ಬೆಂಗಳೂರಿನಲ್ಲಿ ಮಾಸ್ಕ್ ಧರಿಸದ 6 ಪೊಲೀಸ್ ಸಿಬ್ಬಂದಿ ಅಮಾನತು!
ಬೆಂಗಳೂರು, ಆಗಸ್ಟ್.21: ಕೊರೊನಾವೈರಸ್ ಸೋಂಕು ಹರಡುವಿಕೆ ಹಿನ್ನೆಲೆ ಪ್ರತಿಯೊಬ್ಬರು ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದನ್ನು ರಾಜ್ಯದಲ್ಲಿ ಕಡ್ಡಾಯಗೊಳಿಸಲಾಗಿದೆ.
Recommended Video
ಬೆಂಗಳೂರಿನಲ್ಲಿ ಮಾಸ್ಕ್ ಧರಿಸಿಲ್ಲ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂಬ ಕಾರಣಕ್ಕೆ ಆರು ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಜಾಲಹಳ್ಳಿ ಸಂಚಾರಿ ಠಾಣೆ ಎಎಸ್ಐ ಮಂಜುನಾಥಯ್ಯ, ಮುಖ್ಯಪೇದೆ ನಾಗರಾಜು, ಪೇದಗಳಾದ ಪದ್ಮನಾಥ್, ಮಧುಸೂದನ್, ವಿಶ್ವನಾಥ್ ಮತ್ತು ಮಹಿಳಾ ಪೇದೆ ಸುಜನಾರನ್ನು ಅಮಾನತುಗೊಳಿಸಿ ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಸೌಮ್ಯಲತಾ ಆದೇಶಿಸಿದ್ದಾರೆ.
ಮಾಸ್ಕ್ ಧರಿಸಿದವರನ್ನು ಕಂಡ್ರೆ ರಾಮಾಯಣ ನೆನಪಾಗುತ್ತೆ ಅಂದಿದ್ದೇಕೆ ಸಂಸದ ಹೆಗಡೆ?
ಕಳೆದ ಆಗಸ್ಟ್.11ರಂದು ಜಾಲಹಳ್ಳಿ ಸಂಚಾರ ಠಾಣೆಯ ಆರು ಸಿಬ್ಬಂದಿಯನ್ನು ಗಂಗಮ್ಮನ ಗುಡಿ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕೊರೊನಾವೈರಸ್ ಸೋಂಕು ಹರಡುವಿಕೆ ಹಿನ್ನೆಲೆ ಅಗತ್ಯ ಮುಂಜಾಗ್ರತೆ ವಹಿಸುವಂತೆ ಸೂಚನೆಯನ್ನೂ ನೀಡಲಾಗಿತ್ತು.
ಮಾಸ್ಕ್
ಧರಿಸದೇ
ಗುಂಪು
ಸೇರಿದ್ದ
ಸಿಬ್ಬಂದಿ:
ಹಿರಿಯ ಅಧಿಕಾರಿಗಳ ಸಲಹೆಯನ್ನು ನಿರ್ಲಕ್ಷಿಸಿದ ಆರು ಮಂದಿ ಸಿಬ್ಬಂದಿ ಸಾಹಿತ್ಯ ಕೂಟ ವೃತ್ತದ ಜಂಕ್ಷನ್ ಬಳಿ ಇರುವ ಪಾರ್ಕ್ ನಲ್ಲಿ ಗುಂಪು ಸೇರಿದ್ದರು. ಹೀಗೆ ಸೇರಿದ ಸಿಬ್ಬಂದಿ ಯಾವುದೇ ಮಾಸ್ಕ್ ಧರಿಸಿರಲಿಲ್ಲ ಹಾಗೂ ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ. ಈ ಹಿನ್ನೆಲೆ ಸರ್ಕಾರದ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ ಶಿಸ್ತುಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಇನ್ನು, ಅಮಾನತು ಅವಧಿಯಲ್ಲಿ ಖಾಸಗಿ ನೌಕರಿ, ವ್ಯವಹಾರ ಮಾಡಿದ್ದಲ್ಲಿ ಜೀವನ ಭತ್ಯೆ ಮುಟ್ಟುಗೋಲು ಹಾಕಿಕೊಳ್ಳುವುದಲ್ಲದೇ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಸೌಮ್ಯ ಲತಾ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.