ನನಗೆ ಅನ್ಯಾಯವಾಗಿದೆ, ಆದರೆ....: ಅನಿಲ ಬೆನಕೆ
ಬೆಳಗಾವಿ, ಏಪ್ರಿಲ್ 17: ನಾನು ಬಿಜೆಪಿಯಲ್ಲಿ ಅನ್ಯಾಯಕ್ಕೊಳಗಾಗಿದ್ದೇನೆ. ಆದರೂ ಬಿಜೆಪಿಯಲ್ಲೇ ಇದ್ದು ಬೆಳಗಾವಿ ಉತ್ತರ ಕ್ಷೇತ್ರದಿಂದ ಡಾ.ರವಿ ಪಾಟೀಲ್ ಅವರ ಗೆಲುವಿಗೆ ಶ್ರಮಿಸುವುದಾಗಿ ಬಿಜೆಪಿ ಬೆಳಗಾವಿ ನಗರಾಧ್ಯಕ್ಷ ಹಾಗೂ ಶಾಸಕ ಅನಿಲ ಬೆನಕೆ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ ಎಲ್ ಸಂತೋಷ್ ಅವರೊಂದಿಗೆ ಸಭೆ ನಡೆಸಿದ ನಂತರ ಬೆನಕೆ ಅವರು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಿಂದ ಉಮೇದುವಾರಿಕೆಗೆ ಅರ್ಜಿ ಸಲ್ಲಿಸಿದ್ದು, ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ತಮ್ಮ ಕ್ಷೇತ್ರದಲ್ಲಿ ಶಾಂತಿ ನೆಲೆಸಿದೆ ಎಂದು ಹೇಳಿಕೊಂಡಿದ್ದಾರೆ.

ಆದರೆ, ಉಮೇದುವಾರಿಕೆಗೆ ಅವರ ಹೆಸರನ್ನು ಸಲ್ಲಿಸಿದ್ದರೂ, ಬಿಜೆಪಿಯು ಡಾ.ರವಿ ಪಾಟೀಲ್ ಅವರನ್ನು ಸ್ಥಾನದಿಂದ ಆಯ್ಕೆ ಮಾಡಿದೆ. ಬಿಜೆಪಿ ಡಾ.ಪಾಟೀಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ನಿರ್ಧರಿಸಿದೆ. ನನಗೆ ಏಕೆ ಉಮೇದುವಾರಿಕೆ ನಿರಾಕರಿಸಲಾಗಿದೆ ಮತ್ತು ಡಾ.ಪಾಟೀಲ್ ಅವರನ್ನು ಏಕೆ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂಬುದು ನನಗೆ ತಿಳಿದಿಲ್ಲ ಎಂದು ಬೆನಕೆ ಹೇಳಿದರು.
ಆದರೆ, ಬಿಜೆಪಿಗೆ ನಿಷ್ಠೆ ಎಂದು ಪುನರುಚ್ಚರಿಸಿದ ಅವರು, ಕಳೆದ 30 ವರ್ಷಗಳಿಂದ ಬಿಜೆಪಿ ಜತೆ ಒಡನಾಟವಿದ್ದು, ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದರು. ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕಳೆದುಕೊಂಡಿದ್ದ ಅನಿಲ ಬೆನಕೆ ಅವರನ್ನು ಸಮಾಧಾನಪಡಿಸಲು ಎರಡು ದಿನಗಳ ಹಿಂದೆ ಬಿಎಲ್ ಸಂತೋಷ್ ಅವರು ಅನಿಲ್ ಬೆನಕೆ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದರು.
ಶಾಸಕ ಅನಿಲ್ ಬೆನಕೆ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಲಿಂಗಾಯತ ಸಮುದಾಯದ ನಾಯಕ ಡಾ.ರವಿ ಪಾಟೀಲ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಬಿಜೆಪಿ ನಾಯಕರ ನಿರ್ಧಾರಕ್ಕೆ ಅನಿಲ್ ಬೆನಕೆ ತೀವ್ರ ಅಸಮಾಧಾನಗೊಂಡಿದ್ದರು. ಆಗ ಬಿಜೆಪಿಯಿಂದ ಟಿಕೆಟ್ ಸಿಗಲಿ, ಬಿಡಲಿ ನಾನು ಈ ಬಾರಿ ಸ್ಪರ್ಧೆ ಮಾಡುತ್ತೇನೆ. ಯಾವ ಪಕ್ಷ ಎಂದು ನಿರ್ಧರಿಸಿಲ್ಲ. ಆದರೆ ಸ್ಪರ್ಧೆಗೆ ತೀರ್ಮಾನ ಮಾಡಿದ್ದೇನೆ. ಕಾಂಗ್ರೆಸ್, ಜೆಡಿಎಸ್ ಸೇರಿ ಹಲವು ಪಕ್ಷಗಳ ಜೊತೆ ಮಾತುಕತೆ ನಡೆದಿದೆ. ಈ ಮಧ್ಯೆಯೇ ಬಿ.ಎಲ್ ಸಂತೋಷ್ ಅವರು ಬೆಂಗಳೂರಿಗೆ ಬರುವಂತೆ ಹೇಳಿದ್ದಾರೆ. ನಾನು ಈಗ ಬೆಂಗಳೂರಿಗೆ ತೆರಳುತ್ತಿದ್ದೇನೆ. ನಮ್ಮ ನಾಯಕರ ಜೊತೆಗೆ ಚರ್ಚಿಸಿ ನನ್ನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.
ಇತ್ತೀಚೆಗೆ ಟಿಕೆಟ್ ವಂಚಿತ ಬಿಜೆಪಿ ಶಾಸಕರು, ಆಕಾಂಕ್ಷಿಗಳೊಂದಿಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ನಡೆಸಬೇಕಿದ್ದ ಸಭೆ ರದ್ದು ಮಾಡಲಾಗಿತ್ತು. ಸಭೆ ನಡೆಯಬೇಕಿದ್ದ ಖಾಸಗಿ ಹೋಟೆಲ್ಗೆ ಶಾಸಕ ಅನಿಲ್ ಬೆನಕೆ ಬೆಂಬಲಿಗರಿಂದ ಮುತ್ತಿಗೆ ಹಾಕಲಾಗಿತ್ತು.












Click it and Unblock the Notifications