ಬೆಳಗಾವಿಯಲ್ಲಿ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ : ರೈತರ ಮೇಲೆ ಪೊಲೀಸ್ ದರ್ಪ
ಬೆಳಗಾವಿ ನವೆಂಬರ್ 11: ಇತ್ತೀಚೆಗೆ ದೇಶದಲ್ಲಿ ರೈತರ ಮೇಲೆ ದಬ್ಬಾಳಿ, ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಉತ್ತರಪ್ರದೇಶದ ಲಖಿಂಪುರ, ಪಂಜಾಬ್ನ ಫಿರೋಜ್ಪುರ್ ಬಳಿಕ ಕರ್ನಾಟಕದ ಬೆಳಗಾವಿಯಲ್ಲಿ ಇಂದು ರೈತ ಮಹಿಳೆಯರನ್ನು ಎಳೆದಾಡುವ ದುರ್ವರ್ತನೆ ಕಂಡುಬಂದಿದೆ.
ಬೆಳಗಾವಿಯ ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ಪ್ರತಿಭಟನಾನಿರತ ಹಲಗಾ-ಮಚ್ಚೆ ಗ್ರಾಮದ ರೈತರ ಮೇಲೆ ಪೊಲೀಸರು ದಬ್ಬಾಳಿಕೆ ಮಾಡಿದ ಘಟನೆ ನಡೆದಿದೆ. ಸರಕಾರ ಮತ್ತು ಅಧಿಕಾರಿಗಳು ರೈತರಿಗೆ ಮೋಸ ಮಾಡಿ ರೈತರ ಕಣ್ತಪ್ಪಿಸಿ ಫಲವತ್ತಾದ ಭೂಮಿಯನ್ನು ಕಾಮಗಾರಿಗೆ ಸ್ವಾಧೀನ ಮಾಡಿಕೊಂಡಿದ್ದಾರೆ. ಹೀಗಾಗಿ ತಾವು ಪ್ರಾಣ ಹೋದರೂ ರಸ್ತೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಇಂದು ರೈತರು ಪಟ್ಟು ಹಿಡಿದ್ದಿದ್ದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ವಾಕ್ಸಮರ ನಡೆದಿದೆ. ಪರಸ್ಪರ ವಾಗ್ದಾಳಿ ಬಳಿಕ ಜಗಳ ವಿಕೋಪಕ್ಕೆ ತಿರುಗಿ ಎಳೆದಾಟ ನೂಕಾಟ ಮಾಡಲಾಗಿದೆ. ಈ ಸಮಯದಲ್ಲಿ ಪೊಲೀಸರು ಮಹಿಳೆಯರನ್ನು ಎಳೆದಾಡಿ ಸೀರೆ ಹರಿದು ಅಮಾನವೀಯವಾಗಿ ವರ್ತಿಸಿದ್ದಾರೆಂದು ರೈತರು ಆರೋಪಿಸಿದ್ದಾರೆ. ಪೊಲೀಸರ ದುರ್ವರ್ತನೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಕಿ ಹಚ್ಚಿಕೊಂಡು ಜಮೀನು ಮಾಲೀಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮತ್ತೋರ್ವ ರೈತ ಕುಡುಗೋಲಿನಿಂದ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸ್ಥಳದಲ್ಲಿ ನಡೆದಿದೆ.
ಈವರೆಗೆ ಸರ್ವೆಯಲ್ಲಿ ತಮ್ಮ ಜಮೀನು ಇರಲಿಲ್ಲ. ಏಕಾಏಕಿ ತಮ್ಮ ಜಮೀನನ್ನು ರಸ್ತೆ ಕಾಮಗಾರಿಯಲ್ಲಿ ಸೇರಿಕೋಂಡಿದೆ ಎಂದು ಆರೋಪಿಸಿ ರೈತರು ಇಂದು ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ನೂರಾರು ಪೊಲೀಸರನ್ನು ಕರೆತಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ನಡೆಸಿತ್ತು. ಆದರೆ ರೈತರು ಕಾಮಗಾರಿಗೆ ಅಡ್ಡಿಪಡಿಸಿ ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಪುಟ್ಟ ಮಕ್ಕಳೊಂದಿಗೆ ಬಂದ ಮಹಿಳೆಯರನ್ನು ಪೊಲೀಸರು ಎಳೆದಾಡಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ರೈತ ಮಹಿಳೆಯರನ್ನು ಎಳೆದಾಡಿ ಸೀರೆ ಹರಿದು ಹಾಕಿದ ಘಟನೆ ನಡೆದಿದೆ. ಪೊಲೀಸರ ಎಳೆದಾಟದಿಂದ ಮನನೊಂದು ಕಣ್ಣೀರಿಟ್ಟ ರೈತ ಮಹಿಳೆಯರು ಹರಿದ ಸೀರೆಯನ್ನು ತೋರಿಸುತ್ತಿರುವ ದೃಶ್ಯ ಕಂಡುಬಂತು. ಘಟನೆಯಲ್ಲಿ ಪೊಲೀಸ್ ಹಾಗೂ ರೈತರ ನಡುವೆ ವಾಗ್ವಾದ ನಡೆದು ಹದಿನೈದಕ್ಕೂ ಹೆಚ್ಚು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ರೈತರನ್ನು ವಶಕ್ಕೆ ಪಡೆದ ಪೊಲೀಸರು ಬಲವಂತವಾಗಿ ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದಾರೆ. ಪೊಲೀಸ್ ದೌರ್ಜನ್ಯಕ್ಕೆ ಮಹಿಳೆಯರು ಅಸಾಯಕರಾಗಿ ಕಣ್ಣೀರಿಟ್ಟಿದ್ದಾರೆ. ಜೊತೆಗೆ ಪೊಲೀಸ್ ಹಾಗೂ ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದ್ದಾರೆ.
ವರ್ಷಕ್ಕೆ ಮೂರು ಬೆಳೆ ನೀಡುವ ಭೂಮಿ ಮೇಲೆ ಸರ್ಕಾರದ ಮೇಲೆ ಕಣ್ಣು ಬಿದ್ದಿದೆ. ಇದು ರೈತರಗೆ ಮಾಡುತ್ತಿರುವ ದೊಡ್ಡ ಮೋಸ. ರೈತರ ಕಣ್ತಪ್ಪಿಸಿ ಜಮೀನು ಪಡೆದು, ಜಮೀನು ಖರೀದಿ ಹಣದಲ್ಲೂ ಮೋಸ ಮಾಡಲಾಗುತ್ತಿದೆ. ಪ್ರಾಣ ಹೋದರೂ ನಾವು ಜಮೀನು ಬಿಟ್ಟುಕೊಡುವುದಿಲ್ಲ. ರೈತ ಪರ ಆಡಳಿತ ಮಾಡುವ ಸರ್ಕಾರ ರೈತರ ಸಮಸ್ಯೆಗಳನ್ನು ಆಲಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಈ ಹಿಂದೆ ಬೆಳಗಾವಿಯ ಹಲಗಾ-ಮಚ್ಚೆ ಗ್ರಾಮದ ರೈತರು, ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ ಮಾಡಿದ್ದರು. ಸರಕಾರ ಮತ್ತು ಅಧಿಕಾರಿಗಳು ರೈತರಿಗೆ ಮೋಸ ಮಾಡಿ ರೈತರ ಕಣ್ತಪ್ಪಿಸಿ ಫಲವತ್ತಾದ ಭೂಮಿಯನ್ನು ಕಾಮಗಾರಿಗೆ ಸ್ವಾಧೀನ ಮಾಡಿಕೊಂಡಿದ್ದಾರೆ. ಮಾತ್ರವಲ್ಲದೆ ಮಚ್ಚೆ ಬೈಪಾಸ್ ಕಾಮಗಾರಿಗಾಗಿ ಭೂ ಸ್ವಾಧೀನ ಮಾಡಿಕೊಂಡಿದ್ದು, ಪರಿಹಾರ ನೀಡಲು ಅಧಿಕಾರಿಗಳು ಕಮೀಷನ್ ಕೇಳುತ್ತಿದ್ದಾರೆನ್ನುವ ಗಂಭೀರ ಆರೋಪವನ್ನು ಮಾಡಲಾಗಿತ್ತು. ಭೂಮಿ ಕಳೆದುಕೊಂಡ ತಮಗೆ ಪರಿಹಾರ ನೀಡಲು ಅಧಿಕಾರಿಗಳು ಲಕ್ಷಾಂತರ ರೂ. ಕಮೀಷನ್ ಕೇಳುತ್ತಿರೋದಾಗಿ ಜಿಲ್ಲಾಧಿಕಾರಿಗಳ ಮುಂದೆ ರೈತರು ತಮ್ಮ ಅಳಲು ತೋಡಿಕೊಂಡಿದ್ದರು. ವಶಪಡಿಸಿಕೊಳ್ಳಲಾದ ರೈತರ ಭೂಮಿಗೆ 57 ಲಕ್ಷ ರೂ. ಪರಿಹಾರ ನೀಡಲು 11 ಲಕ್ಷ ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳ ಸಮ್ಮುಖದಲ್ಲೇ ಸಂತ್ರಸ್ತ ರೈತರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
Recommended Video
ಭೂಮಿ ಕಳೆದುಕೊಂಡ ಎರಡೂ ಗ್ರಾಮಗಳ ನೂರಾರು ರೈತರು ಮತ್ತು ರೈತ ಮಹಿಳೆಯರು ಜಿಲ್ಲಾಧಿಕಾರಿ ಎದುರು ತಮಗಾದ ಅನ್ಯಾಯದ ಬಗ್ಗೆ ವಿವರಿಸಿದ ಬಳಿಕ ಜಿಲ್ಲಾಧಿಕಾರಿಗಳು ಕಾಮಗಾರಿಗಾಗಿ ಭೂಸ್ವಾಧೀನ ಮಾಡಿಕೊಂಡಿರುವ ಪ್ರತಿ ಜಮೀನಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರೈತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ದೂರಿನ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.