Breaking: ಮಾಸ್ಕ್ ಹಾಕೋದು, ಬಿಡೋದು ನನ್ನಿಷ್ಟ ಎಂದ ಉಮೇಶ್ ಕತ್ತಿ!
ಬೆಳಗಾವಿ, ಜನವರಿ 18: ಕರ್ನಾಟಕದಲ್ಲಿ ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಬಡವರಿಗೊಂದು ರೂಲ್ಸ್, ಶ್ರೀಮಂತರಿಗೆ, ರಾಜಕಾರಣಿಗಳಿಗೆ ಹಾಗೂ ಅಧಿಕಾರದಲ್ಲಿ ಇರುವವರಿಗೆ ಇನ್ನೊಂದು ರೂಲ್ಸಾ ಎನ್ನುವ ಅನುಮಾನ ಹುಟ್ಟಿಕೊಳ್ಳುತ್ತಿದೆ.
ಬೆಳಗಾವಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣದ ಬಗ್ಗೆ ಉಲ್ಲೇಖಿಸಿರುವ ಅರಣ್ಯ ಸಚಿವ ಉಮೇಶ್ ಕತ್ತಿ, ಉಡಾಫೆ ಮಾತುಗಳನ್ನು ಆಡಿದ್ದಾರೆ. ಸಾರ್ವಜನಿಕವಾಗಿ ಮಾಸ್ಕ್ ಹಾಕಿಕೊಳ್ಳಲು ನಿರಾಕರಿಸುವ ಮೂಲಕ ಸರ್ಕಾರದ ಸಚಿವರಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಬಹಿರಂಗವಾಗಿ ಉಲ್ಲಂಘಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಮಹಾನಗರಗಳಲ್ಲಿ ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಮಾಸ್ಕ್ ಹಾಕಿಕೊಳ್ಳುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಅದನ್ನೂ ಮೀರಿ ಮಾಸ್ಕ್ ಧರಿಸದಿದ್ದರೆ 250 ರೂಪಾಯಿ ದಂಡವನ್ನು ವಿಧಿಸುವುದಾಗಿ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸುವಂತೆ ನಿಯಮಗಳನ್ನು ಹೊರಡಿಸುವ ಅದೇ ಸರ್ಕಾರದ ಪ್ರತಿನಿಧಿಗಳು ಎನಿಸಿರುವ ಸಚಿವರು ಉಡಾಫೆ ಮಾತುಗಳಿಂದ ಜನರಿಗೆ ಎಂಥ ಸಂದೇಶ ರವಾನೆಯಾಗುತ್ತದೆ ಎಂಬುದನ್ನು ಯೋಚಿಸಬೇಕಾಗಿದೆ. ಅಷ್ಟಕ್ಕೂ ಅರಣ್ಯ ಸಚಿವ ಉಮೇಶ್ ಕತ್ತಿ ಮಾಧ್ಯಮಗಳ ಎದುರಿಗೆ ನೀಡಿರುವ ಹೇಳಿಕೆ ಏನು ಎಂಬುದನ್ನು ಮುಂದೆ ಓದಿ.

ಮಾಧ್ಯಮಗಳ ಎದುರಿಗೆ ಉಮೇಶ್ ಕತ್ತಿ ಮಾತು ಹೀಗಿತ್ತು:
"ನಿನ್ನೆ ರಾತ್ರಿ ಪ್ರಧಾನಮಂತ್ರಿಗಳು ಹೇಳಿದ್ದಾರೆ. ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ. ಸಾರ್ವಜನಿಕರು ತಮ್ಮ ಸ್ವಂತ ಬುದ್ಧಿಯಿಂದ ಮಾಸ್ಕ್ ಹಾಕಿಕೊಳ್ಳಬೇಕು, ಮಾಸ್ಕ್ ಹಾಕಿಕೊಳ್ಳುವುದು ಬಿಡುವುದೂ ಆ ಮನುಷ್ಯನಿಗೆ ಬಿಟ್ಟಿದ್ದು. ಆ ಮೇಲೆ ನನಗೂ ಬಿಟ್ಟಿದ್ದು. ನನಗೆ ಮಾಸ್ಕ್ ಹಾಕಿಕೊಳ್ಳಬೇಕು ಅಂತಾ ಅನಿಸಿಲ್ಲ ಹಾಗಾಗಿ ಮಾಸ್ಕ್ ಹಾಕಿಕೊಂಡಿಲ್ಲ, ಏನೂ ತೊಂದರೆ ಇಲ್ಲ," ಎನ್ನುವ ಮೂಲಕ ಉಡಾಫೆ ಉತ್ತರವನ್ನು ನೀಡಿದ್ದಾರೆ.
ವೈದ್ಯರಿಗೆ ಎಚ್ಚರಿಕೆ ನೀಡುವ ಸರ್ಕಾರ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಬಗ್ಗೆ ಸರ್ಕಾರದ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೇ ಯಾವುದೇ ರೀತಿ ಮಾಧ್ಯಮಗಳ ಎದುರಿಗೆ ಹೇಳಿಕೆಗಳನ್ನು ನೀಡದಂತೆ ವೈದ್ಯರು, ತಜ್ಞರು ಮತ್ತು ಪರಿಣಿತರಿಗೆ ರಾಜ್ಯ ಸರ್ಕಾರವು ನಿರ್ಬಂಧ ವಿಧಿಸಿ ಪ್ರಕಟಣೆಯನ್ನು ಹೊರಡಿಸುತ್ತಿದೆ. ಇನ್ನೊಂದು ಮಗ್ಗಲಿನಲ್ಲಿ ರಾಜ್ಯ ಸರ್ಕಾರದ ಸಂಪುಟದಲ್ಲಿರುವ ಅರಣ್ಯ ಸಚಿವ ಉಮೇಶ್ ಕತ್ತಿಯವರೇ ಸಾರ್ವಜನಿಕವಾಗಿ ಮಾಸ್ಕ್ ಧರಿಸುವುದರ ಬಗ್ಗೆ ಉಡಾಫೆ ಮಾತುಗಳನ್ನು ಆಡುತ್ತಿದ್ದಾರೆ. ಸಾರ್ವಜನಿಕರು ಹಾಗೂ ಕೊರೊನಾ ವಾರಿಯರ್ಸ್ ಆಗಿ ಹೋರಾಡಿದ ವೈದ್ಯರಿಗೆ ವಿಧಿಸುವ ಕಠಿಣ ನಿಯಮಗಳು ಸಚಿವರಿಗೆ ಅನ್ವಯವಾಗುವುದಿಲ್ಲವೇ ಎಂಬ ಪ್ರಶ್ನೆ ಇಲ್ಲಿ ಹುಟ್ಟಿಕೊಳ್ಳುತ್ತದೆ.












Click it and Unblock the Notifications