ಜಾರಕಿಹೊಳಿ ಸಹೋದರರ ಸ್ಪರ್ಧೆ, ಇದರ ಹಿಂದಿನ ಕಹಾನಿ ಏನು?
ಬೆಳಗಾವಿ, ಡಿಸೆಂಬರ್ 01: ಗೋಕಾಕ್ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಇಲ್ಲಿ ಸಹೋದರರೇ ಸ್ಪರ್ಧಿಗಳಾಗಿದ್ದರಿಂದ ಬೇರೆ ಕ್ಷೇತ್ರಗಳಿಗಿಂತ ಹೆಚ್ಚಿನ ಕುತೂಹಲ ಮೂಡಿಸಿದೆ. ಒಂದೇ ಕುಡುಂಬದ ಇಬ್ಬರು ಪ್ರತಿಸ್ಪರ್ಧಿಗಳಾಗಿದ್ದರ ಹಿಂದೆ ಬೇರೆ ಏನಾದರು ತಂತ್ರವಿದೆಯಾ ಎಂಬ ಅನುಮಾನ ಬೆಳಗಾವಿ ರಾಜಕೀಯ ನಾಯಕರನ್ನ ಕಾಡಲಾರಂಭಿಸಿದೆ.
ಗೋಕಾಕ್ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರು ಪರಸ್ಪರ ಅಭ್ಯರ್ಥಿಗಳಾಗಿದ್ದು, ಇದರ ಹಿಂದೆ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆಯಾ ಎಂಬ ಗುಸುಗುಸು ಬೆಳಗಾವಿ ಕಾಂಗ್ರೆಸ್ ನಾಯಕರಲ್ಲಿ ಹರಿದಾಡುತ್ತಿದೆ.
ಬಿಜೆಪಿಯಿಂದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ನಿಂದ ಲಖನ್ ಜಾರಕಿಹೊಳಿ ನಡುವೆ ಇರುವ ಸ್ಪರ್ಧೆ ಅಸಲಿನಾ ಅಥವಾ ನಕಲಿನಾ ಎಂಬ ಸಂಶಯ ಎಲ್ಲರಲ್ಲೂ ಮೂಡಿದೆ, ಎಲ್ಲರಿಗಿಂತ ಹೆಚ್ಚಾಗಿ ಜಾರಕಿಹೊಳಿ ಕುಟುಂಬವನ್ನು ಸದಾ ದ್ವೇಷಿಸುವ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕಾಡುತ್ತಿದೆ. ಈ ವಿಚಾರವನ್ನು ಹೈಕಮಾಂಡ್ ಅವರ ಗಮನಕ್ಕೂ ತಂದಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಇಂದು ಬೆಳಗಾವಿಗೆ ಆಗಮಿಸಲಿದ್ದು, ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸಿದ ನಂತರ, ಗೋಕಾಕ್ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ.
ಜಾರಕಿಹೊಳಿ ಸಹೋದರರ ನಡುವೆ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆಯಾ ಎನ್ನುವ ಬಗ್ಗೆ ಸ್ವತಃ ಹೈಕಮಾಂಡ್ ಕಣ್ಣಿಟ್ಟಿದ್ದು, ರಾಜ್ಯ ಉಸ್ತುವಾರಿಯೇ ಇದರ ಬಗ್ಗೆ ತಿಳಿದುಕೊಳ್ಳಲು ಮುಂದಾಗಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಇದರ ಬಗ್ಗೆ ದೂರು ನೀಡಿದ್ದು, ಮುಂದೆ ಏನಾಗುತ್ತದೆಂದು ಕಾದು ನೋಡಬೇಕಿದೆ.
ಗೋಕಾಕ್ ಆಖಾಡದಲ್ಲಿ ಕಾಂಗ್ರೆಸ್ ನಿಂದ ಲಖನ್ ಜಾರಕಿಹೊಳಿ, ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಮತ್ತು ಜೆಡಿಎಸ್ ನಿಂದ ಅಶೋಕ್ ಪೂಜಾರಿ ಉಪ ಚುನಾವಣಾ ಆಖಾಡದಲ್ಲಿದ್ದಾರೆ. ಡಿಸೆಂಬರ 05 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications