Bengaluru road: ಕಳಪೆ ರಸ್ತೆಯಿಂದ ವ್ಯಕ್ತಿ ಸಾವು: ಪರಿಹಾರ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಎಎಪಿ ಆಗ್ರಹ
ಬೆಂಗಳೂರು, ನವೆಂಬರ್ 15: ರಾಜಾಜಿನಗರದ ಬಳಿ ಸುಬ್ರಹ್ಮಣ್ಯ ನಗರದ 2ನೇ ಮುಖ್ಯರಸ್ತೆಯಲ್ಲಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟ ವ್ಯಕ್ತಿ ಕುಮಾರ್ ಮನೆ ಮುಂದೆ ಆಮ್ ಆದ್ಮಿ ಪಕ್ಷದ ನಾಯಕರು, ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಮುಖ್ಯಮಂತ್ರಿಗಳು, ಸಚಿವರು ಸ್ಥಳಕ್ಕೆ ಆಗಮಿಸುವಂತೆ ಆಗ್ರಹಿಸಿದ್ದಾರೆ
ನಗರ ಸ್ಥಳಿಯ ನಾಗರಿಕ ಸಂಸ್ಥೆಯ ರಸ್ತೆಗಳ ಅಮರ್ಪಕ ನಿರ್ವಹಣೆ, ನಿರ್ಲಕ್ಷ್ಯದಿಂದಾಗಿ ಕುಮಾರ್ ಎಂಬುವವರು ಸೋಮವಾರ ಸಾವೀಗಿಡಾಗಿದ್ದಾರೆ. ರಸ್ತೆಗುಂಡಿ ಸಮಸ್ಯೆ, ಹಾಳಾದ ರಸ್ತೆ ಕಾರಣದಿಂದ ಅಪಘಾತ, ಸಾವು ನೋವು ಇದೇ ಮೊದಲೇನಲ್ಲ ಎಂದು ಎಎಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿ ಬಂದು ಮೃತರಿಗೆ ಸಾಂತ್ವನ ಹೇಳಿ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರ ಹಾಗೂ ಪಾಲಿಕೆ ವಿರುದ್ಧ ಧಿಕ್ಕಾರ ಕೂಗಿದರು.
ಈ ವೇಳೆ ಎಎಪಿ ಮುಖಂಡರ ಅಧ್ಯಕ್ಷ ಸುಮನ್ ಪ್ರಶಾಂತ್ ಮಾತನಾಡಿ, ಬಿಬಿಎಂಪಿಯ ನಿರ್ಲಕ್ಷ್ಯದಿಂದ ರಸ್ತೆ ಹಾಳಾಗಿದೆ. ಕೆಲವು ರಸ್ತೆಗಳು ಗುಂಡಿ ಬಿದ್ದಿವೆ. ಇದರಿಂದ ಉಂಟಾಗುವ ಸಾವು ನೋವುಗಳಿಗೆ ಬಿಬಿಎಂಪಿ ಕಾರಣ ಎಂದು ಆರೋಪಿಸಿದ ಅವರು, ಸರ್ಕಾರ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆ ಕೊಡಬೇಕು. ಮೃತರಿಗೆ ಸೂಕ್ತ ರೀತಿಯಲ್ಲೇ ಸರ್ಕಾರ ಪರಿಹಾರ ನೀಡಬೇಕು ಎಂದರು.
ಮಲ್ಲೇಶ್ವರಂನಲ್ಲಿ ಎಲ್ಲಿಲ್ಲದ ಭ್ರಷ್ಟಾಚಾರ
ಮಲ್ಲೇಶ್ವರದಲ್ಲಿ ರಸ್ತೆ ನಿರ್ಮಾಣದ ಗುತ್ತಿಗೆದಾರರು, ಶಾಸಕರು ಹಾಗೂ ಸಚಿವರೇ ಅವರೇ ಆಗಿದ್ದರಿಂದ ಕಳಪೆ ಕಾಮಗಾರಿ ನಡೆದಿದೆ. ಕಳೆದ 15ವರ್ಷದ ಅವಧಿಯಲ್ಲಿ ಇದೇ ಮೊದಲ ಭಾರಿಗೆ ಇಷ್ಟೊಂದು ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಬಿಜೆಪಿ ಶಾಸಕರು ಇರುವ ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಜನರಿಗಾಗಿ ಯಾರಿಗೂ ಕೆಲಸ ಮಾಡುತ್ತಿಲ್ಲ. ಕೋವಿಡ್ನಿಂದ ತತ್ತರಿಸಿರುವ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಒಡ್ಡುತ್ತಿದ್ದಾರೆ. ಬಿಜೆಪಿ ನಾಯಕರಿಗೆ ಜನರ ಕುರಿತು ಕಾಳಜಿ ಇಲ್ಲ. ಈ ಸಂಬಂಧ ಬಿಜೆಪಿ ಸರ್ಕಾರ ಜೊತೆಗೆ ಬಿಬಿಎಂಪಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಪ್ರಶಾಂತ್ ಆರೋಪಿಸಿದರು.
ರಸ್ತೆಗುಂಡಿ ಪರಿಹಾರಕ್ಕೆ ಸ್ಪಂದನೆ ದೊರೆತಿಲ್ಲ
ಎಎಪಿ ವಕ್ತಾರೆ ಉಷಾ ಮೋಹನ್ ಮಾತನಾಡಿ, ಹಾಳಾದ ರಸ್ತೆಯಿಂದ ಪ್ರಾಣ ಬಿಟ್ಟಿ ಮೃತ ಕುಮಾರ್ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕು. ಮಲ್ಲೇಶ್ವರಂ ಸೇರಿದಂತೆ ಬೆಂಗಳೂರಿನಾದ್ಯಂತ ರಸ್ತೆಗಳಲ್ಲಿ ಇದೇ ಗುಂಡಿ ಬಿದ್ದಿವೆ. ಇದರಿಂದ ನಿತ್ಯ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ಕಡೆಗಳಲ್ಲಿ ವಾಹನ ಸವಾರರ ಜೀವ ಹೋಗಿವೆ. ಈ ಬಗ್ಗೆ ಸರ್ಕಾರ, ಬಿಬಿಎಂಪಿ ತಲೆಕೆಡಿಸಿಕೊಂಡಿಲ್ಲ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರಿಂದಲೂ ಸಹಕರಿಸುತ್ತಿಲ್ಲ ಎಂದು ದೂರಿದರು.
ಈ ಕೂಡಲೇ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ಸ್ಥಳಕ್ಕೆ ಬಂದು ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಬೇಕು. ಪ್ರಕರಣ ಸಂಬಂಧ ಹತ್ತಿರ ಠಾಣೆಗೆ ತೆರಳಿ ಪಕ್ಷದಿಂದ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು.
ಹಾಳಾದ ರಸ್ತೆಯಲ್ಲಿ ಬಿದ್ದವರ ಮೇಲೆ ಹರಿದ ಟ್ರ್ಯಾಕ್ಟರ್
ಮೃತ ವ್ಯಕ್ತಿ ಕುಮಾರ್ (55) ಮರಿಯಪ್ಪನಪಾಳ್ಯ ನಿವಾಸಿಯಾಗಿದ್ದು, ಪ್ಲಂಬರ್ ಕೆಲಸ ಮಾಡುತ್ತಿದ್ದರು. ಅವರು ಸೋಮವಾರ
ಮನೆಯಿಂದ ರಾಜಾಜಿನಗರ ಡಿ.ಬ್ಲಾಕ್ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಸುಬ್ರಹ್ಮಣ ನಗರದ 2ನೇ ಮುಖ್ಯರಸ್ತೆ ಹಾಲಾಗಿದ್ದು, ಜಲ್ಲಿಕಲ್ಲುಗಳು ರಸ್ತೆ ಮೇಲೆಲ್ಲ ಹರಡಿಕೊಂಡಿವೆ. ಹೀಗಾಗಿ ಆಯ ತಪ್ಪಿ ಕುಮಾರ್ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅವರ ಹೊಟ್ಟೆ ಮೇಲೆ ಮಣ್ಣು ತುಂಬಿದ ಟ್ರ್ಯಾಕ್ಟರ್ ಹರಿದ ಪರಿಣಾಮ ಅವರು ಆಸ್ಪತ್ರೆ ದಾಖಲಿಸಿದರು ಬದುಕುಳಿಯಲಿಲ್ಲ.
ಮೃತರ ಪುತ್ರನಿಂದ ಪೊಲೀಸ್ ಠಾಣೆಗೆ ದೂರು
ಈ ಸಂಬಂಧ ಮೃತ ಕುಮಾರ್ ಅವರ ಪುತ್ರ ಮಂಜುನಾಥ್ ಎಂಬುವವರು ಟ್ರ್ಯಾಕ್ಟರ್ ಚಾಲಕನ ವಿರುದ್ಧ ಮಲ್ಲೇಶ್ವರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ದೂರಿನಲ್ಲಿ ರಸ್ತೆ ನಿರ್ವಹಣೆ, ಬಿಬಿಎಂಪಿ ಕುರಿತು ಉಲ್ಲೇಖಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಇದೀಗ ಪ್ರತಿಭಟನೆ ನಂತರ ಎಎಪಿ ದೂರು ನೀಡುವುದಾಗಿ ತಿಳಿಸಿದ್ದು, ಅದರಲ್ಲಿ ಬಿಬಿಎಂಪಿ ಇಲ್ಲವೇ ರಾಜ್ಯ ಸರ್ಕಾರದ ವಿರುದ್ಧ ಉಲ್ಲೇಖಿಸುತ್ತದೆಯೇ ಎಂದು ಕಾದು ನೋಡಬೇಕಿದೆ.