ಬರೀ ಅಕ್ಕಿ, ಗೋಧಿ ಕೊಟ್ಟರೆ ಸಾಕಾಗದು; ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ, ಏಪ್ರಿಲ್ 30: ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕೊರೊನಾ ಜೊತೆ ಇಲ್ಲಿ ಮೂಲ ಸೌಕರ್ಯಗಳ ಕೊರತೆಯೂ ಕಾಡುತ್ತಿದೆ. ಸರ್ಕಾರ ಈ ಕಡೆ ಗಮನ ಹರಿಸಬೇಕಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹಿಸಿದರು.
ಇಂದು ಈ ಕುರಿತು ಮಾತನಾಡಿದ ಅವರು, "ಹಿರೇಬಾಗೇವಾಡಿ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ. ಆದರೆ ಇಲ್ಲಿನ ಜನರಿಗೆ ಸಮಸ್ಯೆ ಎದುರಾಗಿದೆ. ಸರ್ಕಾರ ಕೇವಲ ಅಕ್ಕಿ, ಗೋಧಿ ನೀಡುತ್ತಿದೆ. ಇವಿಷ್ಟೇ ಸಾಕಾಗುವುದಿಲ್ಲ. ಇದರೊಂದಿಗೆ ಅನೇಕ ಸಾಮಗ್ರಿಗಳನ್ನು ನೀಡಬೇಕು" ಎಂದು ಹೇಳಿದರು.
ಮುಖ್ಯಮಂತ್ರಿ ಮನೆ ಬಾಗಿಲು ಹುಡುಕಿಕೊಂಡು ಬಂದ 'ಲಕ್ಷ್ಮಿ'
ಗ್ರಾಮದಲ್ಲಿ ಯಾರೊಬ್ಬರಿಗೂ ಸೋಂಕಿನ ಲಕ್ಷಣ ಇಲ್ಲ. ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಆತಂಕವೂ ಹೆಚ್ಚಾಗಿದೆ. ಗ್ರಾಮದ ಅನಾರೋಗ್ಯ ಪೀಡಿತರು ದಿನವೂ ಫೋನ್ ಮಾಡಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಬೇಕೆಂದು ಡಿಸಿ, ಉಸ್ತುವಾರಿ ಕಾರ್ಯದರ್ಶಿ ಗಮನಕ್ಕೆ ತಂದಿದ್ದೇನೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದೇನೆ ಎಂದರು.
ಕೇವಲ ಅಕ್ಕಿ, ಗೋಧಿಯಿಂದ ಜೀವನ ನಡೆಯುವುದಿಲ್ಲ. ಜಿಲ್ಲಾಧಿಕಾರಿಗಳು ಈವರೆಗೆ ಗ್ರಾಮಕ್ಕೆ ಭೇಟಿ ನೀಡಿಲ್ಲ. ಈ ಬಗ್ಗೆ ಗ್ರಾಮದ ಮುಖಂಡರು ಗಮನಕ್ಕೆ ತಂದಿದ್ದಾರೆ. ಗ್ರಾಮದಲ್ಲಿ ಶೀಘ್ರದಲ್ಲೇ ರಾಪಿಡ್ ಟೆಸ್ಟ್ ನಡೆಸಬೇಕು. ಸರ್ಕಾರವೇ ಗ್ರಾಮದಲ್ಲಿ ತರಕಾರಿ, ದಿನಸಿ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದ್ದಾರೆ.