ನಾಲ್ವರು ಕನ್ನಡಿಗರನ್ನು ಬಲಿಪಡೆದು ಸಾಯುವೆ!
ಬೆಳಗಾವಿ, ಜ.18 : ಬೆಳಗಾವಿ ದಕ್ಷಿಣ ಕ್ಷೇತ್ರದ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಕನ್ನಡಿಗರ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ. "ತಾವು ಸಾಯುವುದಾದರೆ ನಾಲ್ಕು ಜನ ಕನ್ನಡಿಗರನ್ನು ಬಲಿತೆಗೆದುಕೊಂಡೇ ಸಾಯುವುದಾಗಿ" ಸವಾಲು ಹಾಕುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ.
ಶುಕ್ರವಾರ ಬೆಳಗಾವಿಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ 1956ರ ಜ.17ರಂದು ಬೆಳಗಾವಿಯಲ್ಲಿ ನಡೆದ ಗಲಭೆ ವೇಳೆ ಮೃತಪಟ್ಟ ಮರಾಠಿ ಭಾಷಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಹುತಾತ್ಮ ದಿನಾಚರಣೆ ಆಯೋಜಿಸಿತ್ತು. [ಕರ್ನಾಟಕದ ಶವಯಾತ್ರೆ ಮಾಡುತ್ತೇನೆ]

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಭಾಜಿ ಪಾಟೀಲ್, "ಎಂಇಎಸ್ ಆಯೋಜಿಸಿದ್ದ ಮಹಾಮೇಳವದ ನಂತರ ನನ್ನ ಮೇಲೆ ಹಲ್ಲೆ ನಡೆಯುತ್ತಿದೆ. ಇದಕ್ಕೆ ನಾನು ಹೆದರುವುದಿಲ್ಲ. ನಾನು ಸಾಯುವುದಾದರೆ ನಾಲ್ಕು ಜನ ಕನ್ನಡಿಗರನ್ನು ಬಲಿತೆಗೆದುಕೊಂಡೇ ಸಾಯುತ್ತೇನೆ" ಎಂದು ಹೇಳಿದರು. [ಎಂಇಎಸ್ ಕರೆವೇ ಜಟಾಪಟಿ]
ಮಹಾಮೇಳವದಲ್ಲಿ ನಾನು ಮಾಡಿದ್ದ ಭಾಷಣವನ್ನು ತಪ್ಪಾಗಿ ಅರ್ಥಮಾಡಿಕೊಂಡು ಕನ್ನಡಿಗರು ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಆದರೆ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ನನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಪಾಟೀಲ್ ಘೋಷಿಸಿದರು. ಈ ಭಾಗದ 25 ಲಕ್ಷ ಮರಾಠಿ ಭಾಷಿಕರ ಭಾವನೆಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಈ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನಾನು ಮತ್ತು ಅರವಿಂದ ಪಾಟೀಲ ಹೋರಾಟಕ್ಕೆ ನಮ್ಮನ್ನು ಸಮರ್ಪಿಸಿಕೊಂಡಿದ್ದೇವೆ ಎಂದರು.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್ನಲ್ಲಿದೆ ಎಂದು ಮರಾಠಿಗರು ಕೈಕಟ್ಟಿ ಕುಳಿತುಕೊಳ್ಳಬಾರದು. ಗಡಿ ಹೋರಾಟಕ್ಕೆ ಎಲ್ಲ ಜನರು ಬೆಂಬಲ ನೀಡಿ, ತೆಲಂಗಾಣ ಮಾದರಿಯಲ್ಲಿ ಹೋರಾಟ ನಡೆಸಬೇಕು. ಮಹಾರಾಷ್ಟ್ರದ ಸಂಸದರು ಮತ್ತು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಪಾಟೀಲ್ ಕರೆ ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ನವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಮಹಾಪೌರ ಮತ್ತು ಉಪ ಮಹಾಪೌರ ಸ್ಥಾನಗಳಿಗೆ ಎಂಇಎಸ್ ನಗರ ಸೇವಕರನ್ನು ಆಯ್ಕೆ ಮಾಡಿದ ನಂತರ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ನಾಯಕರಲ್ಲಿ ಜಾಗೃತಿ ಮೂಡಿಸಲು ಮಹಾರಾಷ್ಟ್ರ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಪಾಟೀಲ್ ತಿಳಿಸಿದರು.












Click it and Unblock the Notifications