ಕೋವಿಡ್ ವಾರ್ ರೂಮ್: 17 ಮಂದಿ ಮುಸ್ಲಿಂ ನೌಕರರ ಮರುನೇಮಕ?
ಬೆಂಗಳೂರು, ಮೇ 10: ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿ ಕೋವಿಡ್ ವಾರ್ರೂಮ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅಮಾನತುಗೊಂಡಿದ್ದ 17 ಮುಸ್ಲಿಂ ನೌಕರರು ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎನ್ನಲಾಗುತ್ತಿದೆ.
ಬಿಬಿಎಂಪಿಯಲ್ಲಿ ಹಾಸಿಗೆ ಬ್ಲಾಕಿಂಗ್ ನಡೆಯುತ್ತಿದೆ ಎಂದು ಆರೋಪಿಸಿದ್ದ ಸಂಸದ ಮತ್ತು ಶಾಸಕರು ಈ ನೌಕರರ ವಿರುದ್ಧ ಹರಿಹಾಯ್ದಿದ್ದರು. ಈ ಹಗರಣಕ್ಕೆ ಕೋಮು ಸ್ವರೂಪ ನೀಡಿದ್ದರು.
ಘಟನೆಯಿಂದ ನಮಗೆ ಸಾಕಷ್ಟು ನೋವಾಗಿದೆ. ನಮ್ಮನ್ನು ಉಗ್ರರಂತೆ ಬಿಂಬಿಸಲಾಗಿದೆ. ಆದರೂ ಪ್ರಸ್ತುತದ ಪರಿಸ್ಥಿತಿ ಆರ್ಥಿಕ ಸಂಕಷ್ಟವನ್ನು ಎದುರು ಮಾಡಿದ್ದು, ನಾನು ಮರಳಿ ಕೆಲಸಕ್ಕೆ ಸೇರ್ಪಡೆಗೊಳ್ಳುತ್ತಿದ್ದೇವೆಂದು ನೌಕರರೊಬ್ಬರು ಹೇಳಿದ್ದಾರೆ

ಬಿಬಿಎಂಪಿ ದಕ್ಷಿಣ ವಲಯದಲ್ಲಿರುವ ವಾರ್ ರೂಮ್ಗೆ ಬರುವಂತೆ ಸೂಚಿಸಲಾಗಿತ್ತು. ಶನಿವಾರ ರಾತ್ರಿ ಪತ್ರವೊಂದಕ್ಕೆ ಸಹಿ ಮಾಡುವಂತೆ ತಿಳಿಸಿದ್ದರು. ಪತ್ರದಲ್ಲಿ ಏನಿದೆ ಎಂಬುದನ್ನು ಓದಲೂ ನಮಗೆ ಅವಕಾಶ ನೀಡಲಿಲ್ಲ. ಬಳಿಕ ಪತ್ರದಲ್ಲಿರುವ ಅಂಶವನ್ನು ಗಟ್ಟಿಯಾಗಿ ಓದಿದರು.
ಪತ್ರಕ್ಕೆ ಸಹಿ ಮಾಡಿದ ಬಳಿಕ ಸಂಸ್ಥೆಯೊಂದು ನಮ್ಮೊಂದಿಗೆ ಗುತ್ತಿಗೆ ಮಾಡಿಕೊಂಡಿದ್ದು, ಬಿಬಿಎಂಪಿ ಅಧಿಕಾರಿಗಳು ನಮ್ಮನ್ನು ಸಂಪರ್ಕಿಸಿ ಹೊಸ ಕೆಲಸದ ಕುರಿತು ಮಾಹಿತಿ ನೀಡಲಿದ್ದಾರೆಂದು ಹೇಳಿದರು. ಆದರೆ, ಈ ವರೆಗೂ ಯಾವುದೇ ಬೆಳವಣಿಗೆಗಳು ಕಂಡು ಬಂದಿಲ್ಲ. ಬೇರೆ ಸ್ಥಳಕ್ಕೆ ನಮ್ಮನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ. ನನ್ನ ಕೆಲಸದ ಸಮಯ ಬೆಳಿಗ್ಗೆ 8 ಸಂಜೆ 4 ಗಂಟೆಯವರೆಗೆ ಇತ್ತು.
ಇದೇ ಸಮಯಕ್ಕೆ ಹೋಗುತ್ತೇನೆ. ಕೆಲಸ ಇದ್ದರೆ ಮಾಡುತ್ತೇನೆ. ಹಣಕ್ಕಾಗಿ ಅಲ್ಲದೇ ಇದ್ದರು ಸೇವೆ ಸಲ್ಲಿಸಲು ನಾನು ಕೆಲಸ ಮಾಡುತ್ತೇನೆಂದು ಮತ್ತೊಬ್ಬ ನೌಕರ ಹೇಳಿದ್ದಾರೆ.
ಕ್ರಿಸ್ಟಲ್ ಇನ್ಫೊಸಿಸ್ಟಂ ಅಂಡ್ ಸರ್ವಿಸಸ್ ಎಂಬ ಹೊರಗುತ್ತಿಗೆ ಸಂಸ್ಥೆ ಈ ನೌಕರರನ್ನು ಬಿಬಿಎಂಪಿಗೆ ಪೂರೈಸಿದೆ. ಘಟನೆ ಬಳಿಕ ಪ್ರತಿಕ್ರಿಯೆ ನೀಡಿರುವ ಇಲ್ಲಿನ ಸದಸ್ಯರು, ಕಂಪನಿಯ ಮಾಲೀಕರು ಈ ನೌಕರರ ಕೆಲಸ ಕುರಿತು ನಿರ್ಧಾರ ಕೈಗೊಂಡಿದೆ.
ವಾರ್ ರೂಮ್ನಲ್ಲಿ ಸಿಬ್ಬಂದಿಗಳ ಕೊರತೆ ಇರಬಾರದು. 17 ನೌಕರರ ಬದಲಿಗೆ ಬೇರೆ ನೌಕರರನ್ನು ನೇಮಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ನಡುವೆ ಕಂಪನಿಯ ಮಾಲೀಕ ವಿಜಯ್ ಕುಮಾರ್ ಅವರು ಪ್ರತಿಕ್ರಿಯೆ ನೀಡಲು ಸಂಪರ್ಕಕ್ಕೆ ಸಿಕ್ಕಿಲ್ಲ.
ಜಂಟಿ ಆಯುಕ್ತರು ಈ ಸಮಸ್ಯೆಯನ್ನು ನಿಭಾಯಿಸುತ್ತಿದ್ದು, ಈ ವಿಚಾರದಿಂದ ನೌಕರರನ್ನು ದೂರ ಇರಿಸಲಾಗಿದೆ. ಈ ನೌಕರರನ್ನು ವಿಧಾನಸಭಾ ಕ್ಷೇತ್ರಗಳಿಗೆ ಡೇಟಾ ಎಂಟ್ರಿ ಆಪರೇಟರ್ಗಳಾಗಿ ನೇಮಕ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.












Click it and Unblock the Notifications