತಿಂಗಳ 28 ಹಾಗೂ 29 ರಂದು ನಡೆಯಲಿರುವ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ .
ಹೆಚ್ಚು ತೆರಿಗೆ ಸಂಗ್ರಹಿಸಿ ಬಹುಮಾನ ಗೆಲ್ಲಿ: ಪ್ರೋತ್ಸಾಹಕ್ಕೆ ಬಿಬಿಎಂಪಿ ಚಿಂತನೆ
ಬಿಬಿಎಂಪಿಯ ಬೆಂಗಳೂರು ವಿರೋಧಿ ಕರಾಳ ಪ್ರಸ್ತಾಪವನ್ನು ಆಮ್ ಆದ್ಮಿ ಪಕ್ಷವು ತೀವ್ರವಾಗಿ ಖಂಡಿಸಿದೆ. ಬಿಬಿಎಂಪಿಯ ಈ ಪ್ರಸ್ತಾವವನ್ನು ಮಂಡಿಸಲು ನೀಡುವ ಕಾರಣಗಳೆಂದರೆ, ಆರ್ಥಿಕ ವ್ಯವಸ್ಥೆ ತೀರಾ ಹದಗೆಟ್ಟಿದೆ, ಕೆಲಸ ಮುಗಿಸಿರುವ ಗುತ್ತಿಗೆದಾರರಿಗೆ ನೀಡಬೇಕಿರುವ ಹಣ ಪಾವತಿಸಲು ಹಾಗೂ ಪ್ರತಿ ಮೂರು ವರ್ಷಗಳಿಗೊಮ್ಮೆ ಪರಿಷ್ಕರಿಸಬೇಕು ಎನ್ನುವ ಕಾರಣಗಳಿಗಾಗಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.
ಬೆಂಗಳೂರಿಗರ ಆಸ್ತಿ ಮೇಲೆ ಬೀಳುತ್ತೆ ಶೇ.25-30 ರಷ್ಟು ಅಧಿಕ ತೆರಿಗೆ ಹೊರೆ
ಬಿಬಿಎಂಪಿಯ ಈ ದುರವಸ್ಥೆಗೆ ಕಾರಣಕರ್ತರಾದವರನ್ನು ಶಿಕ್ಷೆಗೆ ಒಳಪಡಿಸುವ ಬದಲು ಮುಗ್ಧ ಬೆಂಗಳೂರಿನ ನಾಗರಿಕರ ದುಡಿಮೆಯ ಹಣಕ್ಕೆ ಕನ್ನ ಹಾಕಲು ಹೊರಟಿರುವುದು ತೀರಾ ದುರದೃಷ್ಟಕರ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಬಿಬಿಎಂಪಿ ನಕಲಿ ಬಿಲ್ ಹಗರಣ, ಶಾಸಕರ ರಾಜೀನಾಮೆಗೆ ಎಎಪಿ ಒತ್ತಾಯ
ಬಿಬಿಎಂಪಿ ಆರ್ಥಿಕ ಸಂಕಷ್ಟ
ಈಗಾಗಲೇ ಈ ಹಿಂದೆ ಪಾಲಿಕೆಯು 2016ರ ಏಪ್ರಿಲ್ ನಲ್ಲಿ ದುಪ್ಪಟ್ಟು ಆಸ್ತಿ ತೆರಿಗೆಯನ್ನು ಹೆಚ್ಚಿಸಿದ ಸಂದರ್ಭದಲ್ಲಿಯೂ ಸಹ ಇದೇ ಸಬೂಬನ್ನು ಹೇಳಿತ್ತು. ಆದರೂ ಇದುವರೆವಿಗೂ ಪರಿಸ್ಥಿತಿ ಸುಧಾರಣೆ ಆಗಿಲ್ಲ. ಬಿಬಿಎಂಪಿಯಲ್ಲಿ ವ್ಯಾಪಕ ಭ್ರಷ್ಟಾಚಾರ, ಮಿತಿ ಮೀರಿದ ದುಂಡಾವರ್ತಿ, ಅನೇಕ ಅಕ್ರಮಗಳು , ಕಳಪೆ ಕಾಮಗಾರಿಗಳು ,ಅನವಶ್ಯಕ ಕಾಮಗಾರಿ, ದುಂದುವೆಚ್ಚ, ತನಿಖಾ ಸಂಸ್ಥೆಗಳ ಅಧೋಗತಿ ಇಂತಹ ಅನೇಕ ಕಾರಣಗಳಿಂದಾಗಿ ಬಿಬಿಎಂಪಿಯು ಆರ್ಥಿಕ ಸಂಕಷ್ಟಗಳನ್ನು ಎದುರಿಸುವಂತಾಗಿದೆ.
ಆಮ್ ಆದ್ಮಿ ಪಕ್ಷದ ಸವಾಲು
ಬೆಂಗಳೂರಿನ ಶಾಸಕರು ಹಾಗೂ ಪಾಲಿಕೆ ಸದಸ್ಯರು ಮಿತಿ ಮೀರಿದ ಕ್ರಮಗಳಿಂದಾಗಿ ಈ ಪರಿಸ್ಥಿತಿ ಉದ್ಭವಿಸಿದೆ. ಬಿಬಿಎಂಪಿ ಯು ತನ್ನ ಪ್ರತಿ ವರ್ಷದ ಆರ್ಥಿಕ ಲೆಕ್ಕ ಪರಿಶೋಧನಾ ವರದಿಯನ್ನು ಬೆಂಗಳೂರಿಗರ ಮುಂದೆ ಮಂಡಿಸಬೇಕು. ಇದರಲ್ಲಿನ ಖರ್ಚುವೆಚ್ಚಗಳ ಬಗ್ಗೆ ಚರ್ಚೆಯೂ ನಡೆಯಬೇಕಿದೆ.
ಆಯುಕ್ತರು ಇದುವರೆಗೂ ಎಷ್ಟು ಭ್ರಷ್ಟ ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ ಎಂಬ ವಿವರಗಳನ್ನು ಬೆಂಗಳೂರಿನ ನಾಗರಿಕರ ಮುಂದೆ ನೀಡಬೇಕೆಂದು ಆಮ್ ಆದ್ಮಿ ಪಕ್ಷವು ಸವಾಲು ಹಾಕಿದೆ.
ಆಮ್ ಆದ್ಮಿ ಪಕ್ಷದಿಂದ ಹೋರಾಟ
ಸಾವಿರಾರು ಕೋಟಿ ಬೆಂಗಳೂರಿಗರ ತೆರಿಗೆ ಹಣವನ್ನು ಲೂಟಿ ಮಾಡಲೆಂದೇ ಹುಟ್ಟಿರುವ ಈ ನರಕಾಸುರರಿಂದ ಈಗ ಬೆಂಗಳೂರನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ಬೆಂಗಳೂರಿನ ನಾಗರಿಕರ ಮೇಲೆ ಇದೆ ಎಂಬ ಸಂದೇಶವನ್ನು ಆಮ್ ಆದ್ಮಿ ಪಕ್ಷವು ಮುಂದಿನ ದಿನಗಳಲ್ಲಿ ಮನೆ ಮನೆಗಳಿಗೂ ತಲುಪಿಸುವ ಆಶಯವನ್ನು ಹೊಂದಿದೆ.
ವಸತಿ ಆಸ್ತಿಗಳ ಮೇಲೆ ತೆರಿಗೆಯನ್ನು ಹೆಚ್ಚಿಸುವ ಪ್ರಸ್ತಾಪವನ್ನು ಈ ಕೂಡಲೇ ಕೈಬಿಡಬೇಕೆಂದು ಆಮ್ ಆದ್ಮಿ ಪಕ್ಷವು ಒತ್ತಾಯಿಸಿದೆ. ವಸತಿಯೇತರ /ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆಯನ್ನು ಹೆಚ್ಚಿಸುವುದರಲ್ಲಿ ನಮ್ಮ ಆಕ್ಷೇಪಣೆ ಏನೂ ಇಲ್ಲವೆಂದು ಆಮ್ ಆದ್ಮಿ ಪಕ್ಷವು ತಿಳಿಸುತ್ತದೆ.
ಭ್ರಷ್ಟರ ಜೇಬಿಗೆ ಹೋಗುತ್ತಿದೆ
ವಸತಿ ಏತರ ಕಟ್ಟಡಗಳಿಂದ ಆಸ್ತಿ ತೆರಿಗೆ ವಸೂಲಾತಿ ಯಲ್ಲಿ ವ್ಯಾಪಕ ಭ್ರಷ್ಟಾಚಾರ ಇದುವರೆವಿಗೂ ನಡೆದುಕೊಂಡೇ ಬಂದಿದೆ. ಪಾಲಿಕೆ ಅಧಿಕಾರಿಗಳು ಜನಪ್ರತಿನಿಧಿಗಳು ಈ ಭ್ರಷ್ಟಾಚಾರದಲ್ಲಿ ತೊಡಗಿದ್ದು ಸ್ವಯಂಘೋಷಿತ ಆಸ್ತಿ ತೆರಿಗೆ ಯೋಜನೆ ಯಲ್ಲಿ ವಸತಿಏತರ ಕಟ್ಟಡಗಳಿಂದ ವಸೂಲಾಗಬೇಕಾದ ಸಾವಿರಾರು ಕೋಟಿ ರೂಪಾಯಿಗಳು ಪ್ರತಿವರ್ಷವೂ ಭ್ರಷ್ಟರ ಜೇಬಿಗೆ ಹೋಗುತ್ತಿದೆ.
ಯಾವುದೇ ಕಾರಣಕ್ಕೂ ವಸತಿ ಸ್ವತ್ತುಗಳ ಆಸ್ತಿ ತೆರಿಗೆಯನ್ನು ಹೆಚ್ಚಿಸಬಾರದು. ಮುಗ್ಧ ಬೆಂಗಳೂರು ನಿವಾಸಿಗಳ ಜೇಬಿಗೆ ಕತ್ತರಿ ಹಾಕುವಂತಹ ಈ ಪ್ರಸ್ತಾವವನ್ನು ಕೈಬಿಡಬೇಕು ಎಂದು ಆಮ್ ಆದ್ಮಿ ಪಕ್ಷವು ಒತ್ತಾಯಿಸುತ್ತದೆ.
ಬಿಬಿಎಂಪಿ ಪ್ರಸ್ತಾವನ್ನು ಮುಂದುವರಿಸಿದ್ದೇ ಆದಲ್ಲಿ ಪಕ್ಷವು ಬೆಂಗಳೂರಿನ ನಾಗರಿಕರೊಂದಿಗೆ ಪಕ್ಷದ ನೂರಾರು ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಅವರುಗಳೊಂದಿಗೆ ಚರ್ಚಿಸಿ, ವ್ಯಾಪಕ ಆಂದೋಲನ ಹಾಗೂ ಹೋರಾಟಗಳನ್ನು ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಆಮ್ ಆದ್ಮಿ ಪಕ್ಷ ನೀಡಿದೆ.
ಕೌನ್ಸಿಲ್ ಸಭೆಯಲ್ಲಿ ಚರ್ಚೆ
ಬಿಬಿಎಂಪಿ 2019-20 ನೇ ಸಾಲಿನಿಂದ ಜಾರಿಗೆ ಬರುವಂತೆ ವಸತಿ ಸ್ವತ್ತುಗಳಿಗೆ ಶೇಕಡ 25 ರಷ್ಟು ಹಾಗೂ ವಸತಿಯೇತರ ಆಸ್ತಿಗಳಿಗೆ ಶೇ 30ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಲಿದೆ. ಆಮ್ ಆದ್ಮಿ ಪಕ್ಷ ಬಿಬಿಎಂಪಿಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ.
ಆಸ್ತಿ ತೆರಿಗೆ ಹೆಚ್ಚಿಸುವ ಪರಿಷ್ಕರಣೆಯ ಪ್ರಸ್ತಾವವನ್ನು ಪಾಲಿಕೆ ಆಯುಕ್ತ ಎಂ.ಮಂಜುನಾಥ ಪ್ರಸಾದ್ ಸಿದ್ಧಪಡಿಸಿ ಈಗಾಗಲೇ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಬಿಬಿಎಂಪಿ ಕೌನ್ಸಿಲ್ ಸಭೆಯ ಮುಂದೆ ಮಂಡಿಸಿದ್ದಾರೆ. ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಯಬೇಕಿದೆ.