ಫೋಟೋ ನೋಡಿದ್ದು ತಪ್ಪು, ಕ್ಷಮಿಸಿ : ಚೌವಾಣ್
ಬೆಳಗಾವಿ, ಡಿ. 10 : ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಮೊಬೈಲ್ ಫೋನ್ ದುರ್ಬಳಕೆ ಮಾಡಿಕೊಂಡ ಔರಾದ್ ಶಾಸಕ ಪ್ರಭು ಚೌಹಾಣ್ ಕ್ಷಮೆ ಯಾಚಿಸಿದ್ದಾರೆ. ನಾನು ಅಶ್ಲೀಲವಾದ ಯಾವುದೇ ಫೋಟೋವನ್ನು ನೋಡುತ್ತಿರಲಿಲ್ಲ ಎಂದು ಬಿಜೆಪಿ ಶಾಸಕರು ಸ್ಪಷ್ಟನೆ ನೀಡಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌವಾಣ್ ಅವರು ಸದನದ ಕಲಾಪ ನಡೆಯುತ್ತಿರುವ ವೇಳೆ ಮೊಬೈಲ್ ಫೋನ್ ಬಳಕೆ ಮಾಡಿದ್ದಾರೆ. ಮೊಬೈಲ್ ಫೋನ್ ನಲ್ಲಿ ಹಿಂದಿ/ಮರಾಠಿ ಭಾಷೆಯಲ್ಲಿದ್ದ ಸುದ್ದಿಯೊಂದನ್ನು ಜೂಮ್ ಮಾಡಿ ನೋಡಿದ್ದಾರೆ. ಇದು ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಸುವರ್ಣ ವಿಧಾನಸೌಧದ ಮುಂದೆ ಅವರು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು. [ಚೌವಾಣ್ ಮಾಡಿದ್ದೇನು? ಇಲ್ಲಿದೆ ವಿವರ]
ಶಾಸಕ ಚೌವಾಣ್ ಹೇಳಿದ್ದಿಷ್ಟು : 'ನನ್ನ ತಪ್ಪಿಗೆ ನಾನು ಕ್ಷಮೆ ಕೇಳುತ್ತಿದ್ದೇನೆ. ನಾನು ಸದನದಲ್ಲಿ ಫೋಟೋ ನೋಡಿದ್ದು ತಪ್ಪು. ಆದರೆ, ಅಶ್ಲೀಲಕರವಾದ ಫೋಟೋವನ್ನು ನಾನು ನೋಡುತ್ತಿರಲಿಲ್ಲ. ಫೋಟೋ ಕೆಳಗಿದ್ದ ಘೋಷಣೆಯನ್ನು ಓದಲು ನಾನು ಝೂಮ್ ಮಾಡಿದೆ. ಸದನಕ್ಕೆ ಮೊಬೈಲ್ ತಂದಿದ್ದು ತಪ್ಪು' ಎಂದು ಪ್ರಭು ಚೌವಾಣ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. [ಬುಧವಾರದ ಕಲಾಪದ ಮುಖ್ಯಾಂಶಗಳು]
'ನಾನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರ ಚಿತ್ರಗಳನ್ನು ನೋಡುತ್ತಿದ್ದೆ. ಆ ಸಮಯದಲ್ಲಿ ಬಂದ ಫೋಟೋಗಳನ್ನು ನೋಡಿದ್ದೇನೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ನನ್ನ ಮೊಬೈಲ್ನಲ್ಲಿ ಯಾವುದೇ ಅಶ್ಲೀಲ ಚಿತ್ರಗಳಿಲ್ಲ' ಎಂದು ಚೌವಾಣ್ ಮಾಧ್ಯಮಗಳ ಮುಂದೆ ವಿವರಣೆ ನೀಡಿದರು.
ರವಿ ಸುಬ್ರಮಣ್ಯ ಪ್ರತಿಕ್ರಿಯೆ : ಸದನದಲ್ಲಿ ಪ್ರಭು ಚೌವಾಣ್ ಪಕ್ಕದಲ್ಲಿ ಕುಳಿತಿದ್ದ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪಕ್ಕದಲ್ಲಿ ಕುಳಿತವರು ಮೊಬೈಲ್ ತೋರಿಸಿದಾಗ ಆ ಕಡೆ ಗಮನ ಹರಿಸಿದೆ. ಸದನದಲ್ಲಿ ಇಂತಹ ಕೆಲಸ ಮಾಡಬಾರದು ಎಂದು ಅವರಿಗೆ ಹೇಳಿದೆ ಎಂದು ಸ್ಪಷ್ಟನೆ ನೀಡಿದರು.
ಯಾವ ಪಕ್ಷದ ಶಾಸಕರಾದರೂ ಇಂತಹ ಕೆಲಸ ಮಾಡಬಾರದು, ಸದನಕ್ಕೆ ಮೊಬೈಲ್ ತರುವುದನ್ನು ನಿಷೇಧಿಸಬೇಕು ಮತ್ತು ಸದನದ ಹೊರಗೆ ಶಾಸಕರ ಮೊಬೈಲ್ಗಳನ್ನು ಇಡಲು ಭದ್ರತಾ ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಪೀಕರ್ಗೆ ಪತ್ರ ಬರೆಯಲಿದ್ದೇನೆ ಎಂದು ರವಿ ಸುಬ್ರಮಣ್ಯ ತಿಳಿಸಿದರು.