Manipur Video: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ, ಪ್ರಧಾನಿ ಕ್ಷಮೆಗೆ ಆಗ್ರಹ
ಬೆಂಗಳೂರು, ಜುಲೈ 25: ಮಣಿಪುರ ರಾಜ್ಯದಲ್ಲಿ ಕಳೆದ ಮೂರು ತಿಂಗಳುಗಳಿಂದ ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರಗಳನ್ನು ಹತ್ತಿಕ್ಕುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿದೆ. ಈ ಹಿನ್ನೆಲೆ ಸರ್ಕಾರ ನಿರ್ಲಕ್ಷ್ಯ ವಿರೋಧಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಮ್ ಆದ್ಮಿ ಪಕ್ಷ (AAP)ಯಿಂದ ಪ್ರತಿಭಟನೆ ನಡೆಯಿತು.
ಆಮ್ ಆದ್ಮಿ ಪಕ್ಷದ (AAP) ಮಹಿಳಾ ಘಟಕದಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಟಿ ನಾಗಣ್ಣ ಮಾತನಾಡಿ, ಮಣಿಪುರದಲ್ಲಿ ನಡೆದ ಘಟನೆಗಳು, ಹತ್ಯೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ತಿಂಗಳುಗಳೆ ಕಳೆದರೂ ಘರ್ಷಣೆ ಹತ್ತಿಕ್ಕುವಲ್ಲಿ ವೈಫಲ್ಯವಾಗಿರುವ ಪ್ರಧಾನಮಂತ್ರಿ ಮೋದಿಯವರು ರಾಷ್ಟ್ರದ ಜನತೆಯ ಮುಂದೆ ಕ್ಷಮೆಯಾಚಿಸಿ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದರು.

ಮಣಿಪುರ ರಾಜ್ಯದಲ್ಲಿನ ವರ್ಗ ಸಂಘರ್ಷಗಳನ್ನು ಹತ್ತಿಕ್ಕುವ ಬದಲು ಕೇಂದ್ರ ಸರ್ಕಾರ ತಾನೇ ಖುದ್ದಾಗಿ ನಿಂತು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂಸಾಚಾರಗಳಿಗೆ ಆಸ್ಪದ ನೀಡುತ್ತಿರುವ ದುರುಳ ನೀತಿಯನ್ನು ಖಂಡಿಸಲೇಬೇಕಾಗಿದೆ. ಗೃಹ ಸಚಿವರು ಖುದ್ದಾಗಿ ಐದು ದಿವಸಗಳ ಕಾಲ ಮಣಿಪುರ ರಾಜ್ಯದಲ್ಲಿ ಮುಕ್ಕಾಂ ಹೂಡಿದ್ದರು. ಹೀಗಿದ್ದರೂ ಸಹ ಹಿಂಸಾಚಾರ ತಹಬದಿಗೆ ತರಲು ಇವರಿಗೆ ಸಾಧ್ಯವಾಗಲಿಲ್ಲ ಎಂದರು.
ಮಹಿಳೆಯರ ನಗ್ನ ಮೆರವಣಿಗೆ ಕೇಸ್ ಮುಚ್ಚಿ ಹಾಕಲು ಯತ್ನ?
ಎರಡು ತಿಂಗಳುಗಳ ಹಿಂದೆ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಬೆತ್ತಲೆ ಪೆರೇಡ್ ನಡೆಸಿದ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸದೆ ಪ್ರಕರಣವನ್ನು ಮುಚ್ಚಿ ಹಾಕುವ ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಅವರು ಗಂಭೀರ ಆರೋಪ ಮಾಡಿದರು.
ಈ ಬಗ್ಗೆ ಸಂಸತ್ತಿನಲ್ಲಿ ಆರಂಭವಾಗಿರುವ ಮುಂಗಾರು ಅಧಿವೇಶನದಲ್ಲಿ ಸಹ ಚರ್ಚಿಸದೆ ನಮ್ಮ ಪಕ್ಷದ ಸಂಸದ ಸಂಜಯ್ ಸಿಂಗ್ ರನ್ನು ಸಂಪೂರ್ಣ ಅವಧಿಗೆ ಅಮಾನತು ಮಾಡಲಾಗಿದೆ. ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ನಡೆ. ಇಂದು ವಿಶ್ವದಲ್ಲಿ ಭಾರತವು ತಲೆತಗ್ಗಿಸುವಂತಹ ಪರಿಸ್ಥಿತಿಗೆ ತಳ್ಳಿರುವ ವಿಶ್ವಗುರು ನರೇಂದ್ರ ಮೋದಿಯವರು ಈ ಕೂಡಲೇ ರಾಷ್ಟ್ರದ ಜನತೆಯ ಮುಂದೆ ಕ್ಷಮೆ ಯಾಚಿಸಿ ರಾಜೀನಾಮೆ ಕೊಟ್ಟು ತೊಲಗಬೇಕು ಎಂದು ನಾಗಣ್ಣ ಒತ್ತಾಯಿಸಿದರು.

ಮಹಿಳಾ ಘಟಕದ ಅಧ್ಯಕ್ಷೆ ಕುಶಾಲ ಸ್ವಾಮಿ ಅವರು ಮಾತನಾಡಿ, ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ಅತ್ಯಾಚಾರವನ್ನು ಮಾಡಿ ಬೆತ್ತಲೆ ಮೆರವಣಿಗೆ ಮಾಡುವಂತಹ ಹೀನಾತಿ ಹೀನರಿಗೆ ರಕ್ಷಣೆ ನೀಡುತ್ತಿರುವ ಬಿಜೆಪಿ ಕೇಂದ್ರ ಸರ್ಕಾರ ನಿಜಕ್ಕೂ ದೇಶದಿಂದ ತೊಲಗಬೇಕಾಗಿದೆ.
ಕುಸ್ತಿಪಟುಗಳ ವಿರುದ್ಧ ಸಂಸದರ ಪರ ನಿಂತ ಕೇಂದ್ರ
ಇತ್ತೀಚಿಗೆ ಕುಸ್ತಿಪಟು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂಸದ ಬ್ರಿಜ್ ಭೂಷಣ್ ರಕ್ಷಣೆಗೆ ನಿಂತಿರುವ ಪ್ರೀತಿಯನ್ನು ಗಮನಿಸಿದರೆ ಕೇವಲ ಭ್ರಷ್ಟಾಚಾರಿಗಳನ್ನು ರಕ್ಷಿಸುತ್ತಿರುವ ಕೇಂದ್ರ ಸರ್ಕಾರ ಈಗ ಅತ್ಯಾಚಾರಿಗಳನ್ನು ಸಹ ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದಂತಿದೆ. ಭಾರತ ಮಾತೆಯನ್ನು ಪೂಜಿಸುವಂತಹ ಸಂಸ್ಕೃತಿ ರಕ್ಷಕರು ಎಂದು ಫೋಸ್ ನೀಡುತ್ತಾ ಬಂದಿರುವ ಬಿಜೆಪಿಯ ನಿಜ ಬಣ್ಣ ದೇಶದ ಮುಂದೆ ಬೆತ್ತಲಾಗಿದೆ. ಮುಂದಿನ ದಿವಸಗಳಲ್ಲಿ ತಕ್ಕ ಪಾಠವನ್ನು ದೇಶ ಜನ ಕಲಿಸಿಕೊಡುತ್ತಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ನಾಯಕ ವಿಜಯ ಶರ್ಮ, ಮಾಧ್ಯಮ ವಕ್ತಾರೆ ಉಷಾ ಮೋಹನ್, ಪ್ರಕಾಶ್ ನಡುಂಗಡಿ, ಸುಷ್ಮಾ ವೀರ, ಹರಿಹರನ್, ಗೋಪಾಲ್, ಮಹದೇವಸ್ವಾಮಿ, ಫರೀದ್, ಫಿರೋಜ್ ಖಾನ್, ಜ್ಯೋತಿಶ್ ಕುಮಾರ್, ಮರಿಯ, ಮಹಾಲಕ್ಷ್ಮಿ, ಸುಹಾಸಿನಿ ಪಣಿರಾಜ್, ಪುಷ್ಪ ಕೇಶವ್ ಸೇರಿದಂತೆ ಅನೇಕ ಮಹಿಳಾ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಭಾಗವಹಿಸಿದ್ದರು.












Click it and Unblock the Notifications