ಬಸನಗೌಡ ಪಾಟೀಲ್ ಯತ್ನಾಳ್ ನಿಯೋಗ ಸೋಮವಾರ ದೆಹಲಿಗೆ: ನನ್ನ ಉಚ್ಛಾಟನೆ ಯಾಕೆ ಆಗಿಲ್ಲ? ಯತ್ನಾಳ್ ಪ್ರತಿಕ್ರಿಯೆ
ಬೆಳಗಾವಿ, ಡಿಸೆಂಬರ್ 01: ಕರ್ನಾಟಕ ಬಿಜೆಪಿ ಬಣ ರಾಜಕೀಯವು ಈಗಾಗಲೇ ದೆಹಲಿ ತಲುಪಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮಧ್ಯೆ ವಾಕ್ಸಮರ ಮುಂದುವರಿದೆ. ಇದರ ಬೆನ್ನಲ್ಲೆ ಶಾಸಕ ಯತ್ನಾಳ್ ಅವರು ಸೋಮವಾರ ಡಿಸೆಂಬರ್ 2ರಂದು ದೆಹಲಿಗೆ ತೆರಳಲಿದ್ದಾರೆ. ಬಿಜೆಪಿ ಹೈಕಮಾಂಡ್ ಭೇಟಿ ಮಾಡಲಿದ್ದಾರೆ. ಇದೇ ವೇಳೆ ಅವರು ಬಿಜೆಪಿಯಿಂದ ಉಚ್ಚಾಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿಯಲ್ಲಿ ಭಾನುವಾರ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಾವು ವಕ್ಪ್ ವಿರುದ್ಧ ಜನ ಜಾಗೃತಿ ಮೂಡಿಸಲಿದ್ದಾರೆ. ಕಲ್ಯಾಣ ಕರ್ನಾಟಕ ಮುಗಿಸಿ ಕಿತ್ತೂರು ಕರ್ನಾಟಕದಲ್ಲಿ ಯಾತ್ರೆ ಮಾಡಲಿದ್ದೇವೆ. ಅಲ್ಲಿ ಜಾಗೃತಿ ಮೂಡಿಸುತ್ತೇವೆ.

ರಾಜ್ಯದಲ್ಲಿ ಮಠಗಳು ಮಂದಿರ ವಕ್ಫ್ ಆಗಿದೆ ಅದರ ಬಗ್ಗೆ ವರದಿ ಕೊಡಲಿದ್ದೇವೆ. ಈ ಸಂಬಂಧ ಸೋಮವಾರ ದೆಹಲಿಗೆ ಭೇಟಿ ನೀಡಲಿದ್ದು, ಜಂಟಿ ಸದನ ಸಮಿತಿ ಸದಸ್ಯರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ. ಈ ವಿಚಾರವಾಗಿ ನಾವು ದೆಹಲಿಗೆ ಹೋಗುತ್ತಿದ್ದೇವೆ ಎಂದು ಅವರು ತಮ್ಮ ದೆಹಲಿ ಪ್ರವಾಸ ಕುರಿತು ಸ್ಪಷ್ಟಪಡಿಸಿದರು.
ಶಾಸಕ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡುವಂತೆ ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿ ಕೆಲವರು ಯಡಿಯೂರಪ್ಪ ಮನೆಯಲ್ಲಿ ಕೂತಿದ್ದಕ್ಕೆ ಅವರು ಲೇವಡಿ ಮಾಡಿದರು. ಸುಬ್ರಮಣ್ಯ ನಾಯ್ಡು ಆಯಪ್ಪ ಬಹಳ ದೊಡ್ಡ ಅನಾಹುತ. ಯಡಿಯೂರಪ್ಪ ಮನೆಯಲ್ಲಿ ಉಚ್ಚಾಟನೆಗೆ ಪಟ್ಟು ಹಿಡಿದು ಕೂತರೇ ಬಿಎಸ್ವೈ ಮನೆ ಬಿಟ್ಟು ಹೋಗೊದು ಹೇಗೆ? ಯಡಿಯೂರಪ್ಪ ಮನೆಯಲ್ಲಿ ಮಲಗೋದು ಹೇಗೆ?. ಈ ವಿಷಯ ಕೇಳಿ ನನಗೆ ಆಘಾತವಾಯಿತು? ಇದು ನೋವಿನ ಸಂಗತಿ ಎಂದು ಅವರು ಲೇವಡಿ ಮಾಡಿದರು.
ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆ ಖಚಿತ ಎಂದು ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ಕಳೆದ ಹದಿನೈದು ವರ್ಷಗಳಿಂದ ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆ, ನೋಟಿಸ್ ಎಂದು ಬರುತ್ತೆ ಎಂದು ಹೇಳಲಾಗುತ್ತಿದೆ. ಹಾಗಾದರೆ 'ನನ್ನನ್ನು ಯಾಕೆ ಉಚ್ಛಾಟನೆ ಮಾಡಿಲ್ಲ'. ಈ ಬಗ್ಗೆ ವಿಶೇಷ ಕಾರ್ಯಕ್ರಮ ಮಾಡಿ ಎಂದು ಹೇಳಿದರು.
ಬಿಜೆಪಿ ತಂಡದಲ್ಲಿ ಒಡಕು ಇದೆ ಎಂದು ಬಿಂಬಿಸಬೇಡಿ. ನನ್ನ ವಿರುದ್ಧ ದೂರು ಕೊಟ್ಟಿಲ್ಲ. ನಾವು ನಾವು ಯಡಿಯೂರಪ್ಪ ಕುಟುಂಬದ ಯಾವುದೇ ಮಾತಾಡಿಲ್ಲ. ಯಾವುದೇ ಗೊಂದಲ ಇಲ್ಲ. ನಾವು ವಕ್ಫ್ ಬಗ್ಗೆ ಮಾತನಾಡುವುದೇ ತಪ್ಪಾ? ಎಂದು ಬಿವೈ ವಿಜಯೇಂದ್ರ ಹೇಳಿಕೆ ವಿಚಾರ ಕುರಿತು ಅವರು ಪ್ರತಿಕ್ರಿಯಿಸಿದರು.
ಯತ್ನಾಳ್ಗೆ ಏನು ಆಗಲ್ಲ, ನಂಬರ್ ಒನ್ ಆಗುವೆ: ಶಾಸಕ
ಮಹಾರಾಷ್ಟ್ರ ರಾಜ್ಯದಲ್ಲಿ ಮುಖ್ಯಮಂತ್ರಿ ಆಯ್ಕೆ ಬಳಿಕ ಕರ್ನಾಟಕ ಬಿಜೆಪಿಯಲ್ಲಿ ಸರ್ಜರಿ ನಡೆಯಲಿದೆ. ಮುಂದೆ ಮತ್ತೊಂದು ರಾಜ್ಯದ ಚುನಾವಣೆ ಬರಲಿದೆ. ನಿಮ್ಮ ಶಾಸಕ ಯತ್ನಾಳ್ ಏನು ಆಗೊಲ್ಲ, ಯಾರು ಗಾಬರಿ ಆಗಬೇಡಿ. ಯತ್ನಾಳ್ ಭವಿಷ್ಯದ ಬಗ್ಗೆ ಯಾರು ಚಿಂತೆ ಮಾಡಬೇಡಿ?. ಮುಂದೆ ನಾನು ಕರ್ನಾಟಕದ ನಂಬರ್ ಒನ್ ಆಗುತ್ತೇನೆ. ನಾನು ಮಾಧ್ಯವರನ್ನು ಕರೆದು ಸರಿಯಾಗಿ ಉತ್ತರ ಕೊಡುವೆ. ನನ್ನ ಉಚ್ಚಾಟನೆ ಮಾಡಲು ಮಾಧ್ಯಮದರ ಒತ್ತಡ ಇತ್ತು ಎಂದು ಹೇಳುತ್ತೇನೆ ಎಂದು ಅವರು ತಮ್ಮದೇ ಆದ ಶೈಲಿಯಲ್ಲಿ ಮಾತನಾಡಿದರು.
ರಾಜ್ಯಕ್ಕೆ ಮಾತ್ರವಲ್ಲದೇ ವಕ್ಪ್ ಇಡೀ ದೇಶದ ಕ್ಯಾನ್ಸರ್. ಇದೆಲ್ಲದ್ದಕ್ಕೂ ಬೆಂಕಿ ಹಚ್ಚಿದ್ದೇ ಸಚಿವ ಜಮೀರ್ ಅಹಮ್ಮದ್ ಖಾನ್. ಮೊದಲು 1.15 ಲಕ್ಷ ಎಕರೆ ವಕ್ಫ್ ಆಸ್ತಿ ಎಂದಿದ್ದ ಭೂಪ ಈಗ 6 ಲಕ್ಷ ಎಕರೆ ಕ್ಲೇಮ್ ಮಾಡುತ್ತಿದ್ದಾನೆ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.
ಮಾಧ್ಯಮದವರಿಗೆ ನನ್ನ ಮೇಲೆ ಪ್ರೀತಿ ಇದೆಯೇ? ಇಲ್ಲ ನನ್ನ ಮುಗಿಸಬೇಕು ಎನ್ನುವ ಉದ್ದೇಶ ಇದೆಯಾ ಎಂಬುದು ಗೊತ್ತಿಲ್ಲ ಪ್ರೀತಿ ತೋರಿಸಿ ಮಾತನಾಡಿಸಿ ಆ ಮೇಲೆ ಉಚ್ಛಾಟನೆ ಸುದ್ದಿ ಬಿತ್ತರಿಸುತ್ತೀರಿ ಎಂದರು.
ವಕ್ಫ್ ವಿರುದ್ಧ ಎರಡನೇ ಹಂತದ ಹೋರಾಟ
ದೆಹಲಿಯಲ್ಲಿ ಬಂದ ಬಳಿಕ ವಕ್ಫ ವಿಚಾರದಲ್ಲಿ ಎರಡನೇ ಹಂತದ ಹೋರಾಟ ನಡೆಯಲಿದೆ. ಚಿಕ್ಕಬಳ್ಳಾಪುರದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಇದನ್ನು ನೋಡಿಕೊಂಡು ನಾವು ಸುಮ್ಮನಿರುವುದಿಲ್ಲ. ಬಹಳಷ್ಟು ಕಾಂಗ್ರೆಸ್ ನಾಯಕರು ಉಪ ಚುನಾವಣೆ ಬಳಿಕ ವಕ್ಪ್ ಹೋರಾಟ ಇರುವುದಿಲ್ಲ. ಈಗ ಯಾವ ಚನಾವಣೆ ಇದೆ ಹೇಳಿ ಎಂದು ಪ್ರಶ್ನಿಸಿದರು.
ದೀಪ ಆರಿರುವವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಬಿಎಸ್ ಯಡಿಯೂರಪ್ಪ ಆಪ್ತರಿಗೆ ಅವರು ಟಾಂಗ್ ನೀಡಿದರು. ಎಂ.ಬಿ. ರೇಣುಕಾಚಾರ್ಯ ನಾವೆಲ್ಲ ಜವಾರಿ ಎಂದಿದ್ದಾರೆ. ದೇಶದಲ್ಲಿ ಹುಟ್ಟಿದವರು ಎಲ್ಲರೂ ಜವಾರಿನೆ. ಹೊರಗಿನಿಂದ ಬಂದವರು ಮಾತ್ರ ಹೈಬ್ರಿಡ್ ಎಂದು ಯಡಿಯೂರಪ್ಪ ಬಣಕ್ಕೆ ತಿರುಗೇಟು ಕೊಟ್ಟರು. ವಕ್ಫ್ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.












Click it and Unblock the Notifications