ವೈದ್ಯರನ್ನು ದರೋಡೆಕೋರರು ಎಂದಿಲ್ಲ, ರಮೇಶ್ ಕುಮಾರ್ ವ್ಯಂಗ್ಯ
ಬೆಳಗಾವಿ, ನವೆಂಬರ್ 22 : ನಾನು ವೈದ್ಯರನ್ನು ದರೋಡೆಕೋರರು ಎಂದು ಕರೆದಿಲ್ಲ ನನ್ನ ಮಾತುಗಳಿಂದ ವೈದ್ಯರಿಗೆ ಆ ಅಭಿಪ್ರಾಯ ಬಂದಿರಬಹುದು ಈ ಸಮಾಜದಲ್ಲಿ ದರೋಡೆಕೋರರನ್ನು ದರೋಡೆಕೋರರು ಎಂದು ಕರೆಯಲು ಸಾಧ್ಯವೇ ಎಂದು ಸಚಿವ ರಮೇಶ್ ಕುಮಾರ್ ವ್ಯಂಗ್ಯವಾಡಿದರು.
ಖಾಸಗಿ ವೈದ್ಯಕೀಯ ಸಂಸ್ಥೆಗಳ ಮೇಲಿನ ನಿಯಂತ್ರಣ ವಿಧೇಯಕ 2017 ಸರ್ವಾನುಮತದಿಂದ ಅಂಗೀಕಾರವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಎಂದಿಗೂ ವೈದ್ಯರನ್ನು ಜೈಲಿಗೆ ಕಳುಹಿಸುವ ದೃಷ್ಟಿಯಿಂದ ನೋಡಿಲ್ಲ. ದಯಮಾಡಿ ಆ ತಪ್ಪು ತಿಳಿವಳಿಕೆ ಬೇಡಿ, ಜೈಲಿನ ಬಗ್ಗೆ, ಕುಂದುಕೊರತೆ ನಿರ್ವಹಣಾ ಪ್ರಾಧಿಕಾರದ ಬಗ್ಗೆ ಸಂಶಯ ಬೇಡ, ನೋಂದಣಿ ಪ್ರಾಧಿಕಾರ, ಕುಂದುಕೊರತೆ ನಿರ್ವಹಣಾ ಪ್ರಾಧಿಕಾರ ಎರಡಕ್ಕೂ ಡಿಸಿ ಅವರು ಹೆಡ್ ಆಗಿ ಇರುತ್ತಾರೆ. ಕುಂದು ಕೊರತೆ ನಿರ್ವಹಣಾ ಪ್ರಾಧಿಕಾರದಲ್ಲಿ ಕ್ರಿಮಿನಲ್ ಪ್ರಕರಣಗಳಿಗೆ ವಾದ ಮಾಡಲು ಅವಕಾಶವಿರುತ್ತದೆ.

ಕುಂದುಕೊರತೆ ಸಮಿತಿಯಲ್ಲಿ ಹೆಣ್ಣು ಮಕ್ಕಳು ಇರಬೇಕು ಎನ್ನುವ ಮಾತನ್ನು ಬಹಳ ಉತ್ಸಾಹದಿಂದ ನಡಹಳ್ಳಿಯವರು ಕೇಳಿದ್ದಾರೆ. ಮಹಿಳೆಯರ ಬಗ್ಗೆ ಇರುವ ಉತ್ಸಾಹವನ್ನು ಮೆಚ್ಚಲೇ ಬೇಕು ಎಂದು ರಮೇಶ್ ಕುಮಾರ್ ನುಡಿದಾಗ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿಯವರು ಅಷ್ಟೊಂದು ಆಸಕ್ತಿಗೆ ನೀವೇ ಪ್ರೇರಣೆ ಎಂದಾಗ ಸದನದಲ್ಲಿದ್ದವರಲ್ಲಿ ನಗು ತರಿಸಿತು.
ಇಂತಹ ಐತಿಹಾಸಿಕ ಕಾಯ್ದೆ ಜಾರಿಗೆ ಕಾರಣರಾದ ಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಎಲ್ಲ ಕಾರಣಗಳಿಗೂ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ಪ್ರತ್ಯೇಕವಾಗಿ ನೋಡುವುದಿಲ್ಲ, ಪ್ರತ್ಯೇಕವಾದ ಕಮಿಷನರೇಟ್ ನ್ನು ಜನವರಿಯಲ್ಲಿ ರಚನೆ ಮಾಡುತ್ತೇವೆ ಎಂದರು.











Click it and Unblock the Notifications