ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಪ್ರತಿಭಟನೆ
ಬೆಳಗಾವಿ, ಮಾರ್ಚ್ 03: ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ರಾಜ್ಯ ರಾಜಕೀಯದಲ್ಲಿ ಮಂಗಳವಾರ ಸಂಚಲನ ಮೂಡಿಸಿತ್ತು. ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಬುಧವಾರ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಒತ್ತಾಯಿಸಿ ಗೋಕಾಕ್ನಲ್ಲಿ ಪ್ರತಿಭಟನೆ ನಡೆಯಿತು. ಬಸವೇಶ್ವರ ವೃತ್ತದಲ್ಲಿ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಒತ್ತಾಯಿಸಿದ ಅಶೋಕ ಪೂಜಾರಿ ಅವರು, "ರಮೇಶ್ ಜಾರಕಿಹೊಳಿಯವರು ಅದು ಫೇಕ್ ವಿಡಿಯೋ ಎಂದು ಹೇಳುತ್ತಿದ್ದಾರೆ, ರಮೇಶ್ ಅವರ ಹೇಳಿಕೆಯನ್ನು ನಂಬಲಾಗದ ಸ್ಥಿತಿಯಲ್ಲಿ ಆ ದೃಶ್ಯಾವಳಿಗವೆ" ಎಂದು ಹೇಳಿದರು.

"ಒಂದು ಗಂಡು ಒಂದು ಹೆಣ್ಣು ರೂಮಿನಲ್ಲಿರುವುದನ್ನು ಯಾರಾದರೂ ಸಾಕ್ಷಿ ಹೇಳಲು ಆಗುತ್ತಾ?. ಅದು ನಾಲ್ಕು ಜನರ ಮುಂದೆ ಮಾಡುವಂತಹ ಕೆಲಸವೂ ಅಲ್ಲ, ಅವರಿಬ್ಬರೇ ಇದ್ದಾಗ ಆ ದೃಶ್ಯಾವಳಿಗಳನ್ನು ನಂಬಬೇಕು ಅದನ್ನ ಬಿಟ್ಟು ಯಾರು ಸಾಕ್ಷಿ ಹೇಳುತ್ತಾರೆ?" ಎಂದು ಪ್ರಶ್ನಿಸಿದರು.
"ಅದು ಸತ್ಯವೋ ಎಂಬುದು ತನಿಖೆಯಾಗಿ ಬಹಿರಂಗವಾಗಬೇಕಿದೆ. ತನಿಖೆ ಪೂರ್ಣವಾಗಲು ಎರಡರಿಂದ ಮೂರು ವರ್ಷ ಬೇಕು. ಅಂತಹ ಒಂದು ಗುರುತರದ ಆರೋಪ ಒಬ್ಬ ಸಚಿವನ ಮೇಲೆ ಬಂದಿದೆ, ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಲಿ" ಎಂದು ಆಗ್ರಹಿಸಿದರು.
ಸಚಿವರ ರಾಜೀನಾಮೆ; ಬುಧವಾರ ಮಧ್ಯಾಹ್ನ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ರಾಜೀನಾಮೆ ಪತ್ರವನ್ನು ಅವರು ಸಲ್ಲಿಕೆ ಮಾಡಿದ್ದಾರೆ.












Click it and Unblock the Notifications