ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದ್ದ ರಾಜ್ಯದ ಕುಸ್ತಿಪಟುಗಳಿಗೆ ಅವಮಾನ
ಬೆಳಗಾವಿ, ಜನವರಿ 29: ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದ್ದ ರಾಜ್ಯದ ಕುಸ್ತಿಪಟುಗಳಿಗೆ ಅವಮಾನ ಮಾಡಲಾಗಿದೆ. ರಾಜ್ಯ ಕುಸ್ತಿ ಸಂಘದಿಂದ ಕುಸ್ತಿಪಟುಗಳ ಬಗ್ಗೆ ನಿರ್ಲಕ್ಷ್ಯ ಹಾಗೂ ದೌರ್ಜನ್ಯದ ಆರೋಪ ಕೇಳಿಬಂದಿದೆ.
ಜನವರಿ 21 ಹಾಗೂ 22ರಂದು ನೋಯ್ಡಾದಲ್ಲಿ ರಾಷ್ಟ್ರಮಟ್ಟದ ಹಿರಿಯರ ಕುಸ್ತಿ ಪಂದ್ಯಾವಳಿಯಿತ್ತು. ಪಂದ್ಯಾವಳಿಯಲ್ಲಿ ಭಾಗಿಯಾಗಲು ರಾಜ್ಯದಿಂದ ಐವರು ಕುಸ್ತಿಪಟುಗಳು ತೆರಳಿದ್ದರು. ಆದರೆ ಕುಸ್ತಿಪಟುಗಳ ಜೊತೆ ಯಾವುದೇ ತರಬೇತುದಾರ, ಸಿಬ್ಬಂದಿ ತೆರಳಿಲ್ಲ ಎಂದು ಆರೋಪಿಸಲಾಗಿದೆ.
"ಜನರಿಗೆ ಪ್ರಚೋದನೆ ಮಾಡಿ ಅಧಿಕಾರಕ್ಕೆ ಬರೋದು ಶಿವಸೇನೆ ಅಜೆಂಡಾ''
ಅದೇ ರೀತಿ ಯಾವುದೇ ರೀತಿಯ ಸ್ಪೋರ್ಟ್ಸ್ ಕಿಟ್ ಅಥವಾ ಸೌಲಭ್ಯ ನೀಡಿಲ್ಲ. ಪಂದ್ಯಾವಳಿ ಮುಗಿಸಿ ವಾಪಸ್ ಬರಬೇಕೆಂದರೂ ರೇಲ್ವೆ ಟಿಕೆಟ್ ಕ್ಯಾನ್ಸಲ್ ಆಗಿದೆ. ರಾಜ್ಯ ಕುಸ್ತಿ ಸಂಘದ ಕಾರ್ಯದರ್ಶಿ ನರಸಿಂಹಮೂರ್ತಿಗೆ ಕರೆ ಮಾಡಿದರೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದೆ.
ಕುಸ್ತಿಪಟುಗಳು ನರಸಿಂಹಮೂರ್ತಿಗೆ ಕರೆ ಮಾಡಿದಾಗ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮರಳಿ ವಾಪಸ್ ಬರಲಾಗದೇ ಕುಸ್ತಿಪಟುಗಳು ಎರಡು ದಿನ ರೇಲ್ವೆ ನಿಲ್ದಾಣದ ಹೊರಗೆ ಕಳೆದಿದ್ದಾರೆ.
ರಾಷ್ಟ್ರೀಯ ಕುಸ್ತಿಪಟುಗಳು ಕೊರೆಯುತ್ತಿರುವ ಚಳಿಯಲ್ಲಿ ರೇಲ್ವೆ ನಿಲ್ದಾಣದ ಹೊರಗೆಯೇ ಮಲಗಿದ್ದರು. ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲದಂತಾಗಿದೆ.
ತರಬೇತುದಾರ ಬರದ ಕಾರಣಕ್ಕೆ ಮೆಡಲ್ ಮಿಸ್ ಆಯ್ತು ಎಂದು ಕುಸ್ತಿಪಟುಗಳ ಅಳಲು ತೊಡಿಕೊಂಡಿದ್ದಾರೆ. ರೈಲು ನಿಲ್ದಾಣದಲ್ಲಿ ಊಟ, ಉಪಹಾರಕ್ಕಾಗಿ ಕುಸ್ತಿಪಟುಗಳು ಪರದಾಡಿದ್ದಾರೆ.
ಕೊನೆಗೆ ಕರ್ನಾಟಕ ರಾಜ್ಯ ಭಾರತೀಯ ಶೈಲಿ ಕುಸ್ತಿ ಸಂಘದ ಅಧ್ಯಕ್ಷ ರತನ್ ಮಠಪತಿಗೆ ಕರೆ ಮಾಡಿದಾಗ, ದೆಹಲಿಯಲ್ಲಿದ್ದ ಪರಿಚಿತ ಕುಸ್ತಿಪಟುಗಳಿಗೆ ಕರೆ ಮಾಡಿದಾಗ ಅವರು ಹಣದ ವ್ಯವಸ್ಥೆ ಮಾಡಿಸಿದ್ದಾರೆ.
ಆ ಬಳಿಕ ನೊಯ್ಡಾದಿಂದ ರಾಜ್ಯಕ್ಕೆ ಕುಸ್ತಿಪಟುಗಳು ಮರಳಿದ್ದಾರೆ. ರಾಜ್ಯ ಕುಸ್ತಿ ಸಂಘದ ಕಾರ್ಯದರ್ಶಿ ನರಸಿಂಹಮೂರ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಸ್ತಿಪಟುಗಳು ಒತ್ತಾಯಿಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.