ಮಹಿಳೆಯರ ಕಷ್ಟ ಕಂಡು ಕಣ್ಣೀರಾದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ, ಫೆಬ್ರವರಿ 11: ನರೇಗಾ ಯೋಜನೆ ಹಾಗೂ ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಪಡುತ್ತಿರುವ ಕಷ್ಟ ಮತ್ತು ಅವರ ಕೌಟುಂಬಿಕ ಸಮಸ್ಯೆಗಳನ್ನು ಆಲಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅಕ್ಷರಶಃ ಕಣ್ಣೀರಾದರು.
ಬೆಳಗಾವಿ ತಾಲೂಕಿನ ದೇಸೂರ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಸುಮಾರು 350ಕ್ಕೂ ಹೆಚ್ಚಿನ ಮಹಿಳೆಯರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ಅವರ ಆರೋಗ್ಯದ ಬಗ್ಗೆ ವಿಚಾರಿಸಿ, ಕೌಟುಂಬಿಕ ಪರಿಸ್ಥಿತಿಗಳನ್ನು ಕೇಳಿದರು. ಕೆಲಸ ಸ್ಥಳದಲ್ಲಿ ಅವರಿಗೆ ಎದುರಾಗುತ್ತಿರುವ ತೊಂದರೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ದೇಸೂರ ಪ್ರದೇಶದಲ್ಲಿ ಈ ಮೊದಲು 3 ಅಡಿ ಭೂಮಿಯನ್ನು ಅಗೆಯಲು ನಿರ್ಧರಿಸಲಾಗಿತ್ತು. ಈ ಪ್ರದೇಶದಲ್ಲಿ ಭೂಮಿ ಬಹಳ ಗಟ್ಟಿಯಾಗಿರುವದರಿಂದ ಈಗ ಅದನ್ನು 2 ಅಡಿಗೆ ಸೀಮಿತಗೊಳಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಅವುಗಳಿಗೆ ಪರಿಹಾರ ಒದಗಿಸುವಂತೆ ಸೂಚಿಸಿದರು.

ನಂತರ ಇಟ್ಟಿಗೆ ಭಟ್ಟಿಗೆ ತೆರಳಿ ಅಲ್ಲಿಯೂ ಮಹಿಳೆಯರು ಪಡುವ ಪಾಡನ್ನು ಹತ್ತಿರದಿಂದ ನೋಡಿದರು. ಈ ಮಹಿಳೆಯರಿಗೆ ಸರಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಶಾಸಕರು ಬಂದು ತಮ್ಮ ಕಷ್ಟಗಳನ್ನು ಆಲಿಸಿದ್ದಕ್ಕೆ ಕಾರ್ಮಿಕ ಮಹಿಳೆಯರು ಖುಷಿಯಾಗಿ, ಧನ್ಯವಾದ ಸಲ್ಲಿಸಿದರು.












Click it and Unblock the Notifications