5,000 ಬೆಂಗಳೂರಿನ ರಸ್ತೆ ಗುಂಡಿ ಇಷ್ಟೇ ಎಂದ ಡಿ.ಕೆ ಶಿವಕುಮಾರ್: ನೆಟ್ಟಿಗರಿಂದ ಮಸ್ತ್ ಕಮೆಂಟ್!
ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿಗರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇತ್ತೀಚಿಗೆ ದಸರಾ ಹಾಗೂ ಚಾಮುಂಡೇಶ್ವರಿ ಬೆಟ್ಟದ ಬಗ್ಗೆ ಅವರು ಮಾತನಾಡಿರುವ ಮಾತುಗಳು ಭಾರೀ ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಈಚೆಗೆ ಅವರು ಆರ್ಎಸ್ಎಸ್ ಗೀತೆಯ ಬಗ್ಗೆ ಸ್ಪಷ್ಟನೆ ಕೊಡುವಾಗಲೇ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದೀಗ ಬೆಂಗಳೂರು ಅಭಿವೃದ್ಧಿಯ ಬಗ್ಗೆ ಮಾತನಾಡಿ, ಜನರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಬೆಂಗಳೂರಲ್ಲಿ 5,000+ ರಸ್ತೆಗುಂಡಿಗಳು, 4,400 ಆದ್ಯತೆಯ ಮೇಲೆ ಸರಿಪಡಿಸಲಾಗುತ್ತಿದೆ. 4 ದಿನಗಳಲ್ಲಿ 2,200 ಹೆಚ್ಚು ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ.
ಹಂತ ಹಂತವಾಗಿ, ರಸ್ತೆ ಮೂಲಕ ರಸ್ತೆ - ನಮ್ಮ ಬೆಂಗಳೂರು ಸುಗಮವಾಗುತ್ತಿದೆ. "ರಸ್ತೆ ಗುಂಡಿ ಗಮನ" ಅಪ್ಲಿಕೇಶನ್ನಲ್ಲಿ ಗುಂಡಿಗಳ ಬಗ್ಗೆ ಸುಲಭವಾಗಿ ವರದಿ ಮಾಡಲು ಮತ್ತು ಬದಲಾವಣೆಯ ಭಾಗವಾಗಲು ಸಾರ್ವಜನಿಕರನ್ನು ಒತ್ತಾಯಿಸಲಾಗುತ್ತಿದೆ. ಸಾರ್ವಜನಿಕರ ಸಹಭಾಗಿತ್ವದಿಂದ ರಸ್ತೆ ಗುಂಡಿಗಳಿಗೆ ಮುಕ್ತಿ. ನಮ್ಮ ಬೆಂಗಳೂರಿನ ರಸ್ತೆಗಳನ್ನು ಗುಂಡಿ ಮುಕ್ತವಾಗಿಸುವ 'ರಸ್ತೆ ಗುಂಡಿ ಗಮನ' ಆಯಪ್ ಅನ್ನು ಪರಿಚಯಿಸಲಾಗಿದೆ. ಈ ಆಯಪ್ ಮೂಲಕ ಸಾರ್ವಜನಿಕರು ರಸ್ತೆಗುಂಡಿಗಳ ಬಗ್ಗೆ ನೇರವಾಗಿ ದೂರು ನೀಡಬಹುದು. ಸಾರ್ವಜನಿಕರ ಸಹಭಾಗಿತ್ವದೊಂದಿಗೆ, ಬೆಂಗಳೂರಿನ ಸಂಚಾರವನ್ನು ಮತ್ತಷ್ಟು ಸುರಕ್ಷಿತವಾಗಿಸೋಣ ಎಂದು ಡಿ.ಕೆ ಶಿವಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
ಡಿ.ಕೆ ಶಿವಕುಮಾರ್ ಅವರ ಟ್ವೀಟ್ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ತುಂಬೆಲ್ಲವೂ ರಸ್ತೆಗುಂಡಿಗಳೇ ತುಂಬಿಕೊಡುವೆ. ಎಲ್ಲಿ ನೋಡಿದರೂ ರಸ್ತೆ ಗುಂಡಿಗಳದ್ದೇ ಸಮಸ್ಯೆ ಈ ಸಮಸ್ಯೆ ಪರಿಹಾರವಾಗಿಲ್ಲವೆಂದು ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸರಿಯಾಗಿ ರಸ್ತೆಗುಂಡಿಗಳನ್ನು ಮುಚ್ಚುತ್ತಿಲ್ಲ. ರಸ್ತೆ ಗುಂಡಿಗಳನ್ನು ಬೇಕಾಬಿಟ್ಟಿ ಮುಚ್ಚಲಾಗುತ್ತಿದೆ ಎಂದು ದೂರಿದ್ದಾರೆ. ಇನ್ನು ವರುಣ್ ಎನ್ನುವವರು, ಕಾಡುಬೀಸನಹಳ್ಳಿಯ ಸೋಂಪುರ ಗೇಟ್ ನಿಂದ ಗೇರ್ ಸ್ಕೂಲ್ ರಸ್ತೆಯವರೆಗೆ ಒಮ್ಮೆ ಭೇಟಿ ಕೊಡಿ ಸಾಕು ಒಂದು ರಸ್ತೆಯಲ್ಲಿ ಎಷ್ಟು ರಸ್ತೆ ಗುಂಡಿಗಳಿವೆ ಎಂದು ತಿಳಿಯುತ್ತವೆ ಎಂದಿದ್ದಾರೆ. ಕೇವಲ ಪ್ಯಾಚ್ ವರ್ಕ್ನಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ರೀತಿ ಪದೇ ಪದೇ ರಸ್ತೆ ಗುಂಡಿಗಳ ನಿರ್ಮಾಣವಾಗುವುದಕ್ಕೆ ಕಾರಣರಾಗುವವರ ಮೇಲೆ ಮೊದಲು ಕ್ರಮ ತೆಗೆದುಕೊಳ್ಳಿ ಅವರ ಮೇಲೆ ದಂಡ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಅಕ್ಷಯ್ ಎನ್ನುವವರು ಮಾರತ್ಹಳ್ಳಿಯಲ್ಲಿ ಎಲ್ಲಾ ಭಾಗದಲ್ಲೂ ರಸ್ತೆ ಗುಂಡಿ ನಿರ್ಮಾಣವಾಗಿದೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಪ್ರತಿ ರಸ್ತೆಯಲ್ಲೂ ಹುಡುಕಿದರೆ ನೂರಾರು ರಸ್ತೆಗುಂಡಿಗಳು ಸಿಗುತ್ತವೆ ಎಂದು ಸಚ್ಚಿದಾನಂದ್ ಎನ್ನುವವರು ಹೇಳಿದ್ದಾರೆ.
ಬೆಂಗಳೂರಿನಾದ್ಯಂತ ಕೇವಲ 5,000 ಸಾವಿರ ರಸ್ತೆ ಗುಂಡಿಗಳಿವೆಯೇ. ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಬೆಂಗಳೂರು ಪೂರ್ವ ಪ್ರದೇಶದ ಕೇವಲ 15 ಕಿ.ಮೀ ವ್ಯಾಪ್ತಿಯ ವರ್ತೂರು, ಗುಂಜೂರು, ಬಳಗೆರೆ, ಕಾರ್ಮೆಲಾರಾಮ್ ಮತ್ತು ಸರ್ಜಾಪುರ ರಸ್ತೆಯ ಕಡೆ ನಿಮ್ಮ ಅಧಿಕಾರಿಗಳಿಗೆ ಬರುವುದಕ್ಕೆ ಹೇಳಿ ಸಾಕು. ಈ ಭಾಗದಲ್ಲೇ ನೂರಾರು ಗುಂಡಿಗಳಿವೆ ಎಂದು ನೆಟ್ಟಿಗರು ಹೇಳಿದ್ದಾರೆ.












Click it and Unblock the Notifications