Breaking: ಮೋದಿ ಮಾತು ಟೆಲಿಪ್ರಾಂಪ್ಟರ್ಗೆ ಮಾತ್ರ ಸೀಮಿತವೇ?
ಬೆಂಗಳೂರು, ಆಗಸ್ಟ್ 25: ಬಿಜೆಪಿ ಸರಕಾರದ 40% ಕಮಿಷನ್ ಹಗರಣ ಪ್ರಕರಣದ ಗಲಾಟೆ ದಿನೇ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಗುತ್ತಿಗೆದಾರರಷ್ಟೇ ಅಲ್ಲ, ಬಡ ಪೌರ ಕಾರ್ಮಿಕರೂ ಸಹ ಬಿಜೆಪಿ ಕಮಿಷನ್ ದಾಹಕ್ಕೆ ಬಲಿಯಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯ ಬಿಜಿಪಿ ಸರಕಾರದ ಮೇಲೆ ಕ್ರಮ ಕೈಗೊಳ್ಳದ ಪ್ರಧಾನಿ ಮೋದಿಯವರನ್ನು "ನಾ ಖವುಂಗಾ, ನಾ ಖಾನೆದುಂಗಾ" ಎಂಬ ತಮ್ಮ ಮಾತು ಟೆಲಿಪ್ರಾಂಪ್ಟರ್ನಲ್ಲಿ ಮೂಡಿದ ಅಕ್ಷರಗಳು ಮಾತ್ರವೇ? ಎಂದು ಪ್ರಶ್ನಿಸಿದೆ.
"ಗುತ್ತಿಗೆದಾರರಷ್ಟೇ ಅಲ್ಲ, ಬಡ ಪೌರ ಕಾರ್ಮಿಕರೂ ಸಹ ಕರ್ನಾಟಕ ಬಿಜೆಪಿ ಸರಕಾರದ ಕಮಿಷನ್ ದಾಹದ ಬಲಿಪಶುಗಳು. ಒಂದೆಡೆ ಸಾಲು ಸಾಲು ನೇಮಕಾತಿ ಅಕ್ರಮಗಳು, ಮತ್ತೊಂದೆಡೆ ವ್ಯವಸ್ಥೆಯ ಎಲ್ಲಾ ಸ್ಥರಗಳಲ್ಲೂ ಕಮಿಷನ್ ಲೂಟಿ.ಇನ್ನೊಮ್ಮೆ ಅಧಿಕಾರ ಸಿಗದು, ಈಗಲೇ ಸಾಧ್ಯವಾದಷ್ಟು ಬಾಚಿಕೊಳ್ಳೋಣ ಎಂಬ ಹಪಹಪಿತನವೇ?" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಈ ಮೂಲಕ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮಾತನ್ನು ಒತ್ತಿ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿಯರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಕಾಂಗ್ರೆಸ್, "ಮೊದಲು ಬರೆದ ಪತ್ರಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಗುತ್ತಿಗೆದಾರರು 2ನೇ ಬಾರಿಗೆ ಪ್ರಧಾನಿಗೆ ಪತ್ರ ಬರೆಯಲು ತೀರ್ಮಾನಿಸಿದ್ದಾರೆ. ನರೇಂದ್ರ ಮೋದಿಯವರೇ,"ನಾ ಖವುಂಗಾ, ನಾ ಖಾನೆದುಂಗಾ" ಎಂಬ ತಮ್ಮ ಮಾತು ಟೆಲಿಪ್ರಾಂಪ್ಟರ್ನಲ್ಲಿ ಮೂಡಿದ ಅಕ್ಷರಗಳು ಮಾತ್ರವೇ?" ಎಂದು ಟೀಕಿಸಿದ್ದಾರೆ.
ಜೊತೆಗೆ 'ತನಿಖೆಯ ಮೂಲಕ ಆ ಮಾತಿಗೆ ಬದ್ಧತೆ ತೋರುತ್ತಿಲ್ಲವೇಕೆ?" ಎಂದಿರುವ ಕರ್ನಾಟಕ ಕಾಂಗ್ರೆಸ್ 40% ಕಮಿಷನ್ ಆರೋಪ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.

ರಾಜ್ಯದ ಸರಕಾರಿ ಯೋಜನೆಗಳಲ್ಲಿ 40% ಕಮಿಷನ್ ಪ್ರಕರಣ ಬಹಿರಂಗವಾಗಿಯೇ ಹೊರ ಬಂದಿದೆ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಮಾಧ್ಯಮಗಳಿಗೆ ತಾವು ಪಡುತ್ತಿರುವ ಕಷ್ಟವನ್ನು ವಿವರಿಸಿದ್ದಾರೆ.
ಈ ಹಿನ್ನೆಲೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ನೇತೃತ್ವದ ನಿಯೋಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದೆ. ಈ ಮೊದಲು ಕೂಡ ಕಮಿಷನ್ ವಿಷಯವಾಗಿ ಗುತ್ತಿಗೆದಾರರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಆದರೆ, ಯಾವುದೇ ಉಪಯೋಗವಾಗಿಲ್ಲ. ಈಗ ಎರಡನೇ ಬಾರಿ ಪತ್ರ ಬರೆಯಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. "ಗುತ್ತಿಗೆದಾರ ಸಂಘದವರು ಪ್ರಧಾನಿಗಳಿಗೆ ಬರೆದ ಪತ್ರವನ್ನು ನೋಡಿದ್ದೆ, ಒಮ್ಮೆ ರಾಜ್ಯ ಗುತ್ತಿಗೆದಾರರ ಸಂಘದ 20-25 ಜನ ಪದಾಧಿಕಾರಿಗಳು ಬಂದು ನನ್ನನ್ನು ಭೇಟಿಯಾಗಿ ಮನವಿ ಪತ್ರ ನೀಡಿದ್ದರು. ಅದಾದ ನಂತರ ಅರಣ್ಯ ಗುತ್ತಿಗೆದಾರರ ಸಂಘದವರು ಬಂದು ಮನವಿ ಪತ್ರ ನೀಡಿದ್ದರು. ಸರ್ಕಾರ ಕಳೆದ ಏಪ್ರಿಲ್ ತಿಂಗಳಿನಲ್ಲಿ ನಮ್ಮನ್ನು ಮಾತುಕತೆಗೆ ಕರೆದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು ಬಿಟ್ಟರೆ ಯಾವ ಕ್ರಮ ಕೈಗೊಂಡಿಲ್ಲ. ಈ ವಿಚಾರವನ್ನು ತಾವು ವಿಧಾನಸಭೆಯಲ್ಲಿ ಒತ್ತಾಯ ಮಾಡಬೇಕು ಎಂದು ನನಗೆ ಮನವಿ ಮಾಡಿದ್ದರು" ಎಂದಿದ್ದರು.
"ಬಿಜೆಪಿ ಸರಕಾರದ ಅವಧಿಯಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ ಎಂದು ಬೊಬ್ಬಿರಿಯುವ ಕರ್ನಾಟಕ ಬಿಜೆಪಿ ನಾಯಕರಿಗೆ ತಮ್ಮ ಪ್ರಾಮಾಣಿಕತೆ ಬಗ್ಗೆ ಅಷ್ಟೊಂದು ವಿಶ್ವಾಸವಿದ್ದರೆ 40% ಕಮಿಷನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ತಮ್ಮ ಮೇಲಿರುವ ಆರೋಪದಿಂದ ಮುಕ್ತಿ ಹೊಂದಲಿ" ಎಂದು ಸವಾಲು ಹಾಕಿದ್ದರು.
ರಾಜ್ಯ ರಾಜಕಾರಣದಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿರುವ 40% ಕಮಿಷನ್ ಹಗರಣ ಕೇವಲ ರಾಜಕೀಯ ಪಕ್ಷಗಳಿಗೆ ಮಾತ್ರ ಲಾಭ ತಂದುಕೊಡುತ್ತದೋ, ಅದರಿಂದ ಸಂಕಷ್ಟಕ್ಕೆ ಈಡಾಗಿರುವ ಜನರಿಗೆ ನ್ಯಾಯ ದೊರೆಯುತ್ತದೆಯೋ ಎಂಬುದು ಕಾದು ನೊಡಬೇಕಿದೆ.












Click it and Unblock the Notifications