ಸುವರ್ಣಸೌಧವನ್ನು ಮರಾಠ ಶ್ರೀಮಂತರಿಗೆ ಮಾರುತ್ತಾರೆ: ವಾಟಾಳ್
ಬೆಳಗಾವಿ, ನವೆಂಬರ್ 27: ಸುವರ್ಣಸೌಧವನ್ನು ಮರಾಠ ಶ್ರೀಮಂತರಿಗೆ ಒಂದಲ್ಲ ಒಂದು ದಿನಾ ಮಾರುತ್ತಾರೆ ಎಂದು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ವಾಟಾಳ್ ನಾಗರಾಜ್ ಹೇಳಿದರು.
ಸುವರ್ಣಸೌಧದ ಸುತ್ತ ನಿಷೇಧಾಜ್ಞೆ ಜಾರಿ ಮಾಡಲು ನಿಮಗೇನು ನೈತಿಕತೆ ಇದೆ, ಕರಾಳ ದಿನಾಚರಣೆ ಮಾಡುವ ಎಂಇಎಸ್ ನವರನ್ನು ಗಡಿಪಾರು ಮಾಡಲಿಲ್ಲ. ಬೆಳಗಾವಿಯ ಎಲ್ಲಾ ರಾಜಕಾರಣಿಗಳು ಮರಾಠಾ ಎಜೆಂಟರು ಎಂದು ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.
ಶಿವಸೇನೆಯವರು ಯಾವಾಗ ಬೇಕಾದರೂ ಬೆಳಗಾವಿಗೆ ಬರಬಹುದು, ಕನ್ನಡ ಮುಖಂಡರು ಬಂದರೆ ಹಿರೇಬಾಗೇವಾಡಿ ಬಳಿ ತಡೆಯುತ್ತೀರಿ. ನಿಮ್ಮ ಸರ್ಕಾರ ಮರಾಠಿ ಏಜೆಂಟ್ ಸರ್ಕಾರನಾ, ಶಿವಸೇನೆ ಏಜೆಂಟ್ ಸರ್ಕಾರನಾ? ಎಂದು ಪ್ರಶ್ನಿಸಿದರು.
ನಮ್ಮ ರಾಜ್ಯವನ್ನು ಸಿಎಂ ಯಡಿಯೂರಪ್ಪ ಹರಾಜಿಗೆ ಇಟ್ಟಿದ್ದಾರೆ. ಬೆಳಗಾವಿ ಬೇಯುತ್ತಿದೆ, ಕನ್ನಡಿಗರ ಮೇಲೆ ದಾಳಿ ನಡೆಯುತ್ತಿದೆ. ಕನ್ನಡಿಗರು ಕಣ್ಣೀರಿನಲ್ಲಿದ್ದು, ರಾಯಚೂರು, ಬೀದರ್, ಕಲಬುರಗಿ ಕನ್ನಡಿಗರ ಕೈಯಲ್ಲಿಲ್ಲ ಎಂದು ಕಿಡಿಕಾರಿದರು.
ಮರಾಠ ಪ್ರಾಧಿಕಾರ ಮಾಡಲು ನಿಮಗೇನು ಅಧಿಕಾರ ಇದೆ, ಒಂದು ನಿಮಿಷ ನೀವು ಅಧಿಕಾರದಲ್ಲಿ ಇರಲು ಲಾಯಕ್ಕಿಲ್ಲ. ಮರಾಠ ಸಮುದಾಯವೆಂದರೆ ಅವರ ಭಾಷೆ ಮರಾಠಿನೇ, ಅವರಿಗೆ ಪ್ರಾಧಿಕಾರ ಮಾಡುವ ಉದ್ದೇಶ ಏನಿತ್ತು ಎಂದು ವಾಟಾಳ್ ನಾಗರಾಜ್ ಏರು ಧ್ವನಿಯಲ್ಲೇ ಪ್ರಶ್ನಿಸಿದರು.
ಬಳ್ಳಾರಿ ವಿಭಜನೆ ಬೆನ್ನಲ್ಲೇ ಸರ್ಕಾರಕ್ಕೆ ಮತ್ತೊಂದು ಶಾಕ್
ನಾಳೆ ತಮಿಳು, ತೆಲಗುದವರು ಪ್ರಾಧಿಕಾರ ಕೇಳುತ್ತಾರೆ, ಮರಾಠ ಪ್ರಾಧಿಕಾರ ಮಾಡಿರುವುದು ಅಕ್ಷಮ್ಯ ಅಪರಾಧ. ಯಡಿಯೂರಪ್ಪ ನೀವೆ ಸಿಎಂ ಆಗಿ ಉಳಿದರೆ ಬೆಳಗಾವಿಯನ್ನು ಯಾವುದೋ ರೂಪದಲ್ಲಿ ಮಹಾರಾಷ್ಟ್ರಕ್ಕೆ ಕೊಡುತ್ತೀರಿ ಹರಿಹಾಯ್ದರು.
ಮರಾಠ ಅಭಿವೃದ್ಧಿ ನಿಗಮ ಹಿಂಪಡೆಯುವಂತೆ ಆಗ್ರಹಿಸಿ ಸುವರ್ಣ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ಹೊರಟ ವಾಟಾಳ್ ನಾಗರಾಜ್, ಸಾರಾ ಗೋವಿಂದ್ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ಕಾರ್ಯಕರ್ತರ ಸಮೇತ ವಶಕ್ಕೆ ಪಡೆಯಲಾಯಿತು. ರಸ್ತೆಯಲ್ಲಿ ಮಲಗಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂಗತರ ಪ್ರತಿಭಟನಾ ನಿರತರನ್ನು ಹೊತ್ತೊಯ್ದು ವಾಹನದಲ್ಲಿ ಕೂರಿಸಿ, ಹೋರಾಟಗಾರರನ್ನು ಧಾರವಾಡದತ್ತ ಪೊಲೀಸರು ಕರೆದೊಯ್ದರು.