ವೈದ್ಯರ ನಿರ್ಲಕ್ಷ್ಯ ಆರೋಪ: ಇಂಜೆಕ್ಷನ್ ಅಡ್ಡಪರಿಣಾಮದಿಂದ ಯುವಕ ಸಾವು
ಬೆಂಗಳೂರು, ಆಗಸ್ಟ್ 19: 'ವೈದ್ಯೋ ನಾರಾಯಣೋ ಹರಿಃ' ಅಂದರೆ ಜೀವ ಉಳಿಸುವ ವೈದ್ಯರು ದೇವರ ಸಮಾನರು ಎನ್ನುವ ಮಾತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಗಳು ಸಾವನ್ನಪ್ಪುತ್ತಿರುವ ಆರೋಪಗಳು ಕೂಡ ಹೆಚ್ಚಾಗಿದೆ. ಇದೀಗ ಇಂತಹ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಯುವ ಉದ್ಯಮಿಯಾಗಿ ಭವಿಷ್ಯದಲ್ಲಿ ಬೆಟ್ಟದಷ್ಟು ಕನಸು ಹೊತ್ತಿದ್ದ ಯುವಕ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ.
ಜ್ವರಕ್ಕೆಂದು ಪಡೆದ ಇಂಜೆಕ್ಷನ್ನ ಅಡ್ಡಪರಿಣಾಮದಿಂದ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿ ಮೂಲದ ಅಮರ್ ಶೆಟ್ಟಿ (31) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಮೃತ ಅಮರ್ ಶೆಟ್ಟಿ ಕಳೆದ ಒಂದು ವರ್ಷದಿಂದ ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅಮರ್ ಶೆಟ್ಟಿ, ಆಗಸ್ಟ್ 13ರಂದು ಕೆ.ಪಿ ಅಗ್ರಹಾರದಲ್ಲಿರುವ ಭಾಗ್ಯ ಕ್ಲಿನಿಕ್ಗೆ ಹೋಗಿದ್ದರು. ಅಲ್ಲಿನ ವೈದ್ಯರು ಜ್ವರಕ್ಕಾಗಿ ಇಂಜೆಕ್ಷನ್ ನೀಡಿದ್ದಾರೆ ಎನ್ನಲಾಗಿದೆ.
ದಿನ ಕಳೆದಂತೆ ಇಂಜೆಕ್ಷನ್ ನೀಡಿದ್ದ ಜಾಗದಲ್ಲಿ ವೂತ ಕಾಣಿಸಿಕೊಂಡಿದೆ ಜೊತೆಗೆ ನೋವು ಕಾಣಿಸಿಕೊಂಡಿದೆ. ಬಳಿಕ ಬೇರೆ ಆಸ್ಪತ್ರೆಗಳಿಗೆ ತೆರಳಿದರೂ ಚಿಕಿತ್ಸೆ ಫಲಕಾರಿಯಾಗದೇ ಬಹು ಅಂಗಗಳ ವೈಫಲ್ಯದಿಂದ ಅಮರ್ ಶೆಟ್ಟಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ವೈದ್ಯರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ.
ಅಮರ್ ಶೆಟ್ಟಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ದಿವಂಗತ ಚಂದ್ರ ಶೆಟ್ಟಿ ಹಾಗೂ ಜ್ಯೋತಿ ಶೆಟ್ಟಿಯವರ ಎರಡನೇ ಪುತ್ರನಾಗಿದ್ದಾರೆ. ಕಳೆದ ಸುಮಾರು ಆರು ವರ್ಷಗಳ ಕಾಲ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಅಮರ್, ಕಳೆದ ಒಂದು ವರ್ಷದ ಹಿಂದೆ ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದರು. ಸದ್ಯ ಅಮರ್ ಶೆಟ್ಟಿ ಮೃತದೇಹವು ಬೆಂಗಳೂರಿನಿಂದ ಹುಟ್ಟೂರಿಗೆ ರವಾನಿಸಲಾಗುತ್ತಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.












Click it and Unblock the Notifications