ಶ್ರೀಗಳ ಚಿಕಿತ್ಸೆ ಕುರಿತು ಹೇಳಿಕೆ ಕುರಿತು ಕ್ಷಮೆ ಕೇಳಲು ತಯಾರು: ಡಿಕೆಶಿ
ಬೆಳಗಾವಿ, ಡಿಸೆಂಬರ್ 10: ಶ್ರೀಗಳ ಚಿಕಿತ್ಸೆ ನೀಡುವ ಆಸ್ಪತ್ರೆ ಮತ್ತು ವೈದ್ಯರ ವಿಷಯದಲ್ಲಿ ನಾನು ಸರಿಯಾಗಿಯೇ ಮಾತನಾಡಿದ್ದೇನೆ ಆದರೆ ನನ್ನ ಹೇಳಿಕೆಯನ್ನು ಬಿಜೆಪಿ ತಿರುಚಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಲಾ ಆಸ್ಪತ್ರೆಯನ್ನು ಅಲ್ಪಸಂಖಾತರು ನಡೆಸುತ್ತಿದ್ದಾರೆ ಅದು ಅತ್ಯುತ್ತಮ ಆಸ್ಪತ್ರೆ, ಆರೋಗ್ಯ, ಶಿಕ್ಷಣ ಇವಕ್ಕೆಲ್ಲಾ ಜಾತಿ-ಧರ್ಮಗಳಿಲ್ಲ ಎಂಬ ಭಾವದಿಂದ ಆ ಮಾತುಗಳನ್ನು ಹೇಳಿದ್ದೇನೆ ಆದರೆ ಬಿಜೆಪಿ ಯವರು ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದರು.
ನಾನು ಸುಳ್ಳು ಹೇಳಿಲ್ಲ, ದುರುದ್ದೇಶಪೂರ್ವಕವಾಗಿಯೂ ಮಾತನಾಡಿಲ್ಲ, ನಾನು ಯಾರಿಗೂ ನೋವು ಮಾಡಲೆಂದು ಹಾಗೆ ಹೇಳಿಲ್ಲ. ಆದರೂ ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳಲು ಕೂಡಾ ನಾನು ತಯಾರಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಬಿಜೆಪಿ ಮುಖಂಡರು ನನ್ನ ಅಭಿವೃದ್ಧಿ ನೋಡಲಾಗದೆ, ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂಬ ಉದ್ದೇಶದಿಂದ ಬೇಕೆಂದೇ ನನ್ನ ವಿರುದ್ಧ ತಂತ್ರಗಳನ್ನು ಹೂಡುತ್ತಿದ್ದಾರೆ. ಆದರೆ ನಾನು ಅದಕ್ಕೆಲ್ಲಾ ಅಂಜುವನಲ್ಲ ಎಂದು ಅವರ ಆತ್ಮವಿಶ್ವಾಸದಿಂದ ನುಡಿದರು.
ನಾನು ಶಿವಕುಮಾರ ಸ್ವಾಮೀಜಿ ಅವರ ದೊಡ್ಡ ಅಭಿಮಾನಿ, ನನ್ನ ಹೆಸರಿನಲ್ಲೇ ಅವರ ಹೆಸರಿದೆ. ನಾನು ಯಾವುದೇ ಕಾರಣಕ್ಕೂ ಅವರ ಬಗ್ಗೆ ಅಗೌರವವಾಗಿ, ಅವರ ವಿಚಾರದಲ್ಲಿ ನಿರ್ಲಕ್ಷ್ಯದಿಂದ ನಡೆದುಕೊಳ್ಳುವುದಾಗಲಿ ಸಾಧ್ಯವಿಲ್ಲ ಎಂದು ಅವರು ಹೇಳಿದರು.












Click it and Unblock the Notifications