75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ: ಬೆಂಗಳೂರಿನ ಮನೆ ಮನೆ ಮೇಲು ತಿರಂಗಾಕ್ಕೆ ಬಿಬಿಎಂಪಿ ಪ್ಲಾನ್
ಬೆಂಗಳೂರು, ಜುಲೈ 27: ದೇಶದಾದ್ಯಂತ 75ನೇ ಅಮೃತ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಲಕ ರೀತಿಯಲ್ಲಿ ಸಜ್ಜಾಗುತ್ತಿದೆ. ದೇಶದ ಜನರು ಸ್ವಾತಂತ್ರ್ಯ ದಿನವನ್ನ ಅದ್ದೂರಿಯಾಗಿ ಆಚರಿಸಲು ಸನ್ನದ್ಧರಾಗುತ್ತಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಆಜಾದಿ ಕಾ ಅಮೃತ್ ದಿವಸದ ಅಂಗವಾಗಿ ಪಾಲಿಕೆ ಸಕಲ ಸಿದ್ಧತೆ ಮಾಡಿಕೊಳ್ತಿದೆ. ಮನೆ ಮನೆಗೂ ರಾಷ್ಟ್ರಧ್ವಜ ತಲುಪಿಸಲು ಪಾಲಿಕೆ ಸಜ್ಜಾಗಿದೆ. ಈ ಕುರಿತು 'ಒನ್ಇಂಡಿಯಾ ಕನ್ನಡ' ವಿಶೇಷ ವರದಿ.
ದೇಶವು ಸ್ವಾತಂತ್ರ್ಯವನ್ನು ಪಡೆದು 75 ವರ್ಷನ್ನು ಪೂರೈಸುತ್ತಿದೆ. ಈ ವಿಶೇಷ ಸಮಯದಲ್ಲಿ ಆಜಾದಿ ಕಿ ಅಮೃತ್ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಹ 75ನೇ ಸ್ವಾತಂತ್ರ್ಯ ಮಹೋತ್ಸವ ವಿಶಿಷ್ಠವಾಗಿ ಆಚರಿಸಲು ಕರೆಯನ್ನು ನೀಡಿದ್ದಾರೆ. ಕೆಲವು ದಿನಗಳ ಕಾಲ ತಿರಂಗಾ( ಧ್ವಜ)ವನ್ನು ಹಾರಿಸಲು ಕರೆಯನ್ನು ನೀಡಿದ್ದಾರೆ.
75ನೇ ಅಮೃತ ಸ್ವಾತಂತ್ರ್ಯ ಮಹೋತ್ಸವ: ಪೊಲೀಸ್ ಇಲಾಖೆಯಲ್ಲಿ ಪೂರ್ವಭಾವಿ ಸಭೆ
ಆಗಸ್ಟ್ ಬಂತು ಅಂದ್ರೆ ಅದು ದೇಶದ ಜನರಿಗೆ ಒಂದು ಸಂಭ್ರಮದ ತಿಂಗಳೇ ಸರಿ. ಬ್ರಿಟೀಷರ ಕಪಿಮುಷ್ಟಿಯಿಂದ ಭಾರತಮಾತೆ ಬಿಡುಗಡೆಯಾದ ಆ ದಿನವನ್ನ ಸ್ವಾತಂತ್ರ ದಿನವನ್ನಾಗಿ ಆಚರಿಸುವ ಮೂಲಕ ಭಾರತೀಯರು ಸಂಭ್ರಮಿಸ್ತಾರೆ. ಈ ವರ್ಷ ರಾಜ್ಯದಲ್ಲಿ ಆಗಸ್ಟ್ 11 ರಿಂದ 17 ರವರೆಗೆ ಪ್ರತಿ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಅಭಿಯಾನ ಮಾಡಲು ಸೂಚನೆ ನೀಡಿದೆ. ಕೇಂದ್ರ ಸರ್ಕಾರದ 'ಹರ್ ಘರ್ ತಿರಂಗ್' ಅಭಿಯಾನಕ್ಕೆ ಬಿಬಿಎಂಪಿ ಕೂಡ ಕೈ ಜೋಡಿಸಲು ಸಜ್ಜಾಗಿದೆ.
ದೊಡ್ಡ ಧ್ವಜಕ್ಕೆ 25, ಚಿಕ್ಕ ಧ್ವಜ 10 ರೂಪಾಯಿ
ಬಿಬಿಎಂಪಿ ಸಹ ಬೆಂಗಳರಿನಲ್ಲಿ ಅದ್ದೂರಿಯಾಗಿ ಸ್ವಾತಂತ್ರ್ಯೋತ್ಸವ ಆಚರಣೆಗ ಅಣಿಯಾಗಿದೆ. ಬಿಬಿಎಂಪಿ ಬೆಂಗಳೂರಲ್ಲಿ ರಾಷ್ಟ್ರಧ್ವಜ ಹಂಚುವ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ತಿದೆ. ಈ ಬಗ್ಗೆ ನಗರ ಜಿಲ್ಲಾಧಿಕಾರಿ ಶ್ರೀನಿವಾಸ್, ಎಡಿಜಿಪಿ ಸಂದೀಪ್ ಪಾಟೀಲ್ ಮಾಹಿತಿ ಹಂಚಿಕೊಂಡಿರುವುದು ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಹತ್ವದ ಸಭೆ ನಡೆಸಿದ್ದಾರೆ. ರಾಷ್ಟ್ರಧ್ವಜದ ಹಂಚಿಕೆ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. "ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೊತೆ ಚರ್ಚಿಸಲಾಗಿದೆ ಎಂದಿರೋ ತುಷಾರ್, ದೊಡ್ಡ ಧ್ವಜಕ್ಕೆ 25 ರೂಪಾಯಿ, ಚಿಕ್ಕ ಧ್ವಜಕ್ಕೆ 10 ರೂಪಾಯಿ ನಿಗದಿ ಮಾಡಿದೆ. ಬೆಂಗಳೂರಲ್ಲಿ ಈ ಬಾರಿ 10 ಲಕ್ಷ ಧ್ವಜಾರೋಹಣ ಮಾಡಲು ಟಾರ್ಗೆಟ್ ಇಟ್ಟುಕೊಂಡಿದ್ದು, ಸದ್ಯ 2 ಲಕ್ಷ ತಿರಂಗ ತಲುಪಿದೆ" ಅಂತಾ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಬಿಬಿಎಂಪಿಯಿಂದ ಜಾಗೃತಿ ಕಾರ್ಯ
ಇನ್ನು ಈ ಬಾರಿ ಪಾಲಿಸ್ಟರ್ ಧ್ವಜಗಳ ಬಳಕೆಯೂ ಅನಿವಾರ್ಯವಾಗಲಿದ್ದು, ಪ್ರತಿ ಮನೆ ಮನೆಯಲ್ಲೂ ತಿರಂಗ ಧ್ವಜ ಹಾರಾಡುವ ನಿರೀಕ್ಷೆಯಿದೆ. ಇತ್ತ ಸರ್ಕಾರಿ ಕಚೇರಿಗಳಲ್ಲಿ ಸ್ವಾತಂತ್ರೋತ್ಸವ ಆಚರಣೆ ಬಗ್ಗೆ ಸಭೆ ನಡೆಸಿ ಚರ್ಚಿಸಲು ನಿರ್ಧರಿಸಲಾಗಿದೆ. ಅಲ್ಲದೇ ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ರಂಗಪ್ಪರನ್ನ ನೂಡಲ್ ಆಫಿಸರ್ ಆಗಿ ನೇಮಕ ಮಾಡಲಾಗಿದ್ದು. ವಾರ್ಡ್ ಇಂಜಿನಿಯರ್ಸ್, ಎಆರ್ಒಗಳು ಬೆಂಗಳೂರಿನ ಗಲ್ಲಿ ಗಲ್ಲಿಗೂ ಹೋಗಿ ಧ್ವಜಾರೋಹಣದ ಬಗ್ಗೆ ಅರಿವು ಮೂಡಿಸಲು ಸಜ್ಜಾಗಿದ್ದಾರೆ. ಅಲ್ಲದೆ ಈ ಬಾರಿ ಸ್ವಾತಂತ್ರ ದಿನಾಚರಣೆಗೆ ಜನರಿಂದ ಹಣವನ್ನ ಪಡೆದು ಪಾಲಿಕೆ ಧ್ವಜ ನೀಡಲು ಚಿಂತನೆ ನಡೆಸಿದೆ. ಅಷ್ಟೇ ಅಲ್ಲದೆ ಆಸಕ್ತರಿರುವ ಸಂಘ ಸಂಸ್ಥೆಗಳು ಕೂಡಾ ಕೈ ಜೋಡಿಸುವಂತೆ ಬಿಬಿಎಂಪಿ ಕರೆ ನೀಡಿದೆ.
ವಿಶೇಷ ಆಯುಕ್ತ ರಂಗಪ್ಪ ಹೇಳುವುದೇನು
ಆಗಸ್ಟ್ 11 ರಿಂದ 17 ರತನಕ ಎಲ್ಲಾ ಶಾಲೆ, ಕಾಲೇಜು, ಮದರಸಾಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಆದೇಶ ನೀಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲಾ ಕಾಲೇಜು ಮತ್ತು ಮದರಸ ಮೇಲೆ ಧ್ವಜಾ ಹಾರಡುವಂತೆ ಬಿಬಿಎಂಪಿ ವಿಶೇಷ ನಿಗಾವನ್ನು ಇಡಲಿದೆ. ಜಂಟಿ ನಿರ್ದೇಶಕರು RO ಗಳು ARO ಗಳಿಗೆ ಸೂಚನೆ ಕೊಟ್ಟು ಅವ್ರ ವ್ಯಾಪ್ತಿಯೊಳಗೆ ಬರುವ ಮಸೀದಿ ಚರ್ಚ್ ಶಾಲೆ ಮದರಸಾ ಎಲ್ಲರ ಸಭೆ ಕರೆದು ಮೂರು ದಿನದ ತಿರಂಗ ಹಾರಾಟದ ಬಗ್ಗೆ ಕ್ರಮ ವಹಿಸಬೇಕು. "ಧ್ವಜ ಹಾರಿಸೋಕೆ ನಿರಾಕರಣೆ ಯಾರು ಮಾಡಲ್ಲ . ತಿರಂಗ ಹಾರಿಸುವುದು ಎಲ್ಲರ ಜನ್ಮಸಿದ್ಧ ಹಕ್ಕು. ಈಗಾಗಲೇ ನಿರ್ದೇಶಿತ ಸಂಸ್ಥೆಗಳಿಗೆ ಸರ್ಕಾರ ಸೂಚನೆ ಕೊಟ್ಟಿದೆ.ಆ ಪ್ರಕಾರ ತಿರಂಗವನ್ನು ಹಾಕದೇ ಇದ್ರೇ ರೂಲ್ಸ್ ಪಾಲನೆ ಮಾಡದೇ ಇದ್ರೇ ನಾವು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಹರ್ ಘರ್ ತಿರಂಗಕ್ಕಾಗಿ ಎರಡು ಲಕ್ಷ ತಿರಂಗ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸರಬರಾಜು ಆಗಿದೆ. ಜಂಟಿಆಯುಕ್ತರಿಗೆ ವಲಯವಾರು ಜವಾಬ್ದಾರಿ ಕೊಟ್ಟಿದ್ದಾರೆ. ರೆವಿನ್ಯೂ ಇನ್ಸ್ಪೆಕ್ಟರ್, ಪೌರಕಾರ್ಮಿಕರಿಗೆ ಜವಾಬ್ದಾರಿ ವಹಿಸಿದ್ದೇವೆ. ಧ್ವಜಕ್ಕೆ ತಲಾ 25, 10 ರೂ ನಿಗದಿಯಾಗಿದೆ " ಎಂದು ವಿಶೇಷ ಆಯುಕ್ತ ರಂಗಪ್ಪ ತಿಳಿಸಿದ್ದಾರೆ.
ರಾಜಧಾನಿಯ ತುಂಬಾ ರಾಷ್ಟ್ರಧ್ವಜ
ಇನ್ನು ಜನರು ಹೇಗೆ ಧ್ವಜ ಹಾರಿಸಬೇಕು ಅನ್ನೋ ಬಗ್ಗೆ ಕೂಡ ಇಂದಿನಿಂದ ಜಾಗೃತಿ ಮೂಡಿಸಲು ಪಾಲಿಕೆ ಅಧಿಕಾರಿಗಳ ತಂಡ ಸಜ್ಜಾಗಿದೆ. ದೇಶದ ಸ್ವಾತಂತ್ರ ಸಂಭ್ರಮಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಈಗಿಂದಲೇ ಸಕಲ ಸಿದ್ಧತೆ ನಡೆಯುತ್ತಿದ್ದು, ಸ್ವಾತಂತ್ರ ಹಬ್ಬದ ಆಚರಣೆಗೆ ರಾಜಧಾನಿ ಸಜ್ಜಾಗ್ತಿದೆ. ಆಗಸ್ಟ್ 15ಕ್ಕೆ ಇಡೀ ರಾಜಧಾನಿಯ ತುಂಬಾ ರಾಷ್ಟ್ರಧ್ವಜಗಳು ರಾರಾಜಿಸಲಿದ್ದು, ಭಾರತದ ಭವ್ಯ ಪರಂಪರೆ ಬಿಂಬಿಸಲು ರಾಷ್ಟ್ರಧ್ವಜ ಎಲ್ಲೆಡೆ ಹಾರಾಡಲಿದೆ.