ಗೌರಿ ಹತ್ಯೆ ಆರೋಪಿ ಪರಶುರಾಮ್ ವಾಘ್ಮೋರೆಗೆ ಮೆಡಿಕಲ್ ಟೆಸ್ಟ್
ಬೆಳಗಾವಿ, ಜೂನ್ 21: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಘ್ಮೋರೆಗೆ ನಿನ್ನೆ ತಡ ರಾತ್ರಿ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ.
ಎಸ್ಐಟಿ ತಂಡವು ಹೆಚ್ಚಿನ ವಿಚಾರಣೆಗಾಗಿ ಪರಶುರಾಮ್ನನ್ನು ಬೆಳಗಾವಿಗೆ ಕರೆತಂದಿದ್ದು ಅಲ್ಲಿಯೇ ಜಿಲ್ಲಾ ಆಸ್ಪತ್ರೆಯಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ.
ಗೌರಿ ಹತ್ಯೆಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಆರೋಪಿ ಪರಶುರಾಮ್
ಇತ್ತೀಚೆಗಷ್ಟೆ ಗೌರಿ ಹತ್ಯೆ ಆರೋಪಿಗಳ ಪರ ವಕೀಲರು ಆರೋಪಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅದರಂತೆ ಅವರ ವೈದ್ಯಕೀಯ ತಪಾಸಣೆ ನಡೆಸಲು ಸೂಚಿಸುವಂತೆ ಹೈಕೋರ್ಟ್, ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶಿಸಿತ್ತು ಹಾಗಾಗಿ ಈ ವೈದ್ಯಕೀಯ ತಪಾಸಣೆ ಮಾಡಲಾಗಿದೆ.
ಎಸ್ಐಟಿಯು ಪರಶುರಾಮ್ ವಾಘ್ಮೋರೆಯೇ ಗೌರಿಗೆ ಗುಂಡು ಹೊಡೆದು ಹತ್ಯೆ ಮಾಡಿದ್ದು ಎಂದು ಆರೋಪಿಸಿದ್ದು, ಅದಕ್ಕೆ ಸೂಕ್ತವಾದ ಸಾಕ್ಷ್ಯಗಳನ್ನು ಒಟ್ಟುಗೂಡಿಸುತ್ತಿದೆ.
ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್, 2017ರ ಸೆಪ್ಟರೆಂಬರ್ 5 ರಂದು ರಾಜರಾಜೇಶ್ವರಿ ನಗರದ ತಮ್ಮ ಮನೆಯ ಮುಂದೆಯೇ ಅಪರಿಚಿತರ ಗುಂಡೇಟಿಗೆ ಬಲಿಯಾಗಿದ್ದರು.