ಪೀರನವಾಡಿಯ ಜಂಕ್ಷನ್ ಗೆ "ಶಿವಾಜಿ ಚೌಕ್" ಎಂದು ನಾಮಕರಣ
ಬೆಳಗಾವಿ, ಸೆಪ್ಟೆಂಬರ್ 03: ಜಿಲ್ಲಾಡಳಿತದ ರಾಜಿ ಸಂಧಾನದ ಒಪ್ಪಂದದಂತೆ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು ಇಂದು ಪೀರನವಾಡಿ ಜಂಕ್ಷನ್ ನಲ್ಲಿ ಛತ್ರಪತಿ ಶಿವಾಜಿ ಸರ್ಕಲ್ ಎಂದು ಕನ್ನಡ, ಮರಾಠಿ ಎರಡೂ ಭಾಷೆಯಲ್ಲಿರುವ ಫಲಕವನ್ನು ಅನಾವರಣಗೊಳಿಸಿದರು.
ಇಂದು ಬೆಳಿಗ್ಗೆಯೇ ಜಮಾಯಿಸಿದ ನೂರಾರು ಶಿವಾಜಿ ಅಭಿಮಾನಿಗಳು, ಪಟಾಕಿ ಸಿಡಿಸಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಫಲಕವನ್ನು ಅನಾವರಣ ಮಾಡಿದರು.
ಬೆಳಗಾವಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪನೆ ವಿವಾದಕ್ಕೆ ತೆರೆ
ಪೀರನವಾಡಿ ನಾಕಾ ಬಳಿ 'ಶಿವಾಜಿ ಚೌಕ್' ಎಂದು ನಾಮಫಲಕ ಅನಾವರಣ ಮಾಡಲಾಯಿತು. 9 X 15 ಅಡಿಯ ಬೃಹತ್ ನಾಮಫಲಕ ಹಾಕಿದ ಮರಾಠಿ ಭಾಷಿಕ ಮುಖಂಡರು ಛತ್ರಪತಿ ಶಿವಾಜಿ ಮಹಾರಾಜ ಚೌಕ್, ಪೀರನವಾಡಿ (ಚಿನ್ನಪಟ್ಟಣ) ನಾಮಫಲಕ ಉದ್ಘಾಟಿಸಿದರು. ನಂತರ ರಾಯಣ್ಣ, ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸೌಹಾರ್ದತೆಯ ಸಂದೇಶ ಸಾರಿದರು.
ನಾಮಫಲಕ ಅನಾವರಣ ಬಳಿಕ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು. ಸಂಧಾನ ಸಭೆಯ ನಿರ್ಣಯದಂತೆ ಮೂರ್ತಿಗಳು ಇರುವ ಸ್ಥಳದಲ್ಲಿ ಒಂದೊಂದೇ ಧ್ವಜ ಹಾರಿಸಲಾಯಿತು, ಸಂಗೊಳ್ಳಿ ರಾಯಣ್ಣ ಮೂರ್ತಿ ಇರುವ ಸ್ಥಳದಲ್ಲಿ ಕನ್ನಡ ಧ್ವಜ ರಾರಾಜಿಸಿತು. ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಇರುವ ಸ್ಥಳದಲ್ಲಿ ಭಗವಾ ಧ್ವಜ ಹಾರಿಸಲಾಯಿತು. ಹೆಚ್ಚುವರಿ ಧ್ವಜಗಳನ್ನು ತೆರವುಗೊಳಿಸಲಾಯಿತು.