Priyanka Gandhi: ಬಡ ಮಹಿಳೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ವಿವರಿಸಿದ ಪ್ರಿಯಾಂಕಾ
ಬೆಳಗಾವಿ, ಏಪ್ರಿಲ್ 30: 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ಮತ ಪ್ರಚಾರದ ಭರಾಟೆ ಜೋರಾಗಿದ್ದು, ಮತದಾನಕ್ಕೆ ಮುನ್ನ ಮತದಾರರ ಮನ ಗೆಲ್ಲಲು ರಾಜಕೀಯ ಪಕ್ಷಗಳು ಮತೆಬೇಟೆಗೆ ಇಳಿದಿದ್ದಾರೆ.
ರಾಜ್ಯ ಚುನಾವಣೆ ಹಿನ್ನೆಲೆ ರಾಜ್ಯಕ್ಕೆ ರಾಷ್ಟ್ರೀಯ ನಾಯಕರು ಆಗಮಿಸಿದ್ದು, ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕರುನಾಡ ಕುರುಕ್ಷೇತ್ರಕ್ಕೆ ಬಿಜೆಪಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಪ್ರಚಾರ ನಡೆಸುತ್ತಿದ್ದರೆ, ಕಾಂಗ್ರೆಸ್ ಪರವಾಗಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಚಾರ ಮಾಡುತ್ತಿದ್ದಾರೆ.

ಈ ಬಾರಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಅಧಿಕಾರಕ್ಕೆ ಏರುವ ಕನಸು ಕಾಣುತ್ತಿರುವ ಕಾಂಗ್ರೆಸ್ಗೆ ರಾಹುಲ್ ಮತ್ತು ಪ್ರಿಯಾಂಕಾರೇ ಸ್ಟಾರ್ ಪ್ರಚಾರಕರಾಗಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕುಡಚಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದರು.
ಬೆಳಗಾವಿಯಲ್ಲಿ ಪ್ರಚಾರದ ನಡುವೆಯೇ, ಸಣ್ಣ ಚಾಯ್ ಅಂಗಡಿ ನಡೆಸುತ್ತಿರುವ ಮಧ್ಯಮ ವರ್ಗದ ಮಹಿಳೆಯೊಬ್ಬರ ಮನೆಗೆ ಪ್ರಿಯಾಂಕಾ ಗಾಂಧಿ ಭೇಟಿ ನೀಡಿ ಕಾಂಗ್ರೆಸ್ನ ಭರವಸೆಗಳನ್ನು ವಿವರಿಸಿದರು..#priyankagandhi #priyankagandhivadra #belagavi #chaishop #congress #KarnatakaElections2023 pic.twitter.com/T3UJwQl3JX
— oneindiakannada (@OneindiaKannada) April 30, 2023
ಬೆಳಗಾವಿಯ ಜಿಲ್ಲೆಯಲ್ಲಿ ಪ್ರಚಾರದ ನಡುವೆಯೇ, ಸಣ್ಣ ಚಾಯ್ ಅಂಗಡಿ ನಡೆಸುತ್ತಿರುವ ಮಧ್ಯಮ ವರ್ಗದ ಮಹಿಳೆಯೊಬ್ಬರ ಮನೆಗೆ ಪ್ರಿಯಾಂಕಾ ಗಾಂಧಿ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಚುನಾವಣಾ ಭರವಸೆಗಳನ್ನು ವಿವರಿಸಿದರು. ಮಧ್ಯಮ ವರ್ಗದ ಮನೆ ಒಳಗೆ ತೆರಳಿದ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ಲಾಸ್ಟಿಕ್ ಕುರ್ಚಿ ಮೇಲೆ ಕುಳಿತು ಮಹಿಳೆಯೊಂದಿಗೆ ಆತ್ಮೀಯವಾಗಿ ಮಾತನಾಡಿದರು.

2023ರ ಚುನಾವಣೆಗಾಗಿ ಕಾಂಗ್ರೆಸ್ನ ಭರವಸೆಗಳಾದ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ, ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ತಿಂಗಳು ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ, ಪದವೀಧರರಾಗಿದ್ದಾರೆ ಪ್ರತಿ ತಿಂಗಳು 3000 ರೂಪಾಯಿ, ಡಿಪ್ಲೋಮಾ ಮಾಡಿದ್ದರೆ 1500 ರೂಪಾಯಿ ಮತ್ತು ಎಲ್ಲ ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣದಂತಹ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ತಿಳಿಸಿದರು.
ದೇಶದಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ, ಜೀವನ ನಡೆಸುವುದು ಕಷ್ಟವಾಗಿದೆ. ಆದ್ದರಿಂದ ಈ ಬಾರಿ ಯೋಚನೆ ಮಾಡಿ ಮತ ಚಲಾಯಿಸಿ ಎಂದಾಗ, ಆ ಮಹಿಳೆ ನಮಗೆ ಸೌಲಭ್ಯ ಕೊಟ್ಟರೆ ನಾವು ಮತ ಕೊಡುತ್ತೇವೆ ಎಂದರು. ಆಗ ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಸ್ನಲ್ಲಿ ಫ್ರೀಯಾಗಿ ಓಡಾಡಬಹುದು ಎಂದರು.
ಬಿಜೆಪಿ ಪಕ್ಷ ಏನು ಮಾಡಿದೆ, ಅದೇ ರೀತಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂಬುದನ್ನು ಇವರಿಗೆ ತಿಳಿಸಿ ಎಂದು ಕಾರ್ಯಕರ್ತರಿಗೆ ಸೂಚಿಸಿದರು. ಈ ವೇಳೆ, ಆ ಮಧ್ಯಮ ವರ್ಗದ ಮಹಿಳೆ ತಾನೂ ನಿಮ್ಮೊಂದಿಗೆ ಬರುತ್ತೇನೆ ಎಂದಾಗ, ಓಕೆ ಬನ್ನಿ ಹೋಗೋಣ ಎಂದು ನಗುತ್ತಾ ಹೇಳಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications