ಜಾಹೀರಾತು ಏಜೆನ್ಸಿಗಳಿಗೆ ಮಣೆ ಹಾಕಿತೆ ಬಿಬಿಎಂಪಿ?
ಬೆಂಗಳೂರು, ಆ, 19: ಬೆಂಗಳೂರು ಮಹಾನಗರ ಪಾಲಿಕೆ ನಗರದ ವಿವಿಧೆಡೆ ನಿರ್ಮಿಸಲು ಉದ್ದೇಶಿಸಿರುವ 18 ಮೇಲ್ಸೇತುವೆಗಳು ಅವೈಜ್ಞಾನಿಕವಾಗಿವೆ ಎಂದು ಭೂ ಸಾರಿಗೆ ನಿರ್ದೇಶನಾಲಯ ವರದಿ ನೀಡಿದೆ. ಇದು ಮಹಾನಗರ ಪಾಲಿಕೆಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ಜಾಹೀರಾತುದಾರರ ಹಿತಾಸಕ್ತಿ ಕಾಪಾಡಲು ಈ ರೀತಿಯ ಮೇಲ್ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾದಂತಿದೆ. ಇದರಿಂದ ಪಾದಚಾರಿಗಳಿಗೆ ಹೆಚ್ಚಿನ ಪ್ರಯೋಜನವಿಲ್ಲ ಎಂದು ಹೇಳಿದೆ.
ಭೂ ಸಾರಿಗೆ ನಿರ್ದೇಶನಾಲಯದ ತಜ್ಞರ ತಂಡ ಮಹಾನಗರದ 33 ಕಡೆ ಸಮೀಕ್ಷೆ ನಡೆಸಿ 69 ಪುಟಗಳ ವರದಿ ವರದಿ ನೀಡಿದೆ. ಮೇಲ್ಸೇತುವೆ ನಿರ್ಮಾಣಕ್ಕೆ ಆಯ್ದುಕೊಂಡಿರುವ 18 ಜಾಗಗಳು ಅವೈಜ್ಞಾನಿಕ. ಯಾವುದೋ ಪಟ್ಟಭದ್ರ ಹಿತಾಸಕ್ತಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದರ ಹಿಂದೆ ಅಡಗಿರುವಂತೆ ಕಾಣುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ರಸ್ತೆ ಇತಿಹಾಸ, ಟ್ರಾಫಿಕ್ ಸಮಸ್ಯೆ ಮತ್ತು ಪಾದಚಾರಿಗಳು ಅನುಕೂಲತೆ ದೃಷ್ಟಿಯಲ್ಲಿಟ್ಟುಕೊಂಡು ಸರ್ವೇ ನಡೆಸಲಾಯಿತು. ಆದರೆ ಬಿಬಿಎಂಪಿ ಆಯ್ಕೆ ಮಾಡಿರುವ 18 ಸ್ಥಳಗಳು ಇದಕ್ಕೆ ಹೊರತಾಗಿವೆ ಎಂದು ತಜ್ಞರ ವರದಿ ಸ್ಪಷ್ಟವಾಗಿ ಹೇಳಿದೆ.
ಸರಾಗ ವಾಹನ ಸಂಚಾರ, ಪಾದಚಾರಿಗಳ ಸುರಕ್ಷತೆ, ರಸ್ತೆ ಚಿತ್ರಣ ಎಲ್ಲವನ್ನೂ ಬಿಬಿಎಂಪಿ ನಿರ್ಲಕ್ಷಿಸಿದಂತೆ ಕಡುಬಂದಿದೆ. ಮೇಲ್ಸೇತುವೆ ನಿರ್ಮಾಣವಾದರೆ ಸೈಕಲ್ ಸವಾರರು, ಪಾದಚಾರಿಗಳು ಮತ್ತಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರತಿವರ್ಷ 800ರಕ್ಕೂ ಹೆಚ್ಚು ಪಾದಚಾರಿಗಳು ರಸ್ತೆ ದಾಟುವಾಗ ಅಪಘಾತಕ್ಕೀಡಾಗುತ್ತಾರೆ. ಸಂಚಾರ ದಟ್ಟಣೆ ಇರುವಲ್ಲಿ ವಾಹನದಡಿ ಸಿಲುಕುವರಲ್ಲಿ ಶೇ.50 ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಹಾಗಾಗಿ ಪಾದಚಾರಿಗಳಿಗೆ ಮೊದಲು ಸಕಲ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ವರದಿ ತಳಿಸಿದೆ.
ಗುರುತು ಮಾಡಿರುವ 6 ಸ್ಥಳಗಳಲ್ಲಿ ಮೇಲ್ಸೇತುವೆ ನಿರ್ಮಿಸಲು ಬಿಬಿಎಂಪಿ ಈಗಾಗಲೇ ವರ್ಕ್ ಆರ್ಡರ್ ನೀಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮೇಯರ್ ಬಿ.ಎಸ್.ಸತ್ಯನಾರಾಯಣ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ ಭಾಗವಹಿಸಿದ್ದರು. ಅಲ್ಲದೇ ಖಾಸಗಿ ಕಂಪನಿಯೊಂದಕ್ಕೆ ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ (ಬೂಟ್)ಜವಾಬ್ದಾರಿ ವಹಿಸಿದ್ದರು. ಆದರೆ ಜಾಹೀರಾತು ಸಂಬಂಧಿ ಹಕ್ಕುಗಳನ್ನು ಖಾಸಗಿ ಕಂಪನಿಗೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ಝೀಬ್ರಾ ಕ್ರಾಸಿಂಗ್ ಇರುವ ಸಮೀಪವೇ ಕೆಲ ಮೇಲ್ಸೇತುವೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಇನ್ನು ಕೆಲ ಕಡೆ ಸಮರ್ಪಕ ಜಾಗದ ಕೊರತೆಯಿದೆ. ಈ ಬಗೆಯ ಮೇಲ್ಸೇತುವೆಯಿಂದ ಯಾವ ಪ್ರಯೋಜನವಿರಲ್ಲ ಎಂದು ಸಮಿತಿ ವರದಿ ಸ್ಪಷ್ಟವಾಗಿ ತಿಳಿಸಿದೆ.
ಭೂ ಸಾರಿಗೆ ನಿರ್ದೇಶನಾಲಯದ ತಜ್ಞರ ತಂಡದ ಸದಸ್ಯ ಎಂ.ಎನ್.ಶಾಸ್ತ್ರೀ ಹೇಳುವಂತೆ, ಪಾದಚಾರಿಗಳಿಗೆ ಅನುಕೂಲ ಕಲ್ಪಿಸಲು ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆಯೋ, ಜಾಹೀರಾತು ಏಜೆನ್ಸಿಗಳಿಗೆ ಲಾಭ ಮಾಡಲು ಕಾಮಗಾರಿ ಹಮ್ಮಿಳ್ಳಲಾಗಿದೆಯೋ ತಿಳಿಯುತ್ತಿಲ್ಲ ಎಂದಿದ್ದಾರೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಬಿಬಿಎಂಪಿ ಅಧಿಕಾರಿಯೊಬ್ಬರು, ಟ್ರಾಫಿಕ್ ಸಮಸ್ಯೆ ಗಮನದಲ್ಲಿರಿಸಿಕೊಂಡು ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಲಾಗಿದೆ. ಭೂ ಸಾರಿಗೆ ನಿರ್ದೇಶನಾಲಯದ ತಜ್ಞರ ತಂಡ ಮಾಡಿರುವ ಆರೋಪಗಳನ್ನು ಮುಂದಿನ ಮಹಾನಗರ ಪಾಲಿಕೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications