ಕಾಂಗ್ರೆಸ್ ಸೇರಿದ ಯೋಗೀಶ್ ಗೌಡ ಪತ್ನಿ ಮಲ್ಲಮ್ಮ
Recommended Video
ಬೆಳಗಾವಿ, ಡಿಸೆಂಬರ್ 20 : ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಪತ್ನಿ ಮಲ್ಲಮ್ಮ ಕಾಂಗ್ರೆಸ್ ಸೇರಿದ್ದಾರೆ. ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಹೋರಾಟ ನಡೆಸುತ್ತಿದ್ದ ಬಿಜೆಪಿಗೆ ಇದರಿಂದ ಹಿನ್ನಡೆಯಾಗಿದೆ.
ಬೆಳಗಾವಿಯಲ್ಲಿ ಬುಧವಾರ ಸಂಜೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಸಮ್ಮುಖದಲ್ಲಿ ಮಲ್ಲಮ್ಮ ಕಾಂಗ್ರೆಸ್ ಸೇರಿದರು. ಮಲ್ಲಮ್ಮ ಇಂದು ಬೆಳಗ್ಗೆ ವಿಜಯಪುರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಆಗ ಕಾಂಗ್ರೆಸ್ ಸೇರುವುದಾಗಿ ಹೇಳಿದ್ದರು.
ಮಲ್ಲಮ್ಮ ಭೇಟಿ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಮಲ್ಲಮ್ಮ ಭೇಟಿ ಬಳಿಕ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಈ ತರಹ ಹೇಳಿಕೆ ಕೊಡಿ, ಆ ಥರ ಹೇಳಿಕೆ ಕೊಡಿ ಎಂದು ಬಿಜೆಪಿಯವರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಲ್ಲಮ್ಮ ಹೇಳಿದ್ದಾರೆ. ರಕ್ಷಣೆ ಕೇಳಿದ್ದಾರೆ, ರಕ್ಷಣೆ ನೀಡುವುದಾಗಿ ಹೇಳಿದ್ದೇನೆ' ಎಂದು ತಿಳಿಸಿದ್ದರು.
ಪರಿಷತ್ತಿನಲ್ಲಿ ಕಾವೇರಿದ ಚರ್ಚೆ : ಹತ್ಯೆಯಾದ ಯೋಗೇಶ್ ಗೌಡ ಯಾರು?
ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ, ಬಿಜೆಪಿ ನಾಯಕ ಯೋಗೀಶ್ ಗೌಡ ಅವರನ್ನು ಜೂನ್ 15, 2016 ರಂದು ಹತ್ಯೆ ಮಾಡಲಾಗಿತ್ತು. ಬೆಳ್ಳಂಬೆಳಗ್ಗೆ ಜಿಮ್ನಲ್ಲಿ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಹತ್ಯೆ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿಯೂ ಭಾರೀ ಚರ್ಚೆ ನಡೆದಿತ್ತು.
ಯಾವುದೇ ಒತ್ತಡವಿಲ್ಲ
ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಮಲ್ಲಮ್ಮ, 'ನಾನು ವಿಜಯಪುರದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರುವ ಇಚ್ಛೆ ವ್ಯಕ್ತಪಡಿಸಿದ್ದೆ. ಯಾವುದೇ ಒತ್ತಡವಿಲ್ಲದೆ ಸ್ವಯಂ ಪ್ರೇರಣೆಯಿಂದ ಕಾಂಗ್ರೆಸ್ ಸೇರಿದ್ದೇನೆ' ಎಂದರು.
ಸಚಿವರ ವಿರುದ್ಧ ಮಾತನಾಡುವಂತೆ ಹೇಳಿದ್ದರು
'ಬಿಜೆಪಿಯವರೇ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರ ವಿರುದ್ಧ ಮಾತನಾಡುವಂತೆ ಹೇಳಿದ್ದರು. ನನ್ನ ಮಕ್ಕಳ ಭವಿಷ್ಯ, ನೆಮ್ಮದಿಗಾಗಿ ಕಾಂಗ್ರೆಸ್ ಸೇರಿರುವೆ' ಎಂದರು.
ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ
'ಕಾಂಗ್ರೆಸ್ ಪಕ್ಷದಲ್ಲಿ ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಪಕ್ಷ ಸೇರಿ ಜನರ ಸೇವೆ ಮಾಡುವ ಆಸೆ ಇದೆ. ಡಿವೈಎಸ್ಪಿ ತುಳಜಪ್ಪ ಸುಲ್ಪಿ ನನ್ನ ಮನೆಗೆ ಬಂದಿಲ್ಲ' ಎಂದು ಮಲ್ಲಮ್ಮ ಸ್ಪಷ್ಟಪಡಿಸಿದರು.
ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯ
'ನನ್ನ ಪತಿ ಯೋಗೀಶ್ ಗೌಡ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡುತ್ತೇನೆ' ಎಂದು ಮಲ್ಲಮ್ಮ ಹೇಳಿದರು.
ಒತ್ತಡವಿಲ್ಲದೇ ಪಕ್ಷ ಸೇರಿದ್ದಾರೆ
'ಪಕ್ಷ ಸೇರ್ಡೆಗೂ ಮನ್ನು ಒಂದು ಗಂಟೆ ಮಲ್ಲಮ್ಮ ಜೊತೆ ಚರ್ಚಿಸಿರುವೆ. ಯಾವುದೇ ಒತ್ತಡವಿಲ್ಲದೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಿರುವೆ' ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.