ಚುನಾವಣೆ ಮುಗಿದರೂ ಬಿಜೆಪಿ-ಕೈ ಕಾರ್ಯಕರ್ತರ ಗಲಾಟೆ ಇನ್ನೂ ಮುಗಿದಿಲ್ಲ
ಗದಗ, ಮೇ 14 : ಚುನಾವಣೆ ಮುಗಿದರೂ ಕಾರ್ಯಕರ್ತರ ನಡುವಿನ ಗದ್ದಲ, ಗಲಾಟೆಗಳು ಮಾತ್ರ ಇನ್ನೂ ನಿಂತಿಲ್ಲ. ಗದಗ ನಗರದಲ್ಲೂ ಭಾನುವಾರ ಸಂಜೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ಮಾರಾಮಾರಿಯಲ್ಲಿ ಬಿಜೆಪಿಯ ಶರಣಪ್ಪ, ಮುತ್ತು ಹಾಗೂ ಮಂಜು ಎಂಬುವರಿಗೆ ಗಾಯಗಳಾಗಿದ್ದು, ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಗದಗ ನಗರದ ಒಕ್ಕಲಗೇರಿ ಓಣಿಯ ರಾಚೂಟೇಶ್ವರ ದೇವಸ್ಥಾನದ ಬಳಿ ನಡೆದ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರಾದ ವಿನಾಯಕ ಜಂತ್ಲಿ, ಪ್ರಕಾಶ ಜಂತ್ಲಿ, ಶಿವು ಜಂತ್ಲಿ, ಸಂತೋಷ ಶೆಟ್ಟಿಕೇರಿ ಹಾಗೂ ಬಿಜೆಪಿ ಕಾರ್ಯಕರ್ತರಾದ ಶರಣಪ್ಪ, ಮುತ್ತು ಹಾಗೂ ಮಂಜು ನಡುವೆ ಮಾರಾಮಾರಿ ನಡೆದಿದೆ.

ಮತದಾನದ ದಿನ ಸಂಜೆ ಮತ ಹಾಕಲು ಮತಗಟ್ಟೆಗೆ ಶರಣಪ್ಪ, ಮುತ್ತು, ಮಂಜು ತೆರಳಿದ್ದರು. ಈ ಸಂದರ್ಭದಲ್ಲಿ ಮತದಾನದ ಸಮಯ ಮೀರಿದೆ ಎಂದು ವಿನಾಯಕ ಜಂತ್ಲಿ, ಪ್ರಕಾಶ ಜಂತ್ಲಿ ವಾದಿಸಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಜಗಳವಾಡಿಕೊಂಡಿದ್ದಾರೆ.
ಗದಗ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಪ್ರಕರಣ ದಾಖಲಾಗಿಲ್ಲ.
ಗದಗ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ನ ಭದ್ರಕೋಟೆ. ಕಾಂಗ್ರೆಸ್ಸೇತರ ಅಭ್ಯರ್ಥಿಗಳಿಗೆ ಇಲ್ಲಿನ ಮತದಾರರು ಮಣೆ ಹಾಕಿದ್ದು ಕಡಿಮೆ. ಒಟ್ಟಿನಲ್ಲಿ 1957ರಲ್ಲಿ ನಡೆದ ಮೊದಲ ಚುನಾವಣೆಯಿಂದ ಹಿಡಿದು ಇಲ್ಲಿಯವರೆಗಿನ 14 ಚುನಾವಣೆಗಳಲ್ಲಿ 11 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ. ಕೆ.ಎಚ್.ಪಾಟೀಲ ಕುಟುಂಬದವರೇ 9 ಬಾರಿ ಆಯ್ಕೆ ಆಗಿರುವುದು ಈ ಕ್ಷೇತ್ರದ ವಿಶೇಷ.












Click it and Unblock the Notifications