Year ender 2024: ಬೆಂಗಳೂರಲ್ಲಿ ಇ - ಖಾತಾ ಸೇರಿ 2024ರ ನಾಲ್ಕು ಪ್ರಮುಖ ಯೋಜನೆಗಳ ವಿವರ
ಬಿಬಿಎಂಪಿ ( ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) 2024ನೇ ಸಾಲಿನಲ್ಲೂ ಅಧಿಕಾರಿಗಳ ದರ್ಬಾರ್ನಲ್ಲೇ ಮುಕ್ತಾಯವಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆಗೆ ಚುನಾವಣೆ ನಡೆದು ಬರೋಬ್ಬರಿ 4 ವರ್ಷಗಳಾಗಿವೆ. ಕೋವಿ* ನಂತರ ಬಿಬಿಎಂಪಿಗೆ ಚುನಾವಣೆ ನಡೆದಿಲ್ಲ. ಚುನಾವಣೆ ನಡೆಯದೆ ಇರುವುದರಿಂದ ಬಿಬಿಎಂಪಿಯಲ್ಲಿ ಅಧಿಕಾರಿಗಳ ದರ್ಬಾರ್ ಮುಂದುವರಿದಿದೆ. ಇನ್ನು 2024ನೇ ಸಾಲಿನಲ್ಲಿ ಬಿಬಿಎಂಪಿಯು ಇ -ಖಾತಾ ಪರಿಚಯ ಸೇರಿದಂತೆ ಹಲವು ಹೊಸತುಗಳನ್ನು ಪರಿಚಯಿಸಿದೆ. ಆಸ್ತಿ ತೆರಿಗೆ ಸಂಗ್ರಹದಲ್ಲಿ ಇದೇ ಮೊದಲ ಬಾರಿಗೆ ದಾಖಲೆಯ ಮೊತ್ತವನ್ನು ಸಂಗ್ರಹಿಸಿ ಇತಿಹಾಸ ಸೃಷ್ಟಿ ಮಾಡಿದೆ. 2024ರಲ್ಲಿ ಬಿಬಿಎಂಪಿಯಲ್ಲಿ ಆಗಿರುವ ಪ್ರಮುಖ ವಿಷಯಗಳ ಮಾಹಿತಿ ಇಲ್ಲಿದೆ.
2020ಕ್ಕೆ ಬಿಬಿಎಂಪಿಯ ಚುನಾವಣೆ ಅವಧಿ ಮುಕ್ತಾಯವಾಗಿದೆ. ಇದಾದ ಮೇಲೆ ಇಲ್ಲಿಯ ವರೆಗೆ ಬಿಬಿಎಂಪಿ ಚುನಾವಣೆ ನಡೆಸುವ ಮನಸ್ಸನ್ನು ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿ ಇದ್ದ ಬಿಜೆಪಿ ಅಥವಾ ಈಗ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಎರಡೂ ಪಕ್ಷಗಳು ಮಾಡಿಲ್ಲ. ಬಿಬಿಎಂಪಿ ಚುನಾವಣೆ ನಡೆಸುವುದು ಹಲವು ಕಾರಣಕ್ಕೆ ಮುಂದೂಡಿಕೆಯಾಗುತ್ತಲ್ಲೇ ಇದೆ. ಈ ನಡುವೆ ಬಿಬಿಎಂಪಿಯು ಈ ಬಾರಿ ಹಲವು ಉತ್ತಮ ಹಾಗೂ ಪ್ರಮುಖ ಯೋಜನೆಗಳನ್ನು ಪರಿಚಯಿಸಿದೆ ಅದರ ವಿವರ ಇಲ್ಲಿದೆ.

ಇ - ಖಾತಾ: ಬಿಬಿಎಂಪಿಯು ಈ ವರ್ಷ ಪರಿಚಯಿಸಿದ ಪ್ರಮುಖ ಯೋಜನೆಗಳಲ್ಲಿ ಇ - ಖಾತಾ ಪ್ರಮುಖವಾಗಿದೆ. ಇಲ್ಲಿಯ ವರೆಗೆ 22 ಲಕ್ಷ ಇ - ಖಾತಾಗಳು https://bbmpeaasthi.karnataka.gov.in/ ಲಭ್ಯವಿದೆ ಎಂದು ಬಿಬಿಎಂಪಿ ಹೇಳಿಕೊಂಡಿದೆ. ಆನ್ಲೈನ್ ಮೂಲಕ ಇ -ಖಾತಾ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಆಸ್ತಿಗಳಲ್ಲಿ ಆಗುವ ಮೋಸವನ್ನು ತಡೆಯುವ ಉದ್ದೇಶದಿಂದ ಇ- ಖಾತಾವನ್ನು ಪರಿಚಯಿಸಲಾಗಿದೆ. ಯೂನಿವರ್ಸಲ್ ಇ-ಖಾತಾ ಸಹಾಯವಾಣಿ ಸಂಖ್ಯೆ: 94806 83695 ಈ ರೀತಿ ಇದೆ. ಇನ್ನು ಇ - ಖಾತಾ ಪಡೆಯಲು ಇಚ್ಛಿಸುವವರು https://bbmpeaasthi.karnataka.gov.in/ ಲಿಂಕ್ನ ಮೂಲಕ ಇ ಖಾತಾ ಪಡೆದುಕೊಳ್ಳಲು ಅವಕಾಶ ಇದೆ.
ನಂಬಿಕೆ ನಕ್ಷೆ ಯೋಜನೆ: ಇನ್ನು ಬಿಬಿಎಂಪಿಯು ಸಾರ್ವಜನಿಕರು ತಮ್ಮ ಮನೆಗಳನ್ನು ನಿರ್ಮಿಸಲು ನಕ್ಷೆ ಮಂಜೂರಾತಿ ಪಡೆಯಲು ಪಾಲಿಕೆಯ ಕಚೇರಿಗಳಿಗೆ ಪದೇ ಪದೇ ಭೇಟಿ ನೀಡುವುದನ್ನು ತಪ್ಪಿಸಬೇಕು ಎಂಬ ನಂಬಿಕೆ ನಕ್ಷೆ (ನಂಬಿಕೆಯೊಂದಿಗೆ ಪರಿಶೀಲಿಸುವ ವ್ಯವಸ್ಥೆ - Trust & Verify]) ಎನ್ನುವ ಯೋಜನೆಯನ್ನು ಜಾರಿ ಮಾಡಿದೆ. ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣದಾರರು ಪಾಲಿಕೆಯಲ್ಲಿ ನೊಂದಾಯಿಸಲ್ಪಟ್ಟ ಎಂಜಿನಿಯರ್, ವಾಸುಶಿಲ್ಪಿದಾರರ ಮುಖಾಂತರ ನಿವೇಶನದ ದಾಖಲೆಗಳು ಮತ್ತು ಕಟ್ಟಡ ನಕ್ಷೆಗಳನ್ನು ಪಾಲಿಕೆ ವೆಬ್ಸೈಟ್ https://bpas.bbmpgov.in/BPAMSClient4/Default.aspx?TAV=1 ಗೆ ಭೇಟಿ ನೀಡಿ ಬಿಲ್ಡಿಂಗ್ ಪರ್ಮಿಷನ್ಸ್ ಅಡಿಯಲ್ಲಿ ಅಪ್ಲೋಡ್ ಮಾಡಬಹುದಾಗಿದೆ.

ಆಯುಕ್ತರ ನಡೆ ವಲಯದ ಕಡೆ: ಇದರೊಂದಿಗೆ ಬೆಂಗಳೂರಿನ ಎಂಟು ವಲಯಗಳಲ್ಲಿನ ಜನರ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಬಿಬಿಎಂಪಿ ಮುಖ್ಯ ಆಯುಕ್ತರ ನಡೆ ವಲಯದ ಕಡೆ ಎನ್ನುವ ಯೋಜನೆಯನ್ನು ಪರಿಚಯಿಸಲಾಗಿದೆ. ಇದರ ಭಾಗವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬೆಂಗಳೂರಿನ ಪ್ರತಿ ವಲಯಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ. ಆಯುಕ್ತರೇ ವಲಯಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಶೀಲನೆ ನಡೆಸುತ್ತಿರುವುದರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಯೂ ಚುರುಕಾಗಿ ಜನರ ಸಮಸ್ಯೆ ಪರಿಹರಿಸುತ್ತಿದ್ದಾರೆ.
ಒಟಿಎಸ್ ಪದ್ಧತಿ (ಒಂದು ಬಾರಿ ಪರಿಹಾರ ಯೋಜನೆ): ಬೆಂಗಳೂರಿನಲ್ಲಿ ಆಸ್ತಿ ಬಾಕಿ ಉಳಿಸಿಕೊಂಡಿರುವವರಿಗಾಗಿ ಸರ್ಕಾರ ಹಾಗೂ ಬಿಬಿಎಂಪಿಯು ಈ ಬಾರಿ ಒಟಿಎಸ್ ಪದ್ಧತಿಯನ್ನು ಜಾರಿ ಮಾಡಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಬಾರಿ ಪರಿಹಾರ(OTS) ಯೋಜನೆಯಡಿ ಆಸ್ತಿ ತೆರಿಗೆಯ ಬಾಕಿದಾರರಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗಿತ್ತು. ಇದರಿಂದ ಲಕ್ಷಾಂತರ ಜನ ಆಸ್ತಿದಾರರಿಗೆ ಲಾಭವಾಗಿದೆ.












Click it and Unblock the Notifications