ಪ್ರಚಾರದ ಸೆಕೆಂಡ್ ಇನ್ನಿಂಗ್ಸ್ಗೆ ರಾಹುಲ್ ಗಾಂಧಿ ಆಗಮನ
Recommended Video

ಬೆಳಗಾವಿ, ಫೆಬ್ರವರಿ 24: ಎರಡನೇ ಹಂತದ ರಾಜ್ಯ ಪ್ರವಾಸಕ್ಕೆ ರಾಹುಲ್ ಗಾಂಧಿ ಅವರು ಇಂದು ಬೆಳಗಾವಿಗೆ ಆಗಮಿಸಿದರು. ತಾಂತ್ರಿಕ ದೋಷದಿಂದಾಗಿ ಅವರ ಆಗಮನ ನಿಗದಿತ ಸಮಯಕ್ಕಿಂತಲೂ ಒಂದು ಗಂಟೆ ತಡವಾಯಿತು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಸಚಿವ ಡಿ.ಕೆ.ಶಿವಕುಮಾರ್ ಮತ್ತಿತರ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು.
ಬೆಳಗಾವಿಯಿಂದ ಹೆಲಿಕಾಪ್ಟರ್ ಮೂಲಕ ಅಥಣಿಗೆ ತೆರಳಲಿರುವ ರಾಹುಲ್ ಅವರು ಅಲ್ಲಿ 'ಜನಾಶಿರ್ವಾದ' ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿಲಿದ್ದಾರೆ. ಅಲ್ಲಿಂದ ಮತ್ತೆ ಹೆಲಿಕಾಪ್ಟರ್ನಲ್ಲಿ ವಿಜಯಪುರ ಜಿಲ್ಲೆಯ ಟಿಕೋಟಾಕ್ಕೆ ತೆರಳಿ ಮಹಿಳಾ ಸಮಾವೇಶ ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.

ವಿಜಯಪುರದಲ್ಲಿಯೇ ಸಂಜೆ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಸದಸ್ಯರ ಜೊತೆ ಸಭೆ ನಡೆಸಿ ನಂತರ ಇಂದು ವಿಜಯಪುರದಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಫೆ10 ರಿಂದ 13ರವರೆಗೂ ರಾಜ್ಯ ಪ್ರವಾಸ ಮಾಡಿದ್ದ ರಾಹುಲ್ ಅವರು ಆ ಪ್ರಚಾರ ಪ್ರವಾಸವನ್ನು ಯಶಸ್ವಿಗೊಳಿಸಿದ್ದರು. ರಾಹುಲ್ ಗಾಂಧಿ ಅವರು ದೇವಸ್ಥಾನ ಭೇಟಿ, ಸಣ್ಣ ಹೊಟೆಲ್ನಲ್ಲಿ ತಿಂದ ಮಿರ್ಚಿ ಬಜ್ಜಿ ಬಹಳ ಪ್ರವಾಸದ ಹೈಲೆಟ್ ಆಗಿತ್ತು. 'ಸಿದ್ದರಾಮಯ್ಯ ಮುಂದೆ ನೋಡಿಕೊಂಡು ಗಾಡಿ ಓಡಿಸಿದರೆ, ಮೋದಿ ಹಿಂದೆ ನೋಡಿಕೊಂಡು ಗಾಡಿ ಓಡಿಸುತ್ತಾರೆ' ಎಂಬ ರಾಹುಲ್ ಅವರ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು.












Click it and Unblock the Notifications