48 ವಿದ್ಯಾರ್ಥಿನಿಯರಿಂದ ಅಮೋಘ ಭರತನಾಟ್ಯ ಪ್ರದರ್ಶನ
ಬೆಂಗಳೂರು, ಆಗಸ್ಟ್ 28: ಪ್ರಣವಾಂಜಲಿ ಅಕಾಡೆಮಿಯ ವಾರ್ಷಿಕ ದಿನಾಚರಣೆಯ ಪ್ರಯುಕ್ತ ಆಚರಿಸಲಾದ 'ಪ್ರಕೃತಿ - 2022' ಕಾರ್ಯಕ್ರಮ ನಗರದ ಪರಂಪರಾ ಹಾಲ್ ನಲ್ಲಿ ಶನಿವಾರ (ಆ 27) ನಡೆಯಿತು.
48 ವಿದ್ಯಾರ್ಥಿಗಳು ಭರತನಾಟ್ಯದ ವಿವಿಧ ಪ್ರಾಕಾರದ ನೃತ್ಯದ ಮೂಲಕ ಪ್ರೇಕ್ಷಕರ ಮನ ಸೆಳೆದರು. ಅಕಾಡೆಮಿಯ ಮುಖ್ಯಸ್ಥೆ ಪವಿತ್ರಾ ಪ್ರಶಾಂತ್ ನೇತೃತ್ವದಲ್ಲಿ ನವದುರ್ಗೆ ನೃತ್ಯ ಕಣ್ಮನ ಸೆಳೆಯುವಂತಿತ್ತು.
ಮೈಸೂರು ದಸರಾ ಅಂದ್ರೆ... ಸಂಸ್ಕೃತಿಯ ವೈಭವದ ಮೆರವಣಿಗೆ
ನಟೇಶ ಕೌತ್ವಂ, ಸುಬ್ರಮಣ್ಯ ಕೌತ್ವಂ, ಗಣೇಶ ಕೌತ್ವಂ ಮೂಲಕ ನಟರಾಜನನ್ನು ಆರಾಧಿಸುವ ನೃತ್ಯವನ್ನು ಪವಿತ್ರಾ ಅವರ ಶೆಷ್ಯೆಯರು ಮಾಡುವ ಮೂಲಕ ಶಿವನಿಗೆ ನೃತ್ಯ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಒನ್ಇಂಡಿಯಾ ಸಂಸ್ಥೆಯ ಬಾಲರಾಜ್ ತಂತ್ರಿ, SKEI ಸಂಸ್ಥೆಯ ಶ್ರೀನಿವಾಸ ಕುಪ್ಪ, ಕಾದಂಬರಿ ಸ್ಕೂಲ್ ಆಫ್ ಒಡಿಸ್ಸಿಯ ನಿರ್ದೇಶಕಿ ಕರಿಷ್ಮಾ ಅಹುಜಾ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಾಲರಾಜ್ ತಂತ್ರಿ, "ಕೊರೊನಾ, ಲಾಕ್ಡೌನ್ ನಿಂದಾಗಿ ಸ್ಟೇಜ್ ಪರ್ಫಾರ್ಮೆನ್ಸ್ ಗಳು ಕಮ್ಮಿಯಾಗಿದ್ದವು. ಈಗ ಎಲ್ಲಾ ಒಂದು ಹಂತಕ್ಕೆ ಸರಿದಾರಿಗೆ ಬಂದಿದೆ. ಇಂತಹ ಕಾರ್ಯಕ್ರಮ ಹೆಚ್ಚಾದಷ್ಟು ಮಕ್ಕಳ ಕಾನ್ಫಿಡೆನ್ಸ್ ಲೆವೆಲ್ ಕೂಡಾ ಹೆಚ್ಚಾಗುತ್ತದೆ" ಎಂದು ಅಭಿಪ್ರಾಯ ಪಟ್ಟರು.
ವಂದನಾ ಅರ್ಪಣೆ ಸಲ್ಲಿಸಿ ಮಾತನಾಡಿದ ಪವಿತ್ರಾ ಪ್ರಶಾಂತ್, "ಮಕ್ಕಳು ಇಂದು ಉತ್ತಮ ನೃತ್ಯ ಪ್ರದರ್ಶನ ನಡೆಸಿದ್ದರೆ ಅದಕ್ಕೆ ಪೋಷಕರ ಸಹಕಾರವೂ ಕೂಡಾ ಕಾರಣ. ಪ್ರಣವಾಂಜಲಿ ಅಕಾಡೆಮಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ನಿಮ್ಮಲ್ಲರ ಸಹಕಾರ ಮುಖ್ಯ"ಎಂದು ಹೇಳಿದರು.