Breaking: ಕಳಪೆ ರಸ್ತೆ ಕಾಮಗಾರಿ ಪಾಲಿಕೆ ಇಬ್ಬರು ಇಂಜಿನಿಯರ್ ಅಮಾನತು
ಬೆಂಗಳೂರು ಜುಲೈ 22: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಭೇಟಿ ಹಿನ್ನಲೆ ಬಿಎಂಪಿ 23 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿದ್ದ ಕಾಮಗಾರಿ ಕಳಪೆಯಾಗಿರುವ ಕಾರಣಕ್ಕೆ ಇಬ್ಬರು ಇಂಜಿನಿಯರ್ಗಳನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ.
ಕಳಪೆ ಕಾಮಗಾರಿಗೆ ಪರಿಶೀಲಿಸಿದ ಅಧಿಕಾರಿಗಳಿಂದ ಬಿಬಿಎಂಪಿಗೆ ವರದಿ ಸಲ್ಲಿಕೆಯಾಗಿದ್ದು, ವರದಿ ಆಧರಿಸಿ ಕಳಪೆಗೆ ಕಾರಣರಾದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎ. ರವಿ ಮತ್ತು ಸಹಾಯಕ ಅಭಿಯಂತರರಾದ ಐ. ಕೆ. ವಿಶ್ವಾಸ ಅವರನ್ನು ಸೇವೆಯಿಂದ ಅಮಾನತು ಮಾಡಿ ಬಿಬಿಎಂಪಿ ಆಡಳಿತ ವಿಭಾಗದಿಂದ ಆದೇಶ ಹೊರಡಿಸಲಾಗಿದೆ.
ರಸ್ತೆಗಳಿಗೆ 40ಎಂಎಂ ಡಾಂಬರು ಮಾಡಬೇಕಿದ್ದ ಜಾಗದಲ್ಲಿ 30ಎಂಎಂ ಡಾಂಬರೀಕರಣ ಮಾಡಿದ್ದೇ ಕಳಪೆಗೆ ಕಾರಣವಾಗಿದೆ ಎಂಬುದು ಅಧಿಕಾರಿಗಳ ತನಿಖೆಗೆಯಿಂದ ತಿಳಿದು ಬಂದಿದೆ. ಇದಕ್ಕೆ ಕಾರಣರಾದ ಇಬ್ಬರು ಇಂಜಿನಿಯರ್ಗಳು ಸದ್ಯ ಅಮಾನತಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20ರಂದು ಬೆಂಗಳೂರಿಗೆ ಆಗಮಿಸಿದ್ದರು. ಕರ್ನಾಟಕದಲ್ಲಿ ಎರಡು ದಿನ ಇದ್ದ ಪ್ರಧಾನಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ನಂತರ ಮೈಸೂರಿಗೆ ಭೇಟಿ ನೀಡಿದ್ದರು.
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಅವರು ಸಂಚರಿಸಲಿರುವ ವಿವಿಧ ರಸ್ತೆಗಳನ್ನು ಬಿಬಿಎಂಪಿ 23 ಕೋಟಿ ರೂ. ಖರ್ಚು ಮಾಡಿ ಡಾಂಬರು ಹಾಕಲಾಗಿತ್ತು. ಆ ಕಾಮಗಾರಿ ಕಳಪೆಯಾಗಿದೆ ಎಂಬ ವಿಡಿಯೋ ಹರಿದಾಡುತ್ತಿದ್ದಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ರಸ್ತೆ ಕಾಮಗಾರಿ ಕುರಿತು ವರದಿ ಕೇಳಿತ್ತು. ಇದಾದ ಬಳಿಕ ತನಿಖೆಗೆ ಆದೇಶಿಸಲಾಗಿತ್ತು.
ಕಳೆಪೆ ರಸ್ತೆ ಕಾಮಗಾರಿ ವಿಚಾರ ಬೆಳಕಿಗೆ ಬಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿದ್ದರು. ಅಲ್ಲಿಂದಲೇ ಬಿಬಿಎಂಪಿಯನ್ನು ಸಂಪರ್ಕಿಸಿದ್ದರು. ಬೊಮ್ಮಾಯಿ ಸೂಚನೆ ಮೇರೆಗೆ ಕಾಮಗಾರಿ ಬಗ್ಗೆ ವರದಿ ಸಿದ್ದಪಡಿಸಿ ಬಿಬಿಎಂಪಿಗೆ ಸಲ್ಲಿಕೆ ಮಾಡಲಾಗಿತ್ತು.
Recommended Video