ವೃದ್ಧೆಯ ಕಣ್ಣಿಗೆ ಖಾರದ ಪುಡಿ ಎರಚಿ ಸರ ಕದ್ದ ಕಳ್ಳಿ
ಬೆಂಗಳೂರು, ಡಿಸೆಂಬರ್, 18: ವಾಯು ವಿಹಾರಕ್ಕೆ ತೆರಳಿದ್ದ ವೃದ್ಧೆಯ ಬಳಿ ವಿಳಾಸ ಕೇಳುವ ನೆಪದಲ್ಲಿ ಹೋದ ಮಹಿಳೆಯೊಬ್ಬಳು ಆಕೆಯ ಕುತ್ತಿಗೆಯಲ್ಲಿದ್ದ ಸರ ಕದ್ದು, ಪರಾರಿಯಾಗಲು ಹೋಗಿ ಸಾರ್ವಜನಿಕರಿಗೆ ಸಿಕ್ಕಿ ಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೆಂಪಾಪುರ ಅಗ್ರಹಾರ ನಿವಾಸಿ ಈಶ್ವರಿ (27) ಸರ ಕದಿಯಲು ಪ್ರಯತ್ನಿಸಿದ ಮಹಿಳೆ. ಕೆಂಪೇಗೌಡ ನಗರದ ನಿವಾಸಿ ಅನ್ನಪೂರ್ಣಮ್ಮ (80) ಎಂಬ ವೃದ್ಧೆಯ 9 ಗ್ರಾಂ ಚಿನ್ನದ ಸರವನ್ನು ಕಳ್ಳಿಯಿಂದ ವಶಪಡಿಸಿಕೊಂಡು ಅವರಿಗೆ ವಾಪಾಸ್ ನೀಡಲಾಗಿದ್ದು, ಕಳ್ಳಿಯನ್ನು ಬಂಧಿಸಲಾಗಿದೆ.[ಬೆಂಗಳೂರಲ್ಲಿ ಕಳುವಾದ ಸ್ಕೂಟಿಯ ಇಂಟರೆಸ್ಟಿಂಗ್ ಕತೆ!]

ಅನ್ನಪೂರ್ಣಮ್ಮ ಬುಧವಾರ ಸಂಜೆ ಸುಮಾರು 7.15 ರ ಸಮಯದಲ್ಲಿ ತಮ್ಮ ಮನೆಯ ಮುಂದಿನ ರಸ್ತೆಯಲ್ಲಿ ವಾಯುವಿಹಾರ ಮಾಡುತ್ತಿದ್ದರು. ಆಗ ಈಶ್ವರಿ ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯ ಬಳಿ ಬಂದಿದ್ದಾಳೆ. ಆಗ ವೃದ್ಧೆಯ ಕನ್ನಡಕವನ್ನು ಕೆಳಗೆ ಬೀಳಿಸಿ, ಅವರ ಕಣ್ಣಿಗೆ ಖಾರದಪುಡಿ ಎರಚಿ ಸರ ಕದಿಯಲು ಕುತ್ತಿಗೆಗೆ ಕೈ ಹಾಕಿದ್ದಾಳೆ.
ವೃದ್ಧೆಯ ಕತ್ತಿನಿಂದ ಸರ ಕದಿಯಲು ಕೈ ಹಾಕಿದಾಗ ಅವರು ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಅವರಿಬ್ಬರ ನಡುವೆ ಸರ ಎಳೆದಾಟ ಸುಮಾರು ಹೊತ್ತು ನಡೆದ ಬಳಿಕ ಆಕೆ ಸರ ಕಿತ್ತುಕೊಂಡು ಓಡಿಹೋಗಿದ್ದಾಳೆ.[ಬೆಂಗಳೂರಲ್ಲಿ ಡಿಸೆಂಬರ್ 20 ರಂದು ಕಾರ್ ಫ್ರೀ ಡೇ ಇಲ್ಲ]
ಅನ್ನಪೂರ್ಣಮ್ಮ ಕಿರುಚುವುದನ್ನು ಕೇಳಿದ ಸಾರ್ವಜನಿಕರು ಅವರ ಬಂದು ವಿಚಾರಿಸಿದಾಗ ವೃದ್ಧೆ ಕಳ್ಳಿಯ ಕೃತ್ಯವನ್ನು ಹೇಳಿದ್ದಾರೆ. ಆಗ ಕಳ್ಳಿಯ ಬೆನ್ನತ್ತಿದ್ದ ಸಾರ್ವಜನಿಕರು ಆಕೆಯನ್ನು ಹಿಡಿಯಲು ಹೋಗಿದ್ದಾರೆ. ಆಗ ಆಕೆ ತನ್ನ ಬಳಿ ಇದ್ದ ಚಾಕುವಿನಿಂದ ಬೆದರಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾಳೆ. ಆದರೆ ಅವಳ ಪ್ರಯತ್ನ ವಿಫಲವಾಗಿದ್ದು, ಸಾವರ್ಜನಿಕರಿಗೆ ಸಿಕ್ಕಿಬಿದ್ದಿದ್ದಾಳೆ.
ಈಶ್ವರಿ ಕೆ.ಆರ್ ಪೇಟೆಯ ಅಂಗನವಾಡಿ ಕೇಂದ್ರದಲ್ಲಿ ಆಯಾ ಕೆಲಸ ಮಾಡುತ್ತಿದ್ದು, 'ನನ್ನ ಗಂಡ ಆಟೋ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳಿಗೆ ಓದಿಸಲು ಹಣ ಸಾಕಾಗುತ್ತಿಲ್ಲ. ಹಾಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ ಕದಿಯಲು ಪ್ರಯತ್ನಿಸಿರುವೆ ಎಂದು ಪೊಲೀಸರ ಎದುರು ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ.












Click it and Unblock the Notifications