ಬೆಂಗಳೂರು ನಿಯಮ ಪಾಲಿಸದ 1037 ಎಟಿಎಂಗೆ ಬೀಗ
ಬೆಂಗಳೂರು, ನ. 25 : ಮೂರುದಿನಗಳಲ್ಲಿ ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡುವಂತೆ ಬೆಂಗಳೂರು ಪೊಲೀಸರು ಬ್ಯಾಂಕ್ ಗಳಿಗೆ ನೀಡಿದ್ದ ಗಡುವು ಭಾನುವಾರಕ್ಕೆ ಮುಕ್ತಾಯಗೊಂಡಿವೆ. ಗಡುವು ಮುಗಿದರೂ ಭದ್ರತಾ ಸಿಬ್ಬಂದಿಗಳಿಲ್ಲದ 1037 ಎಟಿಎಂಗಳಿಗೆ ಪೊಲೀಸರು ಬೀಗ ಜಡಿದಿದ್ದಾರೆ.
ನ.19ರ ಮಂಗಳವಾರ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಮೂರು ಭದ್ರತಾ ಅಂಶಗಳನ್ನು ಪಾಲಿಸುವಂತೆ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಬ್ಯಾಂಕ್ ಗಳಿಗೆ ಆದೇಶ ನೀಡಿದ್ದರು. ಈ ನಿಯಮಗಳನ್ನು ಪಾಲಿಸಲು ಮೂರು ದಿನಗಳ ಕಾಲಾವಕಾಶವನ್ನು ನೀಡಿದ್ದರು. ಆದರೆ, ಅದನ್ನು ಪಾಲಿಸದ ಎಟಿಎಂಗಳನ್ನು ಭಾನುವಾರ ಮುಚ್ಚಲಾಗಿದೆ.

ಎಟಿಎಂಗಳಲ್ಲಿ ಸಿಸಿ ಟಿವಿ ಅಳವಡಿಸುವುದು, ಭದ್ರತಾ ಸಿಬ್ಬಂದಿ ನಿಯೋಜಿಸುವುದು ಹಾಗೂ ಅಲಾರಾಂ ಅಳವಡಿಸುವುದು ಪೊಲೀಸರು ಬ್ಯಾಂಕ್ ಗಳಿಗೆ ನೀಡಿದ ಮೂರು ನಿರ್ದೇಶನಗಳಾಗಿದ್ದವು. ಇವುಗಳನ್ನು ಪಾಲನೆ ಮಾಡದಿದ್ದರೆ, ಎಟಿಎಂಗಳಿಗೆ ಬೀಗ ಹಾಕಿ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಸಹ ಎಚ್ಚರಿಕೆ ನೀಡಿದ್ದರು. ಭಾನುವಾರಕ್ಕೆ ಈ ಗುಡುವು ಮುಕ್ತಾಯಗೊಂಡಿದ್ದು, ನಿಯಮ ಪಾಲಿಸದ ಎಟಿಎಂಗಳಿಗೆ ಬೀಗಬಿದ್ದಿದೆ. (ಭದ್ರತಾ ಸಿಬ್ಬಂದಿ ನೇಮಿಸಿ, ಇಲ್ಲ ಎಟಿಎಂ ಮುಚ್ಚಿ)
ನಗರದ ವಿವಿಧ ಪ್ರದೇಶಗಳಲ್ಲಿ ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೇಂದ್ರ ವಿಭಾಗದ 80, ಪೂರ್ವ ವಿಭಾಗದ 191, ಪಶ್ಚಿಮ ವಿಭಾಗದ 142, ಉತ್ತರ ವಿಭಾಗದ 160, ದಕ್ಷಿಣ ವಿಭಾಗದ 234, ಆಗ್ನೇಯ ವಿಭಾಗದ 145, ಈಶಾನ್ಯ ವಲಯದ 165 ಎಟಿಎಂಗಳು ಸೇರಿದಂತೆ ಒಟ್ಟು 1037 ಎಟಿಎಂಗಳಿಗೆ ಬೀಗ ಜಡಿದಿದ್ದಾರೆ.
ನ.19ರಂದು ಕಾರ್ಪೋರೇಷನ್ ಬ್ಯಾಂಕ್ ವೃತ್ತದ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆದ ನಂತರ ಗೃಹ ಸಚಿವ ಕೆ.ಜೆ,ಜಾರ್ಜ್ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಬ್ಯಾಂಕ್ ಗಳಿಗೆ ಮೂರು ಮಾರ್ಗಸೂಚಿಗಳನ್ನು ನಿಗದಿಪಡಿಸಿದ್ದರು ಮತ್ತು ಅದನ್ನು ಪಾಲಿಸರು ಮೂರು ದಿನಗಳ ಗಡುವು ನೀಡಿದ್ದರು.












Click it and Unblock the Notifications